ಕರ್ನಾಟಕ

karnataka

By

Published : Jun 7, 2021, 12:29 PM IST

ETV Bharat / state

ಕಲಬೆರಕೆ ಹಾಲು ಹಗರಣ: ಮಂಡ್ಯ ಹಾಲು ಒಕ್ಕೂಟದಿಂದ ಏಳು ಅಧಿಕಾರಿಗಳ ಅಮಾನತು

ಕಲಬೆರಕೆ ಹಾಲು ಹಗರಣ ಬೆಳಕಿಗೆ ಬಂದು ವಾರ ಕಳೆದಿದ್ದರೂ ಸಹ ಪೊಲೀಸರ ತನಿಖೆಯಲ್ಲಿ ಇದುವರೆಗೆ ಯಾವುದೇ ಮಹತ್ವದ ಬೆಳವಣಿಗೆಗಳು ಕಂಡುಬರದಿರುವುದು ಸಾರ್ವಜನಿಕರಿಗೆ ಪೊಲೀಸ್ ತನಿಖೆಯ ಬಗ್ಗೆ ಅನುಮಾನಗಳು ಮೂಡುವಂತೆ ಮಾಡಿದೆ.

ಮಂಡ್ಯ
ಮಂಡ್ಯ

ಮಂಡ್ಯ:ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಕಲಬೆರಕೆ ಹಾಲು ಹಗರಣಕ್ಕೆ ಸಂಬಂಧಿಸಿದಂತೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರನ್ನು ದಿಢೀರ್ ಬದಲಾವಣೆ ಮಾಡಿರುವುದಲ್ಲದೆ, ಏಳು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಅನಾರೋಗ್ಯ ನೆಪದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಾ.ಎ.ಆರ್.ಚಂದ್ರಶೇಖರ್ ಮೈಸೂರು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಾನಕ್ಕೆ ಮೈಸೂರಿನ ಹಾಲು ಒಕ್ಕೂಟದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಿ.ಅಶೋಕ್ ನೇಮಕಗೊಂಡು ಅಧಿಕಾರ ಸ್ವೀಕರಿಸಿದ್ದಾರೆ.

ಏಳು ಜನರು ಅಮಾನತು:

ಕಲಬೆರಕೆ ಹಾಲು ಹಗರಣ ಸಂಬಂಧ ಮದ್ದೂರು ಉಪಕಚೇರಿಯ ಉಪ ವ್ಯವಸ್ಥಾಪಕರಾದ ಮರಿರಾಚಯ್ಯ, ಭರತ್‌ರಾಜ್, ರಾಮಕೃಷ್ಣಯ್ಯ, ವಿಸ್ತರಣಾಧಿಕಾರಿಗಳಾದ ಮಧುಕುಮಾರ್, ರಮೇಶ್ ಕುಮಾರ್‌, ಟ್ರಾನ್ಸ್‌ಪೋರ್ಟ್ ವಿಭಾಗದ ಡಾ. ವೆಂಕಟೇಶ್‌ ಸೇರಿದಂತೆ ಏಳು ಅಧಿಕಾರಿಗಳನ್ನು ಅಮಾನತುಗೊಳಿಸಿ ಕೆಎಂಎಫ್ ಆದೇಶ ಹೊರಡಿಸಿದೆ.

ಕಲಬೆರಕೆ ಹಾಲು ಹಗರಣದ ಬಗ್ಗೆ ಕೆಎಂಎಫ್‌ನಿಂದ ಆಗಮಿಸಿದ್ದ ಅಧಿಕಾರಿಗಳ ತಂಡ ನಡೆಸಿದ ಆಂತರಿಕ ತನಿಖೆ ಆಧರಿಸಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಅಧಿಕಾರಿಗಳನ್ನು ಕರ್ತವ್ಯ ಲೋಪವೆಸಗಿದರೆಂಬ ಆರೋಪದ ಮೇಲೆ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ. ಇದರಿಂದ ಕಲಬೆರಕೆ ಹಾಲು ಹಗರಣದ ಹಿಂದೆ ಒಕ್ಕೂಟದ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

ನಾಗಮಂಗಲ ಡಿವೈಎಸ್‌ಪಿ ನವೀನ್‌ಕುಮಾರ್‌ ನೇತೃತ್ವದಲ್ಲಿ ಕಲಬೆರಕೆ ಹಾಲು ಹಗರಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪಡೆದ ಗುತ್ತಿಗೆದಾರರು ಸೇರಿದಂತೆ ಒಕ್ಕೂಟದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತನಿಖೆ ನಡೆಸಿದ್ದರೆ, ಮತ್ತೊಂದೆಡೆ ಕೆಎಂಎಫ್ ಅಧಿಕಾರಿಗಳ ತಂಡ ನಡೆಸಿದ ಪ್ರಾಥಮಿಕ ತನಿಖೆಯನ್ವಯ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಏಳು ಮಂದಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿರುವುದು ಪೊಲೀಸರ ತನಿಖೆಗಿಂತಲೂ ಕೆಎಂಎಫ್ ಅಧಿಕಾರಿಗಳ ತಂಡ ನಡೆಸುತ್ತಿರುವ ತನಿಖೆ ಚುರುಕಾಗಿರುವಂತೆ ಕಂಡುಬರುತ್ತಿದೆ.

ಆಮೆಗತಿಯಲ್ಲಿ ಖಾಕಿಪಡೆ:

ಕಲಬೆರಕೆ ಹಾಲು ಹಗರಣ ಬೆಳಕಿಗೆ ಬಂದು ವಾರ ಕಳೆದಿದ್ದರೂ ಸಹ ಪೊಲೀಸರ ತನಿಖೆಯಲ್ಲಿ ಇದುವರೆಗೆ ಯಾವುದೇ ಮಹತ್ವದ ಬೆಳವಣಿಗೆಗಳು ಕಂಡುಬರದಿರುವುದು ಸಾರ್ವಜನಿಕರಿಗೆ ಪೊಲೀಸ್ ತನಿಖೆಯ ಬಗ್ಗೆ ಅನುಮಾನಗಳು ಮೂಡುವಂತೆ ಮಾಡಿದೆ. ಹಗರಣದ ಪ್ರಮುಖ ಆರೋಪಿಗಳಾದ ಚನ್ನಪಟ್ಟಣ ತಾಲೂಕು ಮುದಗೆರೆಯ ಪಿ.ರಾಜು ಹಾಗೂ ಮದ್ದೂರು ತಾಲೂಕು ಕೋಣಸಾಲೆಯ ರಂಜನ್‌ಕುಮಾರ್‌ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಇವರನ್ನು ಪತ್ತೆಹಚ್ಚುವಲ್ಲಿಯೂ ಪೊಲೀಸರು ವಿಫಲರಾಗಿದ್ದಾರೆ.

ಇದನ್ನೂ ಓದಿ:15 ದಿನಗಳ ಅಂತರದಲ್ಲೇ 2ನೇ ಗ್ರಹಣ: ಇದು ಜಗತ್ತಿಗೆ ಹಾನಿಕಾರಕ

ABOUT THE AUTHOR

...view details