ಮಂಡ್ಯ: ಸರಕು ಸಾಗಾಣೆ ವಾಹನದಲ್ಲಿ ಜನರ ಪ್ರಯಾಣವನ್ನು ನಿಷೇಧಿಸಿರುವ ಸರ್ಕಾರ, ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿತ್ತು. ಆದರೆ, ಸಕ್ಕರೆ ಜಿಲ್ಲೆಯ ವಾಹನ ಸವಾರರು ಈ ಎಚ್ಚರಿಕೆಯ ಕರೆಗಂಟೆಗೆ ಕ್ಯಾರೇ ಎನ್ನುತ್ತಿಲ್ಲ.
ಸಾರಿಗೆ ಸಚಿವರೇ ಇತ್ತ ನೋಡಿ! ಲಾರಿಯಲ್ಲಿ ಮದುವೆ ದಿಬ್ಬಣ! ನಿಯಮಕ್ಕಿಲ್ವಾ ಕಿಮ್ಮತ್ತು? - Kannada news
ಸರಕು ಸಾಗಾಣೆ ವಾಹನದಲ್ಲಿ ಜನರ ಪ್ರಯಾಣದ ನಿಷೇಧದ ನಡುವೆಯೂ ಖಾಸಗಿ ವಾಹನ ಚಾಲಕರು ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ. ಇತ್ತ ಅಧಿಕಾರಿಗಳು ಶಿಸ್ತಿನ ಕ್ರಮ ಕೈಗೊಳ್ಳದೆ ಕೇವಲ ದಂಡ ಕಟ್ಟಿಸಿ ಬಿಡುತ್ತಿದ್ದಾರೆ.

ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ತವರೂರಾದ ಮದ್ದೂರು ಪಟ್ಟಣದಲ್ಲಿಂದು ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದರು. ಚಾಲಕರ ಚಾಲನಾ ಪರವಾನಗಿ, ವಿಮೆ ಸೇರಿದಂತೆ ಹಲವು ದಾಖಲೆಗಳನ್ನ ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಲಾರಿಯೊಂದು ಮದುವೆ ದಿಬ್ಬಣಕ್ಕೆ ಹೊರಟಿತ್ತು. ಈ ವೇಳೆ ಲಾರಿ ತಡೆದ ಪೊಲೀಸರು ದಂಡವನ್ನಷ್ಟೇ ಕಟ್ಟಿಸಿಕೊಂಡು ಹಾಗೇನೇ ಬಿಟ್ಟು ಕಳುಹಿಸಿದ್ದಾರೆ.
ರಾಜ್ಯ ಸರ್ಕಾರ ಸರಕು ಸಾಗಾಣಿಕೆ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಬಾರದು ಎಂದು ಸೂಚನೆ ನೀಡಿದೆ. ಆದರೂ ಅಧಿಕಾರಿಗಳು ಈ ನಿಯಮವನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ಎಷ್ಟೋ ವಾಹನಗಳಲ್ಲಿ ಜನರನ್ನು ಸಾಗಾಣಿಕೆ ಮಾಡುತ್ತಿದ್ದರೂ ಶಿಸ್ತು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.