ಅಭ್ಯರ್ಥಿಗಳು ಒಳ್ಳೆಯವರಲ್ಲ ಎಂದಾದರೆ ನೋಟಾಕ್ಕೆ ಮತ ಹಾಕಿ: ಎನ್ ಸಂತೋಷ್ ಹೆಗ್ಡೆ ಮಂಡ್ಯ:ಪ್ರಜಾಪ್ರಭುತ್ವದಲ್ಲಿ ರಾಜಕೀಯದ ಅಗತ್ಯತೆ ಬಹಳಷ್ಟು ಇದೆ. ಅದರೆ ರಾಜಕೀಯ ವೃತ್ತಿಯಾಗಬಾರದು, ಸೇವೆಯಾಗಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು. ಕನ್ನಡ ಸೇನೆ ಕರ್ನಾಟಕ ವತಿಯಿಂದ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಪ್ರಸ್ತುತ ರಾಜಕೀಯದಲ್ಲಿ ಯುವಜನರ ಪಾತ್ರ ಕುರಿತ ವಿಚಾರಣ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಎಸಿಬಿಯನ್ನು ಜಾರಿಗೆ ತಂದು ಲೋಕಾಯುಕ್ತಕ್ಕೆ ಇದ್ದ ಎರಡು ಅಧಿಕಾರಗಳಲ್ಲಿ ಒಂದು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಅಧಿಕಾರವನ್ನು ಕಿತ್ತುಕೊಂಡು ಬಿಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.
ಆಗ ವಿರೋಧ ಪಕ್ಷದಲ್ಲಿದ್ದರು ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಸಿಬಿಯನ್ನು ಬಂದ್ ಮಾಡುತ್ತೇವೆ ಎಂದು ಹೇಳುತ್ತಾರೆ. ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೂ ಎಸಿಬಿಯನ್ನು ರದ್ದು ಮಾಡುವುದಾಗಿ ಹೇಳಿದ್ದರು. ಅವರು ಅಧಿಕಾರಕ್ಕೆ ಬರುತ್ತಾರೆ, ಅಧಿಕಾರಕ್ಕೆ ಬಂದು 24 ತಿಂಗಳು ಸಿಎಂ ಆಗಿ ಅಧಿಕಾರ ನಡೆಸಿದರೂ ಬಂದ್ ಮಾಡಲಿಲ್ಲ. ಕೊನೆಗೆ ನ್ಯಾಯಾಲಯವೇ ಎಸಿಬಿಯನ್ನು ರದ್ದು ಮಾಡುತ್ತದೆ. ಅವಾಗ ಅಂದು ಮುಖ್ಯಮಂತ್ರಿಯಾಗಿದ್ದರು ಹೇಳುತ್ತಾರೆ ನಾವು ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಟ್ಟೆವು ಎಂದು. ಇದು ರಾಜಕೀಯನಾ ಎಂದು ಪ್ರಶ್ನಿಸಿದ ಸಂತೋಷ್ ಹೆಗ್ಡೆ, ಇದು ಮತದಾರರನ್ನು ಮಂಕು ಮಾಡುವ ಪ್ರಯತ್ನವಾಗಿದೆ ಎಂದು ಟೀಕಿಸಿದರು.
ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದರೆ ನಮ್ಮಿಂದ ಮಾತ್ರ ಸಾಧ್ಯ. ಮತದಾರರು ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಕ್ಷೇತ್ರಕ್ಕೆ ನಿಂತ ವ್ಯಕ್ತಿ ನಮ್ಮ ಹಿತ ಕಾಪಾಡುತ್ತಾನೋ ಇಲ್ಲವೋ ಎಂಬುದನ್ನು ನೋಡಬೇಕು. ಆಗ ಮಾತ್ರ ಆ ವ್ಯಕ್ತಿಗೆ ವೋಟು ಹಾಕಬೇಕು. ಯಾರೂ ಒಳ್ಳೆಯವರಲ್ಲ ಎಂದಾದರೆ ನೋಟಾಕ್ಕೆ ಮತ ಹಾಕಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳು ಬಹಳಷ್ಟು ಹೆಚ್ಚಾಗಬೇಕು ಎಂದು ಹೇಳಿದರು.
ಜನರಲ್ಲಿ ದೇಶದ ಸೇವೆ ಮಾಡುವಂತಹ ಭಾವನೆ ಮೂಡಿಸುವಂತಹ ಕಾರ್ಯಕ್ರಮ ಬರಬೇಕು. ರಾಜಕೀಯದಲ್ಲಿ ಬರೀ ಹಣ ಮಾಡುವುದು, ಅಧಿಕಾರ ಚಲಾಯಿಸುವುದಕ್ಕೆ ಬರುವುದು ಆಗಬಾರದು. ನಮ್ಮ ಪ್ರತಿನಿಧಿಗಳು ಜನರ ಸೇವೆ ಮಾಡುವಂತವರಾಗಬೇಕು. ನಮಗೂ ಅವರಿಗೂ ಒಂದೇ ಕಾನೂನು ಎಂಬುದನ್ನು ಅರಿತು ನಡೆಯುವವರನ್ನು ಬೆಂಬಲಿಸಬೇಕು. ಒಬ್ಬ ಸಾರ್ವಜನಿಕ ಹೋಗುತ್ತಿರುವಾಗ ಅವನನ್ನು ನಿಲ್ಲಿಸಿ ಝೀರೋ ಟ್ರಾಫಿಕ್ ಮಾಡಿ ನಮ್ಮ ನಾಯಕರನ್ನು ಹೋಗಲು ಬಿಡುವಂತ ರಾಜಕೀಯ ಈ ದೇಶದಲ್ಲಿ ಇರಬಾರದು ಎಂದರು.
ತೃಪ್ತಿ ಇಲ್ಲದಿದ್ದರೆ ದುರಾಸೆ ತಪ್ಪಿದ್ದಲ್ಲ. ಅದಕ್ಕೆ ಮದ್ದೂ ಇಲ್ಲ. ಎಷ್ಟು ಮಾಡಿದರೂ ಸಾಲಲ್ಲ ಎಂಬ ಧೋರಣೆ ನಮ್ಮ ದೇಶದಲ್ಲಿ ಬಹಳಷ್ಟು ಆಗಿದೆ. ಶೇಕಡಾ 40ಪರ್ಸೆಂಟ್ ಎಂದು ಆರೋಪ ಮಾಡುತ್ತಿದ್ದರು. ನೀವೆಷ್ಟು ಹಣ ಹೊಡೆಯುತ್ತೀದ್ದೀರಿ ಎಂದರೆ ನಾವು ಕೇವಲ ಶೇಕಡಾ 10 ಪೆರ್ಸೆಂಟ್ ಮಾತ್ರ ಎನ್ನುತ್ತಾರೆ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎಂದು ಎಲ್ಲರಿಗೂ ತಿಳಿದಿಲ್ಲವೇ ಎಂದು ಪರೋಕ್ಷವಾಗಿ ರಾಜಕೀಯ ಪಕ್ಷಗಳಿಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಚಾಟಿ ಬೀಸಿದರು.
ಬಳಿಕ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಇವತ್ತಿನ ರಾಜಕೀಯ ಪರಿಸ್ಥಿತಿ ಖಂಡಿತ ಬದಲಾಗಬೇಕು. ಜನತಾ ಸೇವೆ ಎನ್ನುವ ಭಾವನೆ ಎಲ್ಲರಲ್ಲಿಯೂ ಬರಬೇಕು. ಜನಪ್ರತಿನಿಧಿಗಳಲ್ಲಿ ಹುದ್ದೆಯ ಲಾಭಕ್ಕಿಂತ ಸೇವೆ ಮಾಡುವ ವಿಚಾರ ಮೂಡಬೇಕು. ರಾಜ್ಯ ಸರ್ಕಾರದಿಂದ ಫ್ರೀ ಗ್ಯಾರಂಟಿ ಯೋಜನೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಉಚಿತ ಯೋಜನೆಗಳ ಪರಿಣಾಮ ಇನ್ನಾರು ತಿಂಗಳಲ್ಲಿ ತಿಳಿಯುತ್ತದೆ. ಮಹಿಳೆಯರು ಫ್ರೀ ಬಸ್ ನಲ್ಲಿ ಹೋಗುತ್ತಿದ್ದರೆ, ಗಂಡಸರು ಮತ್ತೊಂದು ಬಸ್ನಲ್ಲಿ ಹೋಗುತ್ತಿದ್ದಾರೆ. ಎರಡು ಸಾವಿರ ರೂಪಾಯಿ ಹಣದ ನೆರವು ನೀಡುವುದರಿಂದ ಅತ್ತೆ-ಸೊಸೆ ನಡುವೆ ಜಗಳ ಆಗಬಹುದು ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ:CM Siddaramaiah: ನಾನು 12 ಬಾರಿ ಚಾಮರಾಜನಗರಕ್ಕೆ ಹೋಗಿ ಎರಡನೇ ಬಾರಿ ಮುಖ್ಯಮಂತ್ರಿಯಾದೆ: ಸಿಎಂ ಸಿದ್ದರಾಮಯ್ಯ