ಮಂಡ್ಯ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 72ನೇ ಗಣರಾಜ್ಯೋತ್ಸವ ಆಚರಣೆ ಅದ್ಧೂರಿಯಾಗಿ ನಡೆಯಿತು.
ಜಿಲ್ಲಾಡಳಿತದ ವತಿಯಿಂದ ನಡೆದ 72ನೇ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದ್ದು, ನಂತರ ನಾಡಗೀತೆ ಹಾಗೂ ರೈತ ಗೀತೆಗೆ ಗೌರವ ಸಲ್ಲಿಸಲಾಯಿತು.
ಧ್ವಜಾರೋಹಣ ಬಳಿಕ 18 ತುಕಡಿಗಳ ಪರಿವೀಕ್ಷಣೆ ಮಾಡಿ, ಪಥಸಂಚಲನದ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಮಾತನಾಡಿದ ಸಚಿವರು, ಸಮಸ್ತ ನಾಗರಿಕರಿಗೆ 72ನೇ ಗಣರಾಜ್ಯೋತ್ಸವದ ಶುಭಾಶಯಗಳು. ನಮ್ಮೆಲ್ಲರಿಗೆ ಇದೊಂದು ವಿಶೇಷ ದಿನವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಹಾನ್ ವ್ಯಕ್ತಿಗಳು ಭಾಗಿಯಾಗಿದ್ದಾರೆ, ಅವರನ್ನು ನಾವೆಲ್ಲರೂ ನೆನೆಯಬೇಕು ಎಂದರು.
ಮಂಡ್ಯದಲ್ಲಿ ನಡೆದ ಅದ್ಧೂರಿ ಗಣರಾಜ್ಯೋತ್ಸವ ಮುಖ್ಯಮಂತ್ರಿ ಯಡಿಯೂರಪ್ಪನವರು ನನಗೆ ಹೊಸ ಜವಾಬ್ದಾರಿ ನೀಡಿದ್ದಾರೆ. ನನಗೆ ನೀಡಿರುವ ಖಾತೆಯಲ್ಲಿ ಕೆಲಸ ಮಾಡಲು ಬದ್ಧನಾಗಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮೀಸುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು.
ಕೊರೊನಾ ಪರಿಣಾಮವಾಗಿ ನಷ್ಟದಲ್ಲಿದ್ದ ಹೂವು ಬೆಳೆಗಾರರಿಗೆ ಪರಿಹಾರ ನೀಡಲಾಗಿದೆ. ರೇಷ್ಮೆಗೆ 50 ರೂ. ಬೆಂಬಲ ಬೆಲೆ ನೀಡಿದ್ದೇವೆ. ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಹಲವು ಯೋಜನೆಗಳು ಎಲ್ಲಾ ಫಲನುಭಾವಿಗಳಿಗೆ ತಲುಪಿದೆ. ನಮ್ಮ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ ಎಂದರು.
ಅರಿವು ಮೂಡಿಸುವ ಸ್ಥಬ್ಧಚಿತ್ರಗಳ ಪ್ರದರ್ಶನ:
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಕ್ಕಿ ಜ್ವರದ ಭೀತಿ ಬೇಡ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ಹಾಗೂ ವನ್ಯ ಜೀವಿ ಸಂರಕ್ಷಣೆ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಜಿಲ್ಲಾ ಪಂಚಾಯತಿ ಮತದಾರರ ಪ್ರತಿಜ್ಞಾ ವಿಧಿ, ಕೃಷಿ ಇಲಾಖೆಯ ನೀರಿನ ಸದ್ಬಳಕೆಯೇ ನೀರಿನ ಉಳಿತಾಯ, ತೋಟಗಾರಿಕೆ ಇಲಾಖೆ ಉಪಯೋಗ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಅರಿವು ಮೂಡಿಸುವ ಸ್ತಬ್ಧಚಿತ್ರಗಳನ್ನು ಕಾರ್ಯಕ್ರಮದ ವೇಳೆ ಪ್ರದರ್ಶಿಸಲಾಯಿತು. ನಂತರ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.