ಕರ್ನಾಟಕ

karnataka

ETV Bharat / state

ವೈದ್ಯ ನಟರಾಜ್ ಆತ್ಮಹತ್ಯೆ ಪ್ರಕರಣ: ಮಂಡ್ಯ ಡಿಹೆಚ್​ಒ ಸ್ಪಷ್ಟನೆ

ಮಂಡ್ಯ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಂಡ್ಯ ಜಿಲ್ಲಾ ಡಿಹೆಚ್​ಒ ಡಾ. ಮೋಹನ್ ಸ್ಪಷ್ಟನೆ ನೀಡಿದ್ದಾರೆ.

By ETV Bharat Karnataka Team

Published : Dec 2, 2023, 9:24 PM IST

mandya-health-dept-officer-suicide-case-dho-clarification
ವೈದ್ಯ ನಟರಾಜ್ ಆತ್ಮಹತ್ಯೆ ಪ್ರಕರಣ : ಮಂಡ್ಯ ಡಿಹೆಚ್​ಓ ಸ್ಪಷ್ಟನೆ

ವೈದ್ಯ ನಟರಾಜ್ ಆತ್ಮಹತ್ಯೆ ಪ್ರಕರಣ : ಮಂಡ್ಯ ಡಿಹೆಚ್​ಓ ಸ್ಪಷ್ಟನೆ

ಮಂಡ್ಯ :ಮಂಡ್ಯದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಡಾ.ನಟರಾಜ್ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆತ್ಮಹತ್ಯೆಗೆ ಮೇಲಧಿಕಾರಿಗಳ ಕಿರುಕುಳ ಕಾರಣ ಎಂದು ಆರೋಪ ಕೇಳಿಬಂದಿತ್ತು. ಈ ಸಂಬಂಧ ಮಂಡ್ಯ ಡಿಹೆಚ್‌ಒ ಡಾ. ಮೋಹನ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಮೋಹನ್​ ಅವರು, ಡಾ. ನಟರಾಜ್ ಕುಣಿಗಲ್ ತಾಲೂಕಿನ ಚೌಡನಕುಪ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮಂಡ್ಯದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಆಗಿದೆ. ಆದರೆ, ಇವರು ಕೆಲಸ ಮಾಡಿರುವುದು ಎರಡು ತಿಂಗಳು ಮಾತ್ರ. ಇದರಲ್ಲೂ ಆರೋಗ್ಯ ಸಮಸ್ಯೆ ಎಂದು 30 ದಿನಗಳ ಕಾಲ ರಜೆ ಹಾಕಿದ್ದರು. ಕೌಟುಂಬಿಕ ಕಲಹದಿಂದಾಗಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಹೆಚ್ಚಿನ ಕಾರ್ಯ ಒತ್ತಡವನ್ನು ನೀಡುತ್ತಿರಲಿಲ್ಲ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಟರಾಜ್ ಈ ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಿದರು.

ಕಳೆದ ನವೆಂಬರ್ 11ರಂದು ಕೌಟುಂಬಿಕ ಕಲಹ ಹಾಗೂ ಅನಾರೋಗ್ಯದಿಂದ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೊದಲು ಇದ್ದ ಚೌಡನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಯಾಗಿ ನೇಮಕ ಮಾಡುವಂತೆ ಸಚಿವ ಚಲುವರಾಯಸ್ವಾಮಿ ಹಾಗೂ ಡಿಹೆಚ್‌ಒಗೆ ನಟರಾಜ್ ಪತ್ರ ಬರೆದ್ದರು. ಇವರ ಸಾವಿಗೆ ಇವರ ಕೌಟುಂಬಿಕ ಕಲಹದಿಂದ ಉಂಟಾದ ಮಾನಸಿಕ ಖಿನ್ನತೆಯೇ ಕಾರಣ. ಈ ಆತ್ಮಹತ್ಯೆಗೂ ನಮಗೂ ಯಾವುದೇ ಸಂಬಂಧ ಇಲ್ಲ. ನನ್ನ ವಿರುದ್ದ ಷಡ್ಯಂತ್ರ ಮಾಡಿದ್ದಾರೆ ಎಂದು ಡಾ.ಮೋಹನ್ ಸ್ಪಷ್ಟನೆ ನೀಡಿದ್ದಾರೆ.

ಮಂಡ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ನಟರಾಜ್​ ಅವರು ಶನಿವಾರ ಬೆಳಗ್ಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದರು. ಕಳೆದ ಒಂದು ತಿಂಗಳಿನಿಂದ ರಜೆಯಲ್ಲಿದ್ದ ಕುಣಿಗಲ್ ಮೂಲದ ಅಧಿಕಾರಿ ನಟರಾಜ್ ಅವರು, ಇಂದು ಡ್ಯೂಟಿಗೆ ತೆರಳಬೇಕಿತ್ತು.

ಕಳೆದ ಮೂರು ತಿಂಗಳ ಹಿಂದೆ ನಟರಾಜ್​ ಮಂಡ್ಯಕ್ಕೆ ವರ್ಗಾವಣೆಗೊಂಡಿದ್ದರು. ಆರೋಗ್ಯದ ಸಮಸ್ಯೆ ಹಿನ್ನೆಲೆ ನಟರಾಜ್ ರಜೆ ಪಡೆದುಕೊಂಡಿದ್ದರು. ಮೃತ ನಟರಾಜ್​ ಮಗಳು, ಪತ್ನಿಯನ್ನು ಅಗಲಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಟರಾಜ್ ಅವರು, 2017ರಲ್ಲಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಮೃತರ ಮನೆಯಲ್ಲಿ ಯಾವುದೇ ಡೆತ್​ನೋಟ್ ಪತ್ತೆಯಾಗಿಲ್ಲ. ಮೃತದೇಹವನ್ನು ಕುಟುಂಬಸ್ಥರು ಕುಣಿಗಲ್​ಗೆ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ :ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಆತ್ಮಹತ್ಯೆಗೆ ಶರಣು

ABOUT THE AUTHOR

...view details