ಕರ್ನಾಟಕ

karnataka

By

Published : Apr 20, 2023, 10:58 PM IST

ETV Bharat / state

ಮಂಡ್ಯದಲ್ಲಿ ಕೈ ಅಭ್ಯರ್ಥಿ ಪರ ಪ್ರಚಾರ: ಪರೋಕ್ಷವಾಗಿ ಸಿಎಂ ಆಸೆ ವ್ಯಕ್ತಪಡಿಸಿದ ಡಿಕೆಶಿ

ಮಂಡ್ಯದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗಾಣಿಗ ರವಿಕುಮಾರ್​ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದರು.

mandy-dk-shivakumar-election-campaign
ಮಂಡ್ಯದಲ್ಲಿ ಕೈ ಅಭ್ಯರ್ಥಿ ಪರ ಪ್ರಚಾರ : ಪರೋಕ್ಷವಾಗಿ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಷಣ

ಮಂಡ್ಯ : ಕಾಂಗ್ರೆಸ್ ಅಭ್ಯರ್ಥಿ ಗಾಣಿಗ ರವಿಕುಮಾರ್ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಈ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್​ನಲ್ಲಿ ನಡೆದ ಬೃಹತ್ ಸಭೆಯಲ್ಲಿ ಭಾಗವಹಿಸಿ ಕೈ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಈ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್​, ಜೆಡಿಎಸ್ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸ್ಥಳೀಯ ನಾಯಕರನ್ನು ಪಕ್ಷದ ಶಾಲು ಹಾಕಿ ಸ್ವಾಗತಿಸಿದರು.

ಬಳಿಕ ಮಾತನಾಡಿದ ಡಿಕೆ ಶಿವಕುಮಾರ್​,ಕಾಂಗ್ರೆಸ್ ಶಕ್ತಿಯೆ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ. ಕಳೆದ ಚುನಾವಣೆಯಲ್ಲಿ ಗಣಿಗ ರವಿಕುಮಾರ್ ಕಡಿಮೆ ಅಂತರದಲ್ಲಿ ಸೋತಿದ್ದರು. ಎಲ್ಲ ಸಂದರ್ಭದಲ್ಲಿ ಶಕ್ತಿ ಮೀರಿ ಪ್ರಾಮಾಣಿಕ ಸೇವೆ ಮಾಡಿದ್ದಾರೆ. ಈ ಬಾರಿ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.ಮಂಡ್ಯದಲ್ಲಿ 16 ಮಂದಿ ಟಿಕೆಟ್ ಗೆ ಅರ್ಜಿ ಹಾಕಿದ್ದರು. ಡಾ.ಕೃಷ್ಣ ಪಕ್ಷೇತರವಾಗಿ ಅರ್ಜಿ ಹಾಕಿದ್ದಾರೆ. ಟಿಕೆಟ್ ಸಿಗದಿದ್ದಕ್ಕೆ ನೋವು ಆಗುತ್ತದೆ. ಆದರೆ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವುದು ಇಲ್ಲಿನ ಅಭ್ಯರ್ಥಿ ಮೇಲೆ ನಿಂತಿದೆ ಎಂದರು.

ಮೈಸೂರು ಹೆದ್ದಾರಿಯಿಂದ ಇಲ್ಲಿನ ವ್ಯಾಪಾರ ವಹಿವಾಟಿಗೆ ಪೆಟ್ಟು ಬಿತ್ತು. ಈ ಬಗ್ಗೆ ಯಾರೂ ಧ್ವನಿ ಎತ್ತಲಿಲ್ಲ. ರಸ್ತೆ ವಿಚಾರದಲ್ಲಿ ಸದನದಲ್ಲಿ ಯಾರಾದರೂ ಮಾತನಾಡಿದ್ರಾ?. ಅಮಿತ್ ಶಾ ಮಂಡ್ಯದಲ್ಲಿ ಅಮುಲ್ ಜೊತೆಗೆ ನಂದಿನಿ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾರೆ. ಅದು ಹೇಗೆ ತೆಗೆದುಕೊಂಡು ಹೋಗ್ತೀರಿ ಎಂದು ಡಿಕೆಶಿ ಹೇಳಿದರು.

ಮೇ 10 ಪ್ರಜಾಪ್ರಭುತ್ವದ ಹಬ್ಬ. ರಾಜ್ಯವನ್ನು ಬದಲಾವಣೆ ಮಾಡುವ ದಿನ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಡ್ ಪಡೆಯಲು ಅವಕಾಶವಿರುವ ದಿನ. ಈ ರಾಜ್ಯದಲ್ಲಿ ಬಿಜೆಪಿ ಆಡಳಿತ ಹೋಗಬೇಕು. ಜಗದೀಶ್ ಶೆಟ್ಟರ್, ಸವದಿ ಮುಂತಾದವರು ಕಾಂಗ್ರೆಸ್ ಗೆ ಬಂದಿದ್ದಾರೆ. ಇನ್ನು ಕೆಲವರು ಬರುತ್ತಿದ್ದು ನಾವೇ ಬೇಡ ಎಂದಿದ್ದೇವೆ. ಬಿಜೆಪಿಯವರು ಐಟಿ, ಇಡಿ ದಾಳಿ ನಡೆಸುವ ಮೂಲಕ ನನ್ನ ಒಳಗೆ ಜೈಲಿಗೆ ಹಾಕಲು ಪ್ರಯತ್ನ ಪಟ್ಟರು. ರಾಹುಲ್ ಗಾಂಧಿ ಅವರನ್ನೇ ಬಿಡಲಿಲ್ಲ. ಇನ್ನು ನನ್ನನ್ನು ಬಿಡ್ತಾರಾ ?. ಬಿಜೆಪಿಯವರು‌ ಏನೇ ಮಾಡಿದರೂ ನಾನಂತೂ ಶರಣಾಗತಿ ಆಗಲ್ಲ ಎಂದರು.

ಮಂಡ್ಯದಲ್ಲಿ ಯಾರು ಇಲ್ಲ ಎಂದು ಮೇಲುಕೋಟೆಯಿಂದ ಅಭ್ಯರ್ಥಿಯನ್ನು ಕರೆದುಕೊಂಡು ಬಂದಿದ್ದಾರೆ. ನೀವೆಲ್ಲ ನಿಮ್ಮ ಮನೆ ಮಗ ರವಿಕುಮಾರ್ ಅವರನ್ನು ಆಯ್ಕೆ ಮಾಡಿ. ಇಲ್ಲಿ ಅಭ್ಯರ್ಥಿ ರವಿಕುಮಾರ್ ಅಲ್ಲ, ಡಿ.ಕೆ.ಶಿವಕುಮಾರ್. ನನ್ನನ್ನು ವಿಧಾನಸೌಧದಲ್ಲಿ ಕೂರಿಸಬೇಕು ಎಂಬ ಆಸೆ ಇದೆ ತಾನೇ. ಮಂಡ್ಯದಲ್ಲಿ ಏಳಕ್ಕೆ ಏಳು ಸ್ಥಾನ ಗೆಲ್ಲಿಸಿ ಎಂದು ಹೇಳಿದರು.

ನನಗೆ ತೊಂದರೆ ಕೊಡುವುದು ಅವರ ಗುರಿ :ನಾನುನ್ಯಾಯಾಲಯದ ತೀರ್ಪನ್ನು ಪ್ರಶ್ನೆ ಮಾಡಲ್ಲ. ಇನ್ನು ಬೇಕಾದಷ್ಟು ಅಪೀಲ್ ಗಳು ಇದೆ. ಡಬಲ್ ಬೆಂಚ್‌ ಇದೆ, ಸುಪ್ರೀಂ ಕೋರ್ಟ್‌ ಇದೆ. ನನ್ನ ಎಲ್ಲಾ ದಾಖಲೆಗಳು ಸರಿಯಾಗಿದೆ. ಅಡ್ವೋಕೇಟ್ ಜನರಲ್ ಆದೇಶ ಮಾಡಲು ಅವಕಾಶ ಇಲ್ಲ ಎಂದು ಹೇಳಿದ್ದರು. ನನಗೆ ತೊಂದರೆ ಕೊಡುವುದು ಅವರ ಗುರಿ. ನನಗೆ ಏನಾದರೂ ಮಾಡಿ ತೊಂದರೆ ಕೊಡಲು ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದರು.

ನ್ಯಾಯಾಲಯ‌ ನ್ಯಾಯ ಕೊಡುವ ನಂಬಿಕೆ‌ ಇದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನೆ ಬಿಟ್ಟಿಲ್ಲ, ನನ್ನ ಬಿಡ್ತಾರ.? ನಾನು ಯಾವದಕ್ಕೂ ಹೆದರುವುದಿಲ್ಲ, ಎಲ್ಲವನ್ನು ಎದುರಿಸುತ್ತೇನೆ. ಆ ಶಕ್ತಿಯನ್ನು ಭಗವಂತ, ಜನರು ನನಗೆ ಕೊಟ್ಟಿದ್ದಾರೆ. ತೊಂದರೆ ಕೊಡಲು ಪ್ರಯತ್ನ ಮಾಡುತ್ತಿರುವವರಿಗೆ ಒಳ್ಳೆಯದಾಗಲಿ ಎಂದರು.

ಇದನ್ನೂ ಓದಿ :'ಚು.ಆಯೋಗದ ಮೇಲೆ ನಂಬಿಕೆಯಿಲ್ಲದೇ ಸಹೋದರನಿಂದಲೇ ಡಿಕೆಶಿ ನಾಮಪತ್ರ ಸಲ್ಲಿಕೆ'

ABOUT THE AUTHOR

...view details