ಮಂಡ್ಯ:23ನೇ ಜೈನ ತೀರ್ಥಂಕರ ಪಾರ್ಶ್ವನಾಥರದ್ದು ಎನ್ನಲಾದ ಪ್ರಾಚೀನ ಜಿನ ಮೂರ್ತಿಯೊಂದು ಕೆ.ಆರ್.ಪೇಟೆ ತಾಲೂಕಿನ ಜಾಗಿನಕೆರೆ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ದೊರೆತಿದೆ.
ಸಾಕಷ್ಟು ಶಿಥಿಲಗೊಂಡಿರುವ ಸುಮಾರು 5.5 ಅಡಿ ಎತ್ತರವಿರುವ ವಿಗ್ರಹ ಇದಾಗಿದ್ದು, ವಿಗ್ರಹದ ಪಾದ ಪೀಠದಲ್ಲಿನ ಬರಹಗಳು ಸಂಪೂರ್ಣ ಮಾಸಿದ್ದು, ಬರಹದ ಕುರುಹುಗಳಷ್ಟೇ ಕಾಣುತ್ತಿವೆ. ಖಡ್ಡಾಸನ ಭಂಗಿಯಲ್ಲಿರುವ ತೀರ್ಥಂಕರ ಮೂರ್ತಿ ತಪಸ್ಸು ಮಾಡುವ ಭಂಗಿಯಲ್ಲಿದೆ. ಮೂರ್ತಿಯ ಶಿರದ ಹಿಂಬದಿಯಲ್ಲಿ ಪ್ರಭಾಮಂಡಲ ಮತ್ತು ಶಿರದ ಮೇಲ್ಭಾಗದಲ್ಲಿ ಹೆಡೆ ಬಿಚ್ಚಿದ ಸರ್ಪದ ಚಿತ್ರಣಗಳಿದ್ದು, ಅಸ್ಪಷ್ಟವಾಗಿ ಗೋಚರಿಸುತ್ತಿವೆ.
900 ವರ್ಷಗಳ ಹಿಂದಿನ ಜೈನ ತೀರ್ಥಂಕರ ವಿಗ್ರಹ ಪತ್ತೆ ಜಾಗಿನಕೆರೆಯ ರೈತ ಬೆಟ್ಟಪ್ಪಗೌಡ ಎನ್ನುವವರು ತಮ್ಮ ಜಮೀನು ಉಳುಮೆ ಮಾಡುವ ಸಂದರ್ಭದಲ್ಲಿ ವಿಗ್ರಹ ದೊರಕಿದೆ. ಇದನ್ನು ಜಮೀನಿನ ಒಂದು ಬದಿಯಲ್ಲಿಟ್ಟು ವಿಗ್ರಹ ಸಿಕ್ಕ ಮಾಹಿತಿಯನ್ನು ಹವ್ಯಾಸಿ ಸಂಶೋಧಕ ಸಂತೇಬಾಚಹಳ್ಳಿಯ ಶಿಕ್ಷಕ ರಂಗಸ್ವಾಮಿಗೆ ಅವರು ತಿಳಿಸಿದ್ದಾರೆ.
ತಕ್ಷಣವೇ ಸ್ಥಳಕ್ಕಾಗಮಿಸಿರುವ ರಂಗಸ್ವಾಮಿ ಪರಿಶೀಲನೆ ನಡೆಸಿದಾಗ ವಿಗ್ರಹ ದೊರಕಿದ ಸನಿಹದಲ್ಲಿಯೇ ಕೆಲವು ವಿಶಿಷ್ಟ ಆಕಾರದ ಕಲ್ಲುಗಳು ದೊರೆತಿವೆ. ಜಾಗಿನಕೆರೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಇದುವರೆಗೆ ಜಿನಾಲಯದ ಯಾವುದೇ ಕುರುಹುಗಳು ಅಥವಾ ಶಾಸನಗಳು ಪತ್ತೆಯಾಗಿಲ್ಲ. ಆದರೆ, ಹೊಲದ ನೆಲದಾಳದಲ್ಲಿ ಸಿಕ್ಕಿರುವ ಜಿನ ವಿಗ್ರಹ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ವಿಗ್ರಹ ದೊರಕಿರುವುದರಿಂದ ಸನಿಹದಲ್ಲೆಲ್ಲೊ ಜಿನಾಲಯವಿದ್ದು ಅದು ನಾಶವಾಗಿರಬಹುದು ಅಥವಾ ನೆಲದಾಲದಲ್ಲಿ ಹೂತು ಹೋಗಿರಬಹುದೆಂದು ಅಂದಾಜಿಸಲಾಗಿದೆ.
900 ವರ್ಷಗಳ ಹಿಂದಿನ ಜೈನ ತೀರ್ಥಂಕರ ವಿಗ್ರಹ ಪತ್ತೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿಯೂ ದೋರಸಮುದ್ರದ ಪಟ್ಟಣಸ್ವಾಮಿ ನೊಳಂಬಿ ಶೆಟ್ಟಿಯ ಧರ್ಮಪತ್ನಿ ದೇಮಿಕಟ್ಟೆ ಕ್ರಿ.ಶ.1118 ರಲ್ಲಿ ತ್ರಿಕೂಟ ಬಸದಿಯೊಂದನ್ನು ನಿರ್ಮಿಸಿದ ದಾಖಲೆ ಶಾಸನಗಳಲ್ಲಿದೆ. ಆದರೆ, ಕತ್ತರಘಟ್ಟ ಗ್ರಾಮದಲ್ಲಿ ಎಲ್ಲಿಯೂ ಈ ತ್ರಿಕುಟಾಚಲ ದೇವಾಲಯದ ಅಸ್ತಿತ್ವದ ಕುರುಹುಗಳು ಗೋಚರಿಸುತ್ತಿಲ್ಲ. ಆದರೆ, ಜಾಗಿನಕೆರೆ ಮಾದರಿಯಲ್ಲಿಯೇ ಕತ್ತರಿಘಟ್ಟ ಗ್ರಾಮದಲ್ಲಿ ಕಳೆದೊಂದು ದಶಕದ ಹಿಂದೆ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಕೆಲವು ಜಿನ ವಿಗ್ರಹಗಳು ಪತ್ತೆಯಾಗಿದ್ದವು.
ಕತ್ತರಘಟ್ಟ ಗ್ರಾಮದ ತ್ರಿಕುಟಾಚಲ ಜಿನಾಲಯದಂತೆ ಜಾಗಿನಕೆರೆಯ ಜಿನಾಲಯವೂ ನೆಲದಾಳದಲ್ಲಿ ಇರಬಹುದು ಎಂದು ಹೇಳಿರುವ ಸಂಶೋಧಕ ರಂಗಸ್ವಾಮಿ, ಕತ್ತರಘಟ್ಟ ಮತ್ತು ಜಾಗಿನಕೆರೆ ಗ್ರಾಮದ ವಿಗ್ರಹ ಸ್ಥಳದ ಪರಿಶೀಲನೆ ಮಾಡಿ ಉತ್ಕನನ ಮಾಡಿದರೆ ನೆಲದಾಲದಲ್ಲಿ ಹುದುಗಿ ಹೋಗಿರುವ ನಮ್ಮ ಪ್ರಾಚೀನ ಪರಂಪರೆಯ ಸಾಂಸ್ಕೃತಿಕ ಇತಿಹಾಸವನ್ನು ಹೊರಜಗತ್ತಿನ ಮು೦ದೆ ಅನಾವರಣ ಮಾಡಬಹುದು ಎನ್ನುತ್ತಾರೆ.
ಧರ್ಮಸ್ಥಳದ ಜಿನಶಿಲ್ಪ ಅಧ್ಯಯನಕಾರ ಸಂದೇಶ್ ಕುಮಾರ್ ಜೈನ್ ಈಟಿವಿ ಭಾರತದೊಂದಿಗೆ ಮಾತನಾಡಿ, ಈ ವಿಗ್ರಹ 12 ನೇ ಶತಮಾನ ಪೂರ್ವದ್ದಾಗಿದ್ದು 7ನೇ ತೀರ್ಥಂಕರ ಸುಪಾರ್ಶ್ವನಾಥ ಅಥವಾ 23ನೇ ತೀರ್ಥಂಕರ ಪಾರ್ಶ್ವನಾಥರದ್ದು ಇರಬಹುದು. ಜಿನಬಿಂಬದ ಪಾದಪೀಠದಲ್ಲಿ ಸ್ವಸ್ತಿಕ ಚಿಹ್ನೆಯಿದ್ದರೆ ಸುಪಾರ್ಶ್ವನಾಥರೆಂತಲೂ, ಸರ್ಪದ ಚಿಹ್ನೆಯಿದ್ದರೆ ಅದು ಪಾರ್ಶ್ವನಾಥರದ್ದು ಎಂದೂ ಹೇಳಬಹುದು. ಆದರೆ, ಪಾದ ಪೀಠದಲ್ಲಿ ಚಿಹ್ನೆಗಳು ಸ್ಪಷ್ಟವಾಗಿಲ್ಲದಿರುವುದರಿಂದ ವಿಗ್ರಹ ಈ ಇಬ್ಬರು ತೀರ್ಥಂಕರರಲ್ಲಿ ಒಬ್ಬರಾಗಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.