ಮಂಡ್ಯ: ಪಾಂಡವಪುರ ತಾಲೂಕು ನ್ಯಾಮನಹಳ್ಳಿ ಸಮೀಪ ಲಾರಿ ಡಿಕ್ಕಿ ಹೊಡೆಯುವುದನ್ನು ಗಮನಿಸಿ ಆಟೋದಲ್ಲಿದ್ದ ತಂದೆ ತನ್ನ ಮಗನನ್ನು ಕೆಳಗೆ ತಳ್ಳಿ ಅಪಘಾತಕ್ಕೆ ಬಲಿಯಾಗಿದ್ದಾರೆ. ತಾಲೂಕಿನ ಮುದಗಂದೂರು ಗ್ರಾಮದ ಶ್ರೀನಿವಾಸ್ (43) ಮೃತ ವ್ಯಕ್ತಿ. ಇವರ ಮಗ ವಿಶ್ವಾಸ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಹಿನ್ನೆಲೆ ಪಾಂಡವಪುರ ಪಟ್ಟಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶ್ರೀನಿವಾಸ್ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆ ತರಕಾರಿ ತರಲೆಂದು ತಂದೆ ಮತ್ತು ಮಗ ತಮ್ಮ ಆಪೆ ಆಟೋದಲ್ಲಿ ಮೈಸೂರಿಗೆ ತೆರಳಿದ್ದರು. ಕೆಲಸ ಮುಗಿಸಿ ಊರಿಗೆ ವಾಪಸಾಗುತ್ತಿದ್ದರು. ಈ ವೇಳೆ ನ್ಯಾಮನಹಳ್ಳಿಯ ಸಮೀಪ ಲಾರಿಯೊಂದು ಅಡ್ಡಾದಿಡ್ಡಿಯಾಗಿ ಬಂದಿದೆ. ಇದನ್ನು ಗಮನಿಸಿದ ಶ್ರೀನಿವಾಸ್, ವಿಶ್ವಾಸ್ನನ್ನು ಆಟೋದಿಂದ ಕೆಳಗೆ ತಳ್ಳಿದ್ದಾರೆ. ಕ್ಷಣಾರ್ಧದಲ್ಲಿಯೇ ಆಟೋ ಡಿಕ್ಕಿ ಹೊಡೆದು ಲಾರಿಯೊಂದಿಗೆ ಚಾಲಕ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ.