ಮಂಡ್ಯ: ಪಾಂಡವಪುರ ತಾಲೂಕು ಕಚೇರಿಯ ಗ್ರಾಮ ಲೆಕ್ಕಿಗ (ವಿ.ಎ) ನೌಕರರೊಬ್ಬರನ್ನು ವರ್ಗಾವಣೆ ಮಾಡಲು ಪಾಂಡವಪುರ ತಹಶೀಲ್ದಾರ್ ಕೆ.ಸಿ. ಸೌಮ್ಯ 40 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದಾಗ ಮಂಡ್ಯ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ನೇತೃತ್ವದ ತಂಡದ ಬಲೆಗೆ ಬಿದ್ದಿದ್ದಾರೆ. ಬನ್ನಂಗಾಡಿ ಹೋಬಳಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಿಗ ಮರಿಸ್ವಾಮಿ ಗೌಡ ಎಂಬವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಮರಿಸ್ವಾಮಿ ಗೌಡ ಅವರು ತಾಲೂಕಿನ ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ತಹಶೀಲ್ದಾರ್ ಬಳಿ ಮನವಿ ಮಾಡಿಕೊಂಡಿದ್ದರು. ವರ್ಗಾವಣೆಗೆ 40 ಸಾವಿರ ರೂಪಾಯಿ ಹಣ ಕೊಡಬೇಕು ಎಂದು ತಹಶೀಲ್ದಾರ್ ಹಣದ ಬೇಡಿಕೆ ಇಟ್ಟಿದ್ದಾರೆ. ಹಣ ಕೇಳಿದ್ದ ಹಿನ್ನೆಲೆಯಲ್ಲಿ ಮರಿಸ್ವಾಮೀಗೌಡ ಜು. 21ರಂದು ಮಂಡ್ಯ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.
ಮರಿಸ್ವಾಮಿ ಗೌಡ ದೂರಿನ ಮೇರೆಗೆ ಮಂಡ್ಯ ಲೋಕಾಯುಕ್ತ ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದ ಇನ್ಸ್ಪೆಕ್ಟರ್ ತಂಡ ಪಾಂಡವಪುರ ತಾಲೂಕು ಕಚೇರಿಗೆ ಸಂಜೆ 6 ಗಂಟೆ ಸಮಯದಲ್ಲಿ ದಾಳಿ ನಡೆಸಿದ್ದು, ಸ್ಥಳದಲ್ಲೇ ಮರಿಸ್ವಾಮಿ ಗೌಡ ಅವರಿಂದ ತಹಶೀಲ್ದಾರ್ ಕೆ.ಸಿ. ಸೌಮ್ಯ ಲಂಚ ಸ್ವೀಕರಿಸುತ್ತಿರು. ಅದೇ ವೇಳೆ ಹಣಸಮೇತ ತಹಶೀಲ್ದಾರ್ ಅವರನ್ನು ಹಿಡಿದು ಲೋಕಾಯುಕ್ತ ಪೊಲೀಸರು ಕೇಸು ದಾಖಲಿಸಿದ್ದಾರೆ.