ಕರ್ನಾಟಕ

karnataka

By

Published : Dec 30, 2022, 1:11 PM IST

Updated : Dec 30, 2022, 2:58 PM IST

ETV Bharat / state

ಮಂಡ್ಯ: ಮೆಗಾ ಹಾಲಿನ ಡೈರಿ ಉದ್ಘಾಟಿಸಿದ ಅಮಿತ್​ ಶಾ

2,250 ಕೋಟಿ ವೆಚ್ಚದ ಮೆಗಾ ಹಾಲಿನ ಡೈರಿ ಉದ್ಘಾಟನೆ - ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಉಪಸ್ಥಿತಿ.

Mega Dairy Inauguration in Mandya
ಮೆಗಾ ಹಾಲಿನ ಡೈರಿ ಉದ್ಘಾಟಿಸಿದ ಅಮಿತ್​ ಶಾ

ಮೆಗಾ ಹಾಲಿನ ಡೈರಿ ಉದ್ಘಾಟಿಸಿದ ಅಮಿತ್​ ಶಾ

ಮಂಡ್ಯ:ಇಲ್ಲಿನ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ 2,250 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಗಾ ಡೈರಿಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ದೀಪ ಬೆಳಗುವ ಮೂಲಕ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತಿ ವಹಿಸಿದ್ದರು.

ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಜಿಲ್ಲೆಯ ಡೈರಿಗೆ ಈಗಾಗಲೇ ಹಲವಾರು ಪ್ರಶಂಸೆಗಳು ದೊರೆತಿವೆ. ಈಗ ಮೆಗಾ ಡೈರಿ ಲೋಕಾರ್ಪಣೆಗೊಂಡಿದೆ. ಈ ಡೈರಿ 10 ಲಕ್ಷ ಲೀ. ಹಾಲಿನ ಸಂಗ್ರಹಣೆ ಸಾಮರ್ಥ್ಯ ಹೊಂದಿರುವುದು ಇಲ್ಲಿನ ರೈತರಿಗೆ ಇನ್ನೂ ಅನುಕೂಲವಾಗಲಿದೆ. ಅನಾರೋಗ್ಯದ ನಡುವೆಯೂ ಮಾಜಿ ಪ್ರಧಾನಿ ದೇವೇಗೌಡರು ಮೆಗಾ ಡೈರಿ ಉದ್ಘಾಟನೆಗೆ ಬಂದಿದ್ದಾರೆ. ಬೊಮ್ಮಾಯಿ ಅವರು ಹೆಚ್ಚಿನ ಆಸಕ್ತಿವಹಿಸಿ ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

ದೇವೇಗೌಡರ ಕಾಲಿಗೆ ನಮಸ್ಕರಿಸಿದ ಬೊಮ್ಮಾಯಿ :ಮೆಗಾ ಡೈರಿ ಉದ್ಘಾಟನೆ ಸಮಾರಂಭ ಕಾರ್ಯಕ್ರಮಕ್ಕೆ ವೇದಿಕೆಗೆ ಆಗಮಿಸುತ್ತಿದ್ದಂತೆ ದೇವೇಗೌಡರ ಕಾಲಿಗೆ ಬಸವರಾಜ ಬೊಮ್ಮಾಯಿ ನಮಸ್ಕರಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಯಶಸ್ಸು ಕಂಡಿದೆ. ಮನೆಯಲ್ಲಿ ಹಾಲು ಕರೆದು ಹಾಕುವ ಮಹಿಳೆಯರಿಗೆ ಧನ್ಯವಾದಗಳು. ಹಾಲಿಗೆ 5 ರೂ ಪ್ರೊತ್ಸಾಹ ಧನ ಕೊಡ್ತಿದ್ದೇವೆ. ಗೆಜ್ಜಲಗೆರೆಯಲ್ಲಿ 10 ಲಕ್ಷ ಸಾಮರ್ಥ್ಯ ಹೊಂದಿರುವ ಮೆಗಾ ಡೈರಿ ಉದ್ಘಾಟನೆ ಮಾಡಲಾಗಿದೆ. ನರೇಂದ್ರ ಮೋದಿ ಅವರು ಸಹಕಾರ ಮಾಡಿ ದೇಶದಲ್ಲಿ ಶಕ್ತಿ ತುಂಬಿದ್ದಾರೆ. ಬೆಂಗಳೂರಿನ ಮೆಗಾ ಡೈರಿ ಸ್ಥಾಪನೆಗೆ ದೇವೇಗೌಡರೇ ಕಾರಣ. ಬೆಂಗಳೂರಿನ ಡೈರಿ ನಿರ್ಮಾಣದಲ್ಲಿ ದೇವೇಗೌಡರದ್ದು ಮಹತ್ವದ ಪಾತ್ರವಿದೆ ಎಂದು ನೆನೆದರು.

ರೈತರಿಗೆ ಇನ್ನಷ್ಟು ಅನುಕೂಲ:ಆತ್ಮ ನಿರ್ಭರ್​ ಯೋಜನೆ ಅಡಿ ರೈತರಿಗೆ ಇನ್ನಷ್ಟೂ ಯೋಜನೆಗಳನ್ನು ಮಾಡುತ್ತೇವೆ. ಈಗಾಗಲೇ ಕಬ್ಬಿನಿಂದ ಎಥೆನಾಲ್​ ಉತ್ಪಾದನೆ ಮಾಡಲಾಗುತ್ತಿದೆ. ರೈತರಿಗೆ ಇನ್ನಷ್ಟೂ ನೀರಾವರಿ ಮತ್ತು ಕೈಗಾರಿಕೆಗಳ ಅವಶ್ಯಕತೆ ಇದೆ ಅದರತ್ತ ಬಿಜೆಪಿ ಶ್ರಮಿಸುತ್ತದೆ. ಮೈಶುಗರ್ ಪ್ರಾರಂಭವಾಗಿದೆ, ಮುಂದಿನ ವರ್ಷ ಎಥನಾಲ್ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.

ಅಮಿತ್ ಶಾ ಮಾತನಾಡಿ, 260ಕೋಟಿ ವೆಚ್ಚದಲ್ಲಿ ಮಿಲ್ಕ್ ಫ್ಲಾಂಟ್ ನಿರ್ಮಾಣ ಆಗಿದೆ. ಪ್ರತಿದಿನ 10ಲಕ್ಷ ಲೀ. ಹಾಲು ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಘಟಕ ಹೊಂದಿದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀಟರ್​ ವರೆಗೆ ಸಂಸ್ಕರಣೆಗೆ ಹೆಚ್ಚಿಸುವ ರೀತಿ ಮಾಡಲಾಗುವುದು. ದೇಶದಲ್ಲಿ ಕರ್ನಾಟಕ ಹೈನುಗಾರಿಕಾ ಕ್ಷೇತ್ರದಲ್ಲಿ ಅಗ್ರ ಸ್ಥಾನದಲ್ಲಿದೆ ಎಂದರು.

16 ಜಿಲ್ಲೆಗಳಿಂದ 28ಕೋಟಿ 26ಲಕ್ಷ ರೈತರಿಗೆ ನೇರವಾಗಿ ಜಮೆ ಆಗುತ್ತಿದೆ. 1975ರಿಂದ ಇಲ್ಲಿಯವರೆಗೆ ಕರ್ನಾಟಕ ಡೈರಿ ಕ್ಷೇತ್ರದಲ್ಲಿ ಒಳ್ಳೆಯ ಪ್ರಗತಿ ಸಾಧಿಸಿದೆ‌. ಮಿಲ್ಕ್ ಫೆಡರೇಶನ್​ನಲ್ಲಿ ಮೊದಲು ನಾಲ್ಕು ಕೋಟಿ ಟರ್ನೋವರ್ ಇತ್ತು. ಈಗ 25 ಕೋಟಿ ಟರ್ನೋವರ್ ಆಗುತ್ತಿದೆ. 36ಲಕ್ಷ ರೈತರಿಗೆ ಬ್ಯಾಂಕ್ ಅಕೌಂಟ್ ಮೂಲಕ ಹಣ ತಲುಪಿಸಲಾಗುತ್ತಿದೆ. ಅಮೂಲ್ ಹಾಗೂ ಕರ್ನಾಟಕದ ನಂದಿನಿ ಒಟ್ಟಿಗೆ ಕೆಲಸ ಮಾಡಬೇಕು ಎಂದು ಕರೆನೀಡಿದರು.

ಎಲ್ಲಾ ಹಳ್ಳಿಗಳಲ್ಲಿ ಪ್ರೈಮರಿ ಡೈರಿ ಸ್ಥಾಪನೆ ಮಾಡುವ ಉದ್ದೇಶ ಇದೆ ಇದಕ್ಕಾಗಿ ಅಮೂಲ್​ ಮತ್ತು ನಂದಿನಿ ಒಟ್ಟಾಗಿ ಕೆಲಸ ಮಾಡಬೇಕಿದೆ. ಎನ್​ಡಿಡಿ ಮೂಲಕ ಪ್ರತಿ ಪಂಚಾಯತ್​ನಲ್ಲಿ ಪ್ರೈಮರಿ ಡೈರಿ ಸ್ಥಾಪನೆ ಮಾಡಬೇಕಿದೆ. ಎರಡು ಲಕ್ಷ ಪ್ರೈಮರಿ ಡೈರಿ ನಿರ್ಮಾಣ ಮಾಡುವ ಮೂಲಕ ಹಾಲನ್ನು ರಫ್ತು ಮಾಡಬಹುದು ಎಂದು ಅಭಿಪ್ರಾಯಿಸಿದರು.

ಡೈರಿ ವಿಶೇಷತೆ: ಗೆಜ್ಜಲಗೆರೆ ಮನ್ಸುಲ್‌ ಆವರಣದಲ್ಲಿ ಉದ್ಘಾಟನೆ ಆಗಿರುವ ಮೆಗಾಡೈರಿ, ಹಾಲಿನ ಪುಡಿ ಘಟಕ, ಬೆಣ್ಣೆ ಮತ್ತು ಉಪ ಉತ್ಪನ್ನಗಳ ಹೆಚ್ಚು ತಯಾರಿಕ ಹಾಗೂ ಪ್ಯಾಕಿಂಗ್ ಘಟಕ ಒಳಗೊಂಡಿದೆ. ಈ ಡೈರಿ 30 ಮೆಟ್ರಿಕ್ ಟನ್ ಹಾಲಿನ ಪುಡಿ, 2 ಮೆಟ್ರಿಕ್ ಟನ್ ಪನ್ನೀರ್, 10 ಮೆಟ್ರಿಕ್ ಟನ್ ಬೆಣ್ಣೆ, 12 ಮೆಟ್ರಿಕ್​​​ ಟನ್ ಸಿಹಿ ಉತ್ಪನ್ನಗಳನ್ನು ತಯಾರಿಸುವ ಮತ್ತು 4 ಮೆಟ್ರಿಕ್ ಟನ್ ಕೋವಾ, 12 ಮೆಟ್ರಿಕ್ ಟನ್ ತುಪ್ಪ ಜೊತೆಗೆ 10 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ:ಮೆಗಾ ಡೈರಿ ಉದ್ಘಾಟನೆ: ಮಂಡ್ಯಕ್ಕೆ ಬಂದಿಳಿದ ಅಮಿತ್​ ಶಾ

Last Updated : Dec 30, 2022, 2:58 PM IST

ABOUT THE AUTHOR

...view details