ಕರ್ನಾಟಕ

karnataka

ಸಂವಿಧಾನದ ಉಳಿವಿಗೆ ಬರಹಗಾರರು, ಲೇಖಕರು ಜೈಲಿಗೆ ಹೋಗಲು ಹೆದರಬಾರದು: ಕುಂ. ವೀರಭದ್ರಪ್ಪ

By

Published : Mar 26, 2023, 11:03 PM IST

ಜಾತಿ, ಧರ್ಮ, ಹಣದ ಆಸೆಯಿಂದ ಪಕ್ಷಗಳನ್ನು ಗೆಲ್ಲಿಸುವ ಪದ್ಧತಿ ಕೈ ಬಿಡದಿದ್ದರೆ ದೇಶವನ್ನು ದೇವರು ಸಹ ಕಾಪಾಡಲು ಸಾಧ್ಯವಿಲ್ಲ ಎಂದು ಬಂಡಾಯ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದಾರೆ

veerabhadrappa-reaction-on-government
ಸಂವಿಧಾನದ ಉಳಿವಿಗೆ ಬರಹಗಾರರು, ಲೇಖಕರು ಜೈಲಿಗೆ ಹೋಗಲು ಹೆದರಬಾರದು:ಕುಂ. ವೀರಭದ್ರಪ್ಪ

ಗಂಗಾವತಿ (ಕೊಪ್ಪಳ):ಸಂವಿಧಾನದ ಉಳಿವಿಗೆ ಹಾಗೂ ಪ್ರಜಾಪ್ರಭುತ್ವದ ಅಸ್ತಿತ್ವಕ್ಕಾಗಿ ನಿತ್ಯ ಹೋರಾಟ ಮಾಡುವ ಸಂಘಟಕರು, ಬರಹಗಾರರು, ಲೇಖಕರು ಹಾಗೂ ಪತ್ರಕರ್ತರು ಜೈಲಿಗೆ ಹೋಗಲು ಹೆದರಬಾರದು ಎಂದು ಬಂಡಾಯ ಸಾಹಿತಿ, ಕಾದಂಬರಿಕಾರ ಕುಂ. ವೀರಭದ್ರಪ್ಪ ಹೇಳಿದ್ದಾರೆ. ನಗರದ ನೀಲಕಂಠೇಶ್ವರ ವೃತ್ತದಲ್ಲಿನ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಹಿರಿಯ ಕಾರ್ಮಿಕರ ಹೋರಾಟಗಾರ ಜೆ.ಭಾರದ್ವಾಜ್ ಅವರ ಅಭಿನಂದನಾ ಗ್ರಂಥಗಳಾದ`ದೇಶಮಂಟೆ ಮನುಷುಲು (ದೇಶವೆಂದರೆ ಮನಯಷ್ಯರು) ಮತ್ತು ಲಾಲ್ ಸಲಾಂ ಕಾಮ್ರೆಡ್ ಎಂಬ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.

ದೇಶಭಕ್ತರು ಸರ್ವ ತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.. ಇದಕ್ಕೂ ಮೊದಲು ಕಾರ್ಯಕ್ರಮವನ್ನು ತಂಬೂರಿ ಮೀಟುವ ಮೂಲಕ ಚಾಲನೆ ನೀಡಿದ ವೀರಭದ್ರಪ್ಪ, ಬ್ರಿಟಿಷರ ಆಳ್ವಿಕೆ ಗುಲಾಮಗಿರಿಯಿಂದ ಹೊರ ಬರಲು ಲಕ್ಷಾಂತರ ದೇಶಭಕ್ತರು ಸರ್ವವನ್ನು ತ್ಯಾಗ ಮಾಡಿ ಸ್ವಾತಂತ್ರ್ಯ ಗಳಿಸಿ ಕೊಟ್ಟಿದ್ದಾರೆ. ಆದರೆ ಆ ಮಹಾನ್ ತ್ಯಾಗಿಗಳು ಗಳಿಸಿದ ಸ್ವಾತಂತ್ರ್ಯ ಇಂದು ಹರಣವಾಗುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಸಂಘಟಕರು, ಬರಹಗಾರರು ಮತ್ತು ಲೇಖಕರು ಒಗ್ಗಟ್ಟು ಪ್ರದರ್ಶಿಸಬೇಕು. ಸಂವಿಧಾನ ನಮಗೆ ಹೋರಾಟ, ಧರ್ಮದ ಆಚರಣೆ, ಪ್ರತಿಭಟಿಸುವ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕು ನೀಡಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳು ನಡೆಯುತ್ತಿದ್ದರೂ ಜನರು ಮೌನ ವಹಿಸಿದ್ದು ಸರಿಯಲ್ಲ:ನಮ್ಮನ್ನಾಳುವ ಸರ್ಕಾರ ಹೋರಾಟಗಾರರು, ಪತ್ರಕರ್ತರು, ಲೇಖಕರು, ಬರಹಗಾರರ ಮೇಲೆ ಪೊಲೀಸರನ್ನು ಗುಪ್ತವಾಗಿ ಬಿಟ್ಟು ಮಾಹಿತಿ ಸಂಗ್ರಹಿಸುವ ಕಾರ್ಯ ನಿತ್ಯವೂ ಮಾಡುತ್ತಿದೆ. ಯಾರು ಪೊಲೀಸ್ ಕಣ್ಗಾವಲಿನಲ್ಲಿರುತ್ತಾರೋ ಅವರೇ ನಿಜವಾದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವವರಾಗಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳು ನಡೆಯುತ್ತಿದ್ದರೂ ಜನರು ಮೌನವಹಿಸಿದ್ದು ಸರಿಯಲ್ಲ. ಜನರಲ್ಲಿ ಹೋರಾಟದ ಕಿಚ್ಚು ನಿಧಾನವಾಗಿ ಕಡಿಮೆಯಾಗುತ್ತಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದು ಕುಂ ವೀರಭದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಸರ್ಕಾರವನ್ನು ಟೀಕಿಸುವವರನ್ನು ದೇಶ ದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ:ಇತ್ತೀಚಿನ ದಿನಗಳಲ್ಲಿ ಪ್ರಶ್ನೆ ಮಾಡುವವರನ್ನು ಮತ್ತು ಸರ್ಕಾರವನ್ನು ಟೀಕಿಸುವವರನ್ನು ದೇಶ ದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ರಾಜ್ಯ ಸರ್ಕಾರ ಮುಸ್ಲಿಂ ಸಮಾಜಕ್ಕೆ ಸಂವಿಧಾನ ಬದ್ಧವಾಗಿ ಕಲ್ಪಿಸಿದ್ದ ಶೇ.4 ಮೀಸಲಾತಿ ತೆಗೆದು ಹಾಕಿದ್ದು ಘೋರವಾಗಿದೆ. ಆಳುವ ಸರ್ಕಾರ ಜನಪರವಾಗಿಲ್ಲ. ಶ್ರೀಮಂತರು ಮತ್ತು ಬಂಡವಾಳಶಾಹಿಗಳ ಪರವಾಗಿದೆ ಎಂದರು.

ಚುನಾವಣೆಯಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ನಂತರ ಬಹುಮತ ಲಭಿಸದಿದ್ದರೆ ಹಣ ಕೊಟ್ಟು ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸುವ ಮೂಲಕ ಪ್ರಜಾಪ್ರಭುತ್ವವನ್ನು ಅಣಕಿಸಲಾಗುತ್ತಿದೆ. ಮತದಾರರು ಜಾಗೃತರಾಗಿ ದೇಶಕ್ಕಾಗಿ ಹುತಾತ್ಮರಾದವರ ತ್ಯಾಗವನ್ನು ಸ್ಮರಣೆ ಮಾಡದೇ ಜಾತಿ, ಧರ್ಮ, ಹಣದ ಆಸೆಯಿಂದ ಪಕ್ಷಗಳನ್ನು ಗೆಲ್ಲಿಸುವ ಪದ್ಧತಿ ಕೈ ಬಿಡದಿದ್ದರೆ ದೇಶವನ್ನು ದೇವರು ಸಹ ಕಾಪಾಡಲು ಸಾಧ್ಯವಿಲ್ಲ ಎಂದು ವೀರಭದ್ರಪ್ಪ ಹೇಳಿದರು.

ಇದನ್ನೂ ಓದಿ:ಬೈಲಾ ತಿದ್ದುಪಡಿಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸರ್ವ ಸದಸ್ಯರ ಸಭೆ ಒಪ್ಪಿಗೆ..

ABOUT THE AUTHOR

...view details