ಕರ್ನಾಟಕ

karnataka

By ETV Bharat Karnataka Team

Published : Dec 30, 2023, 9:13 PM IST

ETV Bharat / state

ಕೊಪ್ಪಳ: ಸಾಲಬಾಧೆಯಿಂದ ಒಂದೇ ವಾರದಲ್ಲಿ ಮೂವರು ಅನ್ನದಾತರ ಆತ್ಮಹತ್ಯೆ

ಸಾಲಬಾಧೆಯಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದು ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ನಡೆದ ರೈತರ ಮೂರನೇ ಆತ್ಮಹತ್ಯೆ ಪ್ರಕರಣವಾಗಿದೆ.

three-farmers-suicide-in-past-one-week-in-koppal
ಕೊಪ್ಪಳ: ಸಾಲಬಾಧೆಯಿಂದ ಒಂದೇ ವಾರದಲ್ಲಿ ಮೂವರು ಅನ್ನದಾತರ ಆತ್ಮಹತ್ಯೆ

ಕೊಪ್ಪಳ:ಸಾಲಬಾಧೆಯಿಂದ ರೈತನೊಬ್ಬ ತನ್ನ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿಯ ವೀರಪ್ಪ ಚಲವಾದಿ(41) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತ ರೈತ ಯಲಬುರ್ಗಾದ ಬ್ಯಾಂಕ್​ವೊಂದರಲ್ಲಿ 2008 ರಲ್ಲಿ 45 ಸಾವಿರ ಸಾಲ ಪಡೆದಿದ್ದರು. ಸದ್ಯ ಬಡ್ಡಿ ಸೇರಿ ಸಾಲ 80 ಸಾವಿರ ರೂಪಾಯಿ ಆಗಿದೆ. ಈ ವರ್ಷವೂ ಮಳೆ, ಬೆಳೆ ಇಲ್ಲದೆ ನೊಂದಿದ್ದ ರೈತ ಶನಿವಾರ ಸಾವಿನ ಹಾದಿ ಹಿಡಿದಿದ್ದಾನೆ.

ಹುಲಿಯಾಪುರದ ರೈತ ಆತ್ಮಹತ್ಯೆ:ಇತ್ತೀಚಿಗೆ, ಕುಷ್ಟಗಿ ತಾಲೂಕಿನ ಹುಲಿಯಾಪುರದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಲ್ಲಪ್ಪ ಕತಿಗೇರಿ(42) ಆತ್ಮಹತ್ಯೆ ಮಾಡಿಕೊಂಡ ರೈತ. ಹಿರೇಮನ್ನಾಪುರದ ಬ್ಯಾಂಕ್​ವೊಂದರಲ್ಲಿ 2 ಲಕ್ಷ, ಖಾಸಗಿ ಫೈನಾನ್ಸ್ ಕಂಪನಿಯೊಂದರಿಂದ 1.20 ಲಕ್ಷ ಸಾಲ ಪಡೆದಿದ್ದರು. ಈ ಬಾರಿ ಸರಿಯಾಗಿ ಮಳೆಯಾಗದಿದ್ದರಿಂದ ಎರಡು ಎಕರೆ ಕೃಷಿ ಭೂಮಿ‌ ಹೊಂದಿದ್ದ ಕಲ್ಲಪ್ಪನಿಗೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಕಳೆದ ಆರು ತಿಂಗಳಿನಿಂದ ಬ್ಯಾಂಕಿನಿಂದ ಸಾಲ‌ ಮರುಪಾವತಿಗಾಗಿ ಮೂರು ನೋಟಿಸ್ ಬಂದಿದ್ದವು. ಇದರಿಂದ ಮನನೊಂದ ರೈತ ಡಿ 24 ರಂದು ಆತ್ಮಹತ್ಯೆಗೆ ಯತ್ನಿಸಿದ್ದ. ಅವರನ್ನು ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ಕಲ್ಲಪ್ಪ ಡಿಸೆಂಬರ್ 27 ರಂದು ಮೃತಪಟ್ಟಿದ್ದ.

ಆತ್ಮಹತ್ಯೆಗೆ ಶರಣಾಗಿದ್ದ ಕುಕನೂರಿನ ರೈತ:ಕಳೆದ ಸೋಮವಾರ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದ ರೈತ ಮಹೇಶ ಕುದ್ರಿಕಟಿಗಿ(37) ಆತ್ಮಹತ್ಯೆಗೆ ಶರಣಾಗಿದ್ದರು. ಬ್ಯಾಂಕ್ ಸೇರಿ ವಿವಿಧೆಡೆ ಕೈ ಸಾಲ ಮಾಡಿಕೊಂಡಿದ್ದರು. ಸಕಾಲಕ್ಕೆ ಮಳೆಯಾಗದ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದೆ ಮಾಡಿದ ಸಾಲ ಮರಳಿ ತೀರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ:ಶಿವಮೊಗ್ಗ: ಅಂಗಡಿಯಲ್ಲಿ ವ್ಯಕ್ತಿ ಆತ್ಮಹತ್ಯೆ; ಲಾರಿಯಲ್ಲಿ ಕೊಳೆತ ಶವ ಪತ್ತೆ

ABOUT THE AUTHOR

...view details