ಗಂಗಾವತಿ :ಮೆಹೆಂದಿಅಂದರೆ ಸಹಜವಾಗಿ ಹೆಣ್ಣು ಮಕ್ಕಳಿಗೆ ಬಲು ಇಷ್ಟ. ಹಬ್ಬ-ಹರಿದಿನ, ಶುಭ ಸಮಾರಂಭಗಳಲ್ಲಿ ಅಂಗೈ ಹಾಗೂ ಮುಂಗಾಲುಗಳ ಮೇಲೆ ಚಿತ್ತಾರಗಳಿಂದ ಮೆಹಂದಿ ಬಿಡಿಸಿಕೊಂಡು ಗಮನ ಸೆಳೆಯುತ್ತಾರೆ.
ಇದೀಗ ಇದೇ ಮೆಹೆಂದಿಯು ಮಕ್ಕಳಲ್ಲಿ ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಮತ್ತು ಕಲಿಕೆಗೆ ಪ್ರೇರಣೆಯಾಗಿದೆ ಅಂದರೆ ಸುಳ್ಳಲ್ಲ.
ಮಕ್ಕಳ ಅಂಗೈಗಳಲ್ಲಿ ವಿಜ್ಞಾನದಲ್ಲಿ ಬರುವ ನಾನಾ ಚಿತ್ರಗಳನ್ನು ಬಿಡಿಸಿಕೊಳ್ಳುವ ಮೂಲಕ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ.
ಮೆದುಳು, ಯಕೃತ್, ಪ್ರನಾಳಗಳು ಸೇರಿ ನಾನಾ ಮಾದರಿ ಹಾಗೂ ವಿನ್ಯಾಸಗಳನ್ನು ಮಕ್ಕಳು ತಮ್ಮ ವಿಜ್ಞಾನ ಶಿಕ್ಷಕ ಪ್ರಶಾಂತ್ ಜೋಶಿ ನೆರವಿನಲ್ಲಿ ಬರೆದಿದ್ದಾರೆ. ಇದು ಮಕ್ಕಳಲ್ಲಿ ಬಹು ಬೇಗವಾಗಿ ವಿಜ್ಞಾನದತ್ತ ವಾಲುವಂತೆ ಮಾಡುವುದಲ್ಲದೇ ಚಿತ್ರಗಳು ಹೆಚ್ಚುಕಾಲ ನೆನಪಿನಲ್ಲಿ ಉಳಿಯಲು ನೆರವಾಗುತ್ತವೆ ಎಂದು ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಹೇಳುತ್ತಾರೆ.