ಗಂಗಾವತಿ:ಗಡ್ಡ, ಮೀಸೆ ಬಿಟ್ಟ ಮಾತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಮಾನವ ಆಗಲಾರರು. ಅದರ ಬದಲಿಗೆ ಬಡವರ ಹಸಿವು ನೀಗಿಸುವ, ಯುವಕರಿಗೆ ಉದ್ಯೋಗ ನೀಡುವ ಮೂಲಕ ದೇಶವನ್ನು ಪ್ರಗತಿಯತ್ತ ಮುನ್ನಡೆಸಿದರೆ ಮಾತ್ರ ವಿಶ್ವಮಾನವ ಆಗಲು ಸಾಧ್ಯ ಎಂದು ಮಾಜಿ ಸಚಿವ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.
ಕಾರಟಗಿ ಪಟ್ಟಣದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ದೇಶದ ಪರಿಸ್ಥಿತಿ ಏನಾಗಿದೆ? ಮೋದಿ ಬಗ್ಗೆ ಸುಖಾಸುಮ್ಮನೆ ವಿಶ್ವಮಾನವ ಎಂದು ಹೇಳಿಕೊಂಡರೆ ಸಾಲದು. ದಾಡಿ, ಮೀಸೆ ಬಿಟ್ಟ ಮಾತ್ರಕ್ಕೆ ವಿಶ್ವಮಾನವ ಆಗಲಾರರು. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಿ, ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಡಿ. ಆ ಮೂಲಕ ನೀವು ವಿಶ್ವಮಾನವ ಆಗಲು ಸಾಧ್ಯ. ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಸ್ಥಿತಿ ಹೇಗಿತ್ತು? ಎಂದು ಅವಲೋಕನ ಮಾಡಿ ಎಂದರು.