ಕುಷ್ಟಗಿ: ಈ ಪರೇಡ್ನಲ್ಲಿ ರೌಡಿ ಶೀಟರ್ಸ್, ಎಂ.ಓ.ಬಿಗಳು ವಯಸ್ಸಾದವರೆಂದು ಸಡಿಲಿಕೆ ಇಲ್ಲ. ವಯಸ್ಸಾಗಿದ್ದರೂ ಊರಲ್ಲಿ ಬೆಂಕಿ ಹಚ್ಚುವ ಕಾರ್ಯಕ್ರಮದಲ್ಲಿ ನಿರತರಾಗಿರುತ್ತಾರೆ. ಅಂತವರಿಗೆ ವಿನಾಯಿತಿ ಇರುವುದಿಲ್ಲ. ನಡತೆಯಲ್ಲಿ ಬದಲಿಸಿಕೊಳ್ಳಬೇಕಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಹೇಳಿದರು.
ಕುಷ್ಟಗಿ ಸಿಪಿಐ ಕಚೇರಿಯ ಆವರಣದಲ್ಲಿ ಕುಷ್ಟಗಿ, ತಾವರಗೇರಾ, ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ನೂರಾರು ರೌಡಿಶೀಟರ್ಗಳ ಪರೇಡ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಯಸ್ಸಾದವವರಿಗೆ ನಡತೆ ಮುಖ್ಯ, ವಯಸ್ಸಲ್ಲ ಎಂದ ಅವರು, ಸಹಜವಾಗಿ ವಯಸ್ಸು ಜಾಸ್ತಿಯಾದವರ ಚಟುವಟಿಕೆ ಕಡಿಮೆಯಾಗಿರುತ್ತದೆ.
ಕೆಲವು ಪ್ರಕರಣದಲ್ಲಿ ವಯಸ್ಸಾದವರು ಅಪರಾಧ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದು, ಊರಲ್ಲಿ ತೊಂದರೆ ನೀಡುವ ಸ್ವಭಾವದವರಾಗಿದ್ದು, ಅಂಥವರಿಗೆ ಮುಲಾಜು ಇಲ್ಲ. ಅಂಥವರ ಮೇಲೆ ದಾಖಲೆ ಮುಂದುವರೆಸುತ್ತೇವೆ. ಅಂಥವರ ಮೇಲೆ ಪೊಲೀಸರು ಸದಾ ನಿಗಾವಹಿಸಿರುತ್ತಾರೆ. ಯುವಕರಾದವರು ಬುದ್ದಿ ತಿದ್ದಿಕೊಂಡು ತಮ್ಮ ನಡತೆ ಸುಧಾರಿಸಿಕೊಂಡಿದ್ದರೆ ಪರಿಶೀಲಿಸಿ ಪಟ್ಟಿಯನ್ನು ಕ್ಲೋಸ್ ಮಾಡಲಾಗುತ್ತಿದೆ ಎಂದರು.