ಕರ್ನಾಟಕ

karnataka

By

Published : Jun 2, 2023, 9:00 PM IST

ETV Bharat / state

ಧಾರ್ಮಿಕ ಆಚರಣೆಗೆ ಅನುಯಾಯಿಗಳ ಮಧ್ಯೆ ಮೂಡದ ಒಮ್ಮತ: ನ್ಯಾಯಾಲಯದಿಂದ ಆದೇಶ ತರುವಂತೆ ಎಸಿ ಸೂಚನೆ

ನ್ಯಾಯಾಲಯದಿಂದ ಆದೇಶ ಪಡೆಯದೇ ಹೊರತು ನವವೃಂದಾವನ ಗಡ್ಡೆಯಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳದಂತೆ ಸಹಾಯಕ ಆಯುಕ್ತ ಬಸವಣ್ಣೆಪ್ಪ ತಿಳಿಸಿದ್ದಾರೆ.

religious-rituals-can-not-celebrate-in-vrindavan-gadade-without-court-permission-says-a
ಧಾರ್ಮಿಕ ಆಚರಣೆಗೆ ಅನುಯಾಯಿಗಳ ಮಧ್ಯೆ ಮೂಡದ ಒಮ್ಮತ: ನ್ಯಾಯಾಲಯದಿಂದ ಆದೇಶ ತರುವಂತೆ ಎಸಿ ಸೂಚನೆ

ಗಂಗಾವತಿ: ತಾಲೂಕಿನ ಆನೆಗೊಂದಿ ಸಮೀಪ ಇರುವ ನವವೃಂದಾವನ ಗಡ್ಡೆಯಲ್ಲಿ ಜೂ.5ರಿಂದ ಆರಂಭವಾಗಲಿರುವ ರಘುವರ್ಯ ತೀರ್ಥರ ಮೂರು ದಿನಗಳ ಆರಾಧನೆ ಹಾಗೂ ಮನ್ಯಾಯಸುಧಾ ಸಮರ್ಪಣಾ ಸಂಸ್ಕರಣೋತ್ಸವ ಆಚರಣೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲು ಸಹಾಯಕ ಆಯುಕ್ತ ಬಸವಣ್ಣೆಪ್ಪ ಮುಂದಾಗಿದ್ದಾರೆ. ಜೂನ್ 5, 6 ಮತ್ತು ಏಳು ರಂದು ಮೂರು ದಿನಗಳ ಕಾಲ ನವವೃಂದಾವನ ಗಡ್ಡೆಯಲ್ಲಿ ಉತ್ತರಾದಿಮಠದಿಂದ ರಘುವರ್ಯ ತೀರ್ಥರ ಆರಾಧನೆ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಇದೇ ದಿನ ಮಂತ್ರಾಲಯ ಮಠದಿಂದ ಶ್ರೀ ಮನ್ಯಾಯಸುಧಾ ಸಮರ್ಪಣಾ ಸಂಸ್ಕರಣೋತ್ಸವ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ಹೀಗಾಗಿ ಉಭಯ ಮಠಗಳು ಸೂಕ್ತ ಭದ್ರತೆ ಕಲ್ಪಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ. ಈ ಹಿನ್ನೆಲೆ ಯಾವ ಮಠದ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ವಿವಾದದ ಹಿನ್ನೆಲೆ ಉಭಯ ಮಠಗಳ ಅನುಯಾಯಿಗಳ ಸಭೆಯನ್ನು ಇಲ್ಲಿನ ಮಿನಿ ವಿಧಾನಸೌಧದಲ್ಲಿ ಕರೆಯಲಾಗಿತ್ತು. ಆದರೆ, ಸಭೆಯಲ್ಲಿ ಉಭಯ ಮಠಗಳ ಅನುಯಾಯಿಗಳು ಮತ್ತು ಭಕ್ತರ ಮಧ್ಯೆ ಒಮ್ಮತ ಮೂಡದ ಹಿನ್ನೆಲೆ ಈ ಸಂಬಂಧ ಸಹಾಯಕ ಆಯುಕ್ತ ಬಸಣ್ಣೆಪ್ಪ ನ್ಯಾಯಾಲಯದಿಂದ ಆದೇಶ ಪಡೆಯದೇ ಹೊರತು ನವವೃಂದಾವನ ಗಡ್ಡೆಯಲ್ಲಿ ಯಾವುದೇ ಧಾರ್ಮಿಕ ಆಚರಣೆ ಕೈಗೊಳ್ಳದಂತೆ ಸೂಚಿಸಿದ್ದಾರೆ.

ಕೋರ್ಟ್​ ಅನುಮತಿ ಕಡ್ಡಾಯ:ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ನ್ಯಾಯಾಲಯದಿಂದ ಸೂಕ್ತ ನಿರ್ದೇಶನ ಪಡೆದುಕೊಂಡು ಬರಬೇಕು ಎಂದು ಸೂಚನೆ ನೀಡಿರುವ ಸಹಾಯಕ ಆಯುಕ್ತ ಬಸವಣ್ಣೆಪ್ಪ, ಒಂದೊಮ್ಮೆ ನಿಯಮ ಉಲ್ಲಂಘಿಸಿ ಧಾರ್ಮಿಕ ಆಚರಣೆಗೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಿದ್ದಾರೆ. ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಜೂನ್ 5,6 ಮತ್ತು 7 ರಂದು ಪ್ರತಿ ವರ್ಷದಂತೆ ಈ ವರ್ಷವೂ ರಘುವರ್ಯ ತೀರ್ಥರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ನಾಡಿನ ವಿವಿಧ ಭಾಗದಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಉತ್ತರಾಧಿಮಠದಿಂದ ಗ್ರಾಮೀಣ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ. ಇದೇ ಜೂನ್ 5,6 ಮತ್ತು 7ರಂದು ನವವೃಂದಾನ ಗಡ್ಡೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದಿಂದ ಶ್ರೀಮನ್ಯಾಯಸುಧಾ ಸಮರ್ಪಣಾ ಸಂಸ್ಕರಣೋತ್ಸವ ಕಾರ್ಯಕ್ರಮಕ್ಕೆ ಆಯೋಜಿಸಲಾಗಿದೆ. ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮಠದ ಅನುಯಾಯಿಗಳು ಪೊಲೀಸರ ಮೊರೆ ಹೋಗಿದ್ದಾರೆ.

ಜಿಲ್ಲಾಧಿಕಾರಿ ಗಮನಕ್ಕೆ:ಉಭಯ ಮಠಗಳ ಮಧ್ಯೆ ಈಗಾಗಲೇ ಹಲವು ದಶಕಗಳಿಂದ ನವವೃಂದಾನ ಗಡ್ಡೆಯ ವಾರಸತ್ವ ಮತ್ತು ಧಾರ್ಮಿಕ ಆಚರಣೆಗಳ ಸಂಬಂಧ ವಿವಾದವಿದ್ದು, ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಹೀಗಾಗಿ ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಸೂಕ್ತ ನಿರ್ದೇಶನ ನೀಡುವಂತೆ ಪೊಲೀಸರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ, ಉಭಯ ಮಠಗಳ ಅನುಯಾಯಿಗಳ ಸಭೆ ಕರೆದು ಒಮ್ಮತ ಮೂಡಿಸಲು ಯತ್ನಿಸಿದರು. ಆದರೆ, ಸಭೆ ವಿಫಲವಾದ ಹಿನ್ನೆಲೆ ನ್ಯಾಯಾಲಯದಿಂದಲೇ ಅನುಮತಿ ತರುವಂತೆ ಅಧಿಕಾರಿ ಉಭಯ ಮಠಗಳ ಭಕ್ತರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಆಸ್ತಿಗಾಗಿ ವೃದ್ಧ ತಂದೆಯನ್ನೇ ಮನೆಯಿಂದ ಹೊರಹಾಕಿದ ಮಕ್ಕಳು: ಸ್ವಯಾರ್ಜಿತ ಆಸ್ತಿಗಾಗಿ ಪಂಚಾಯಿತಿ ಎದುರು ಪ್ರತಿಭಟನೆಗೆ ಕುಳಿತ ವೃದ್ಧ

ABOUT THE AUTHOR

...view details