ಗಂಗಾವತಿ: ತಾಲೂಕಿನ ಆನೆಗುಂದಿಯ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ರಂಗನಾಥ ಸ್ವಾಮಿ ಹಾಗೂ ಪಂಪಾಸರೋವರದ ಆದಿಲಕ್ಷ್ಮಿ ದೇವಾಲಯಗಳ ಕೃಷಿ ಭೂಮಿ ಹರಾಜಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.
ದೇಗುಲಗಳ ಕೃಷಿ ಜಮೀನು ಹರಾಜಿಗೆ ಮುಂದಾದ ಕಂದಾಯ ಇಲಾಖೆ: ಸ್ಥಳೀಯ ಮುಖಂಡರಿಂದ ಆಕ್ಷೇಪ - Gangavathi temple land auction
ಗಂಗಾವತಿ ತಾಲೂಕಿನ ರಂಗನಾಥ ಸ್ವಾಮಿ ಹಾಗೂ ಪಂಪಾಸರೋವರದ ಆದಿಲಕ್ಷ್ಮಿ ದೇವಾಲಯಗಳ ಕೃಷಿ ಭೂಮಿ ಹರಾಜಿಗೆ ಮುಂದಾದ ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳೀಯ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಂದಿನ ಮೂರು ವರ್ಷದ ಅವಧಿಗೆ ದೇಗುಲಗಳಿಗೆ ಸೇರಿದ 30.31 ಎಕರೆ ಜಮೀನನ್ನು ಹರಾಜಿಗೆ ಹಾಕಲು ಕಂದಾಯ ಇಲಾಖೆ ಮುಂದಾಗಿತ್ತು. ಇದರ ಭಾಗವಾಗಿ ತಹಶೀಲ್ದಾರ್ ಚಂದ್ರಕಾತ್, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ನೇತೃತ್ವದಲ್ಲಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇದೇ ವೇಳೆ ಸ್ಥಳೀಯ ಮುಖಂಡ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗ ಟಿ.ಜಿ.ಬಾಬು ನೇತೃತ್ವದಲ್ಲಿ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕಳೆದ ಹಲವು ವರ್ಷಗಳಿಂದ ಇಲ್ಲದ ಸಂಪ್ರದಾಯವನ್ನು ಈಗೇಕೆ ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ನಿರೀಕ್ಷಕ ಮಂಜುನಾಥ್, ಕಳೆದ ವರ್ಷವೇ ಈ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ತಾಂತ್ರಿಕ ಕಾರಣಕ್ಕೆ ಮುಂದೂಡಲಾಗಿತ್ತು ಎಂದು ತಿಳಿಸಿ, ದೇಗುಲಗಳ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು. ಈ ವೇಳೆ ಸುಮಾರು 120ಕ್ಕೂ ಹೆಚ್ಚು ರೈತರು ಹರಾಜಿನಲ್ಲಿ ಪಾಲ್ಗೊಂಡಿದ್ದರು.