ಕೊಪ್ಪಳ:ದತ್ತಪೀಠದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಏನು ಮಾಡುತ್ತಿದ್ದೀರಿ?. ಅಲ್ಲಿನ ಬಿಜೆಪಿ ಎಂಪಿ, ಎಂಎಲ್ಎ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೀವೇನು ನಿದ್ದೆ ಮಾಡುತ್ತಿದ್ದೀರಾ?. ದತ್ತಪೀಠದಲ್ಲಿ ಮುಸ್ಲಿಂಮರು ಹೋಗಿ ಮಾಂಸ ಊಟ ಮಾಡುತ್ತಾರೆ ಎಂದರೆ ಏನು ಅರ್ಥ. ಅಲ್ಲಿ 200 ಮೀಟರ್ ಅಂತರದಲ್ಲಿ ನಮಾಜ್ ಮಾಡಬಾರದು, ಮಾಂಸ ಊಟ ಮಾಡಬಾರದು ಎಂಬ ನಿಯಮವಿದೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ?. ದತ್ತಪೀಠದಿಂದಲೇ ಶೋಭಾ ಕರಂದ್ಲಾಜೆ, ಸಿಟಿ ರವಿ ಗೆದ್ದಿದ್ದಾರೆ. ನೀವು ಏನು ಮಾಡುತ್ತಿದ್ದೀರಿ? ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಅಲ್ಲಿನ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಯನ್ನು ಕಿತ್ತು ಬಿಸಾಕಿ. ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ. ನಮ್ಮಂತಹ ಹೋರಾಟಗಾರರಿಗೆ, ಹಿಂದುತ್ವವಾದಿಗಳಿಗೆ ರಾಜಕೀಯ ಬಾಗಿಲು ಮುಚ್ಚಿದೆ. ಪ್ರಾಮಾಣಿಕರಿಗೆ ಬೆಲೆ ಇಲ್ಲ. ಬಿಜೆಪಿಗೆ ಯಾವ ಹಿಂದುತ್ವವೂ ಇಲ್ಲ. ಯೋಗಿ ಆದಿತ್ಯನಾಥ ಅವರ ರೀತಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲಿಯೂ ಇಲ್ಲಿಯೂ ಒಂದೇ ಕಾನೂನು ಇದೆ. ರಾಜಕೀಯ ವ್ಯವಸ್ಥೆಯೇ ಲೂಟಿಕೋರ ವ್ಯವಸ್ಥೆಯಾಗಿದೆ. ಡಿ.ಕೆ ಶಿವಕುಮಾರ್ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದರು.
ಹಿಂದೂ ಧರ್ಮದಲ್ಲಿ ಒಂದು ಸಂಪ್ರದಾಯ, ಸಂಸ್ಕೃತಿ, ಶಾಸ್ತ್ರವಿದೆ. ಇದು ಕಾಂಗ್ರೆಸ್ ನವರಿಗೆ ಅರ್ಥವಾಗುವುದಿಲ್ಲ. ಏಕೆಂದರೆ ನೀವು ಮುಸ್ಲಿಮರ ವೋಟಿಗಾಗಿ ಜೊಲ್ಲು ಸುರಿಸುತ್ತೀರಿ. ವೋಟಿಗಾಗಿ ನೀವು ಈ ರೀತಿಯ ಸ್ಟಂಟ್ ಮಾಡುವುದರಿಂದ ಕಾಂಗ್ರೆಸ್ ಯಾವ ಸ್ಥಿತಿಗೆ ಬಂದಿದೆ ಎಂದು ಯೋಚಿಸಿ. ನೀವೇನಾದರೂ ನಮ್ಮ ಸಂಸ್ಕೃತಿ, ಸಂಪ್ರದಾಯ ಶಾಸ್ತ್ರಕ್ಕೆ ಅಪಮಾನ ಮಾಡಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.