ಗಂಗಾವತಿ: ಗಿಡದಿಂದ ಶೇಂಗಾ ಬೇರ್ಪಡಿಸಲು ವಿದ್ಯಾರ್ಥಿಯೊಬ್ಬ ಅತ್ಯಂತ ಸುಲಭ ಸಾಧನ ಬಳಸಿ ಪರಿಣಮಕಾರಿಯಾಗಿ ಕಾಳನ್ನು ಬೇರ್ಪಡಿಸುವ ಮೂಲಕ ಜನರ ಗಮನ ಸೆಳೆದ ಘಟನೆ ತಾಲೂಕಿನ ವೆಂಕಟಗಿರಿಯಲ್ಲಿನ ಹೊಲವೊಂದರಲ್ಲಿ ಕಂಡುಬಂದಿದೆ.
ಗಿಡದಿಂದ ಶೇಂಗಾ ಹೀಗೂ ಬೇರ್ಪಡಿಸಬಹುದು: ಒಮ್ಮೆ ಟ್ರೈ ಮಾಡಿ ನೋಡಿ
ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದ ಯುವಕನೊಬ್ಬ ಸುಲಭ ಸಾಧನ ಬಳಿಸಿ ಗಿಡದಿಂದ ಶೇಂಗಾ ಬೇರ್ಪಡಿಸುವ ಮೂಲಕ ಸ್ಥಳೀಯರ ಗಮನ ಸೆಳೆದಿದ್ದಾನೆ.
ಗ್ರಾಮದ ಭೀಮೇಶ ಎಂಬ 9ನೇ ತರಗತಿಯ ಬಾಲಕ ನೂತನ ಆವಿಷ್ಕಾರದ ಮೂಲಕ ಜನರ ಗಮನ ಸೆಳೆದಿದ್ದಾನೆ. ಕೊರೊನಾ ಹಿನ್ನೆಲೆ ಶಾಲೆಗಳು ಆರಂಭವಾಗದ ಕಾರಣ ಮನೆಯಲ್ಲಿಯೇ ಇದ್ದು ಕೃಷಿ ಕೆಲಸದಲ್ಲಿ ತಂದೆಗೆ ನೆರವಾಗುತ್ತಿದ್ದಾನೆ.
ತಮ್ಮ ಹೊಲದಲ್ಲಿ ಬೆಳೆದ ಶೇಂಗಾವನ್ನು ಸೈಕಲ್ ಹಿಂಬದಿ ತಿರುಗುವ ಚಕ್ರಕ್ಕೆ ಅಡ್ಡವಾಗಿ ಹಿಡಿಯುವ ಮೂಲಕ ಅತ್ಯಂತ ಸರಳವಾಗಿ ಶೇಂಗಾದ ಕಾಳುಗಳನ್ನು ಗಿಡದಿಂದ ಬೇರ್ಪಡಿಸುತ್ತಿದ್ದಾನೆ. ಶೇಕಡಾ 98 ರಷ್ಟು ಕಾಳುಗಳು ಇದರಿಂದ ಬೇರ್ಪಡುತ್ತವೆ. ಬಳಿಕ ಉಳಿದ ಒಂದೆರಡು ಕಾಳನ್ನು ಕೈಯಿಂದ ಕೀಳಬೇಕು. ಇದರಿಂದಾಗಿ ಸಮಯ ಉಳಿತಾಯವಾಗುವ ಜೊತೆಗೆ ಖರ್ಚು ಸಹ ಕಡಿಮೆಯಾಗುತ್ತದೆ.