ಗಂಗಾವತಿ (ಕೊಪ್ಪಳ) :ಹಾರ - ತುರಾಯಿ, ಶಾಲು - ಮಾಲೆಯಂತ ಸನ್ಮಾನದ ಬದಲಿಗೆ ತಮ್ಮನ್ನು ತಮ್ಮ ಅಭಿಮಾನಿಗಳು, ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಪುಸ್ತಕಗಳನ್ನು ನೀಡುವ ಮೂಲಕ ಸನ್ಮಾನಿಸಬೇಕು ಎಂದು ಹಿಂದುಳಿದ ವರ್ಗಗಳ ಸಮಾಜ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ :2023-24 ಸಾಲಿನ ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ಈ ಬಗ್ಗೆ ಮಾತನಾಡಿದ ಅವರು, ನನಗೆ ಹಾರ ತುರಾಯಿ ಹಾಕಿ ಹಣ ವ್ಯರ್ಥ ಮಾಡಬೇಡಿ. ಬದಲಿಗೆ ನನ್ನನ್ನು ಸನ್ಮಾನಿಸುವ ಉದ್ದೇಶ ಇದ್ದರೆ ಪ್ರಾಥಮಿಕ, ಪ್ರೌಢ ಶಾಲೆಯ ಮಕ್ಕಳಿಗೆ ಉಪಯೋಗವಾಗುವಂತಹ ಪುಸ್ತಕಗಳನ್ನು ಕೊಡಿ. ಇಂಗ್ಲೀಷ್ - ಕನ್ನಡ ವ್ಯಾಕರಣ, ಶಬ್ದಕೋಶ, ಡಿಕ್ಷನರಿ, ಮಕ್ಕಳ ಜ್ಞಾನ ವಿಕಸನಕ್ಕೆ ಪ್ರೇರಕವಾಗಬಲ್ಲ ಯೋಧರು ಸೇರಿದಂತೆ ನೈತಿಕ ಜ್ಞಾನ ವೃದ್ಧಿಸುವ ಪುಸ್ತಕ ನೀಡಬೇಕು. ಈ ಪುಸ್ತಕಗಳನ್ನು ಕನಕಗಿರಿ ಕ್ಷೇತ್ರದ ಸರ್ಕಾರಿ ಶಾಲೆಯ ಮಕ್ಕಳ ಜ್ಞಾನಾರ್ಜನೆಗೆ ಬಳಕೆ ಮಾಡಲಾಗುವುದು ಎಂದು ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಇದನ್ನೂ ಓದಿ :ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸಿ: ಕೃಷಿ ಸಚಿವ ಚಲುವರಾಯಸ್ವಾಮಿ
ಶಿವರಾಜ ತಂಗಡಗಿ ಮನವಿಗೆ ಸ್ಪಂದಿಸಿದ ಅವರ ಬೆಂಬಲಿಗರು ದೊಡ್ಡ ಮಟ್ಟದಲ್ಲಿ ಪ್ರಾಥಮಿಕ ಮತ್ತು ಪೌಢಶಾಲಾ ಮಕ್ಕಳಿಗೆ ಉಪಯೋಗವಾಗುವ ವಿಜ್ಞಾನ, ಗಣಿತ, ಸಾಮಾನ್ಯಜ್ಞಾನ, ಕನ್ನಡ - ಇಂಗ್ಲಿಷ್ ವ್ಯಾಕಾರದಂತಹ ಪುಸ್ತಕಗಳನ್ನು ತಂದು ಕೊಡುತ್ತಿದ್ದಾರೆ. ಮಂತ್ರಿಯಂತ ಪದವಿ ಪಡೆದ ಸಂದರ್ಭದಲ್ಲಿ ಸಹಜವಾಗಿ ದೊಡ್ಡಮಟ್ಟದಲ್ಲಿ ಅಭಿಮಾನಿಗಳ ಹಾರತುರಾಯಿ ಹಾಕುತ್ತಾರೆ. ಈ ಹಾರ - ತುರಾಯಿಗೆ ವ್ಯರ್ಥವಾಗುವ ಹಣದಿಂದ ಮಕ್ಕಳ ಜ್ಞಾನ ವಿಕಸನ ಮಾಡಬಹುದು ಎಂಬಕಾರಣಕ್ಕೆ ಹಾರತುರಿಯಿ ನಿರಾಕರಿಸುವ ಮೂಲಕ ತಂಗಡಗಿ ಸರಳತೆ ಮೆರೆದಿದ್ದಾರೆ.
ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರ; ಸಿದ್ದರಾಮಯ್ಯ ಟ್ವೀಟ್ : ಈ ಬಾರಿಯ ವಿಧಾನಸಬಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ರಾಜ್ಯದ ಅಧಿಕಾರ ವಹಿಸಿಕೊಂಡಿತ್ತು. ಈ ಸಂದರ್ಭದಲ್ಲಿ ನೂತನವಾಗಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ಸ್ವೀಕರಿಸಿದ ನಂತರ ಶಾಲು-ಶಲ್ಯಗಳನ್ನು ಸ್ವೀಕರಿಸದೇ ಇರಲು ನಿರ್ಧರ ಮಾಡಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದರು.
ಟ್ವೀಟ್ ನಲ್ಲಿ, ನಾಳೆಯಿಂದ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದೇನೆ. ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯ. ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು. ನಿಮ್ಮೆಲ್ಲರ ಪ್ರೀತಿ-ಅಭಿಮಾನ ಸದಾ ನನ್ನ ಮೇಲಿರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇದೀಗಾ ಇವರ ಹಾದಿಯಲ್ಲೇ ಸಚಿವರು ಕೂಡ ನಡೆಯುತ್ತಿರುವುದು ಸಂತಸದ ಸುದ್ದಿ ಆಗಿದೆ.
ಇದನ್ನೂ ಓದಿ :ಗ್ಯಾರಂಟಿ ನೆಪದಲ್ಲಿ ಮೂಲಸೌಕರ್ಯ ಅಭಿವೃದ್ದಿಗೆ ತಡೆಯೊಡ್ಡಿದರೆ, ಬೀದಿಗಿಳಿದು ಹೋರಾಟ ಮಾಡ್ತೇವಿ: ಮಾಜಿ ಸಚಿವ ಬಿ ಸಿ ಪಾಟೀಲ್