ಗಂಗಾವತಿ:ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಇಡೀ ರಾಜ್ಯದಾದ್ಯಂತ ಲಾಕ್ಡೌನ್ ಘೋಷಣೆ ಮಾಡಿದೆ. ಅಂದರೆ ಬಹುತೇಕ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸುವುದು, ಜನ ಸಂಚಾರ ಮಿತವಾಗಿಸುವುದು, ದಟ್ಟಣೆ ಇಲ್ಲದಂತೆ ಗಮನ ಹರಿಸುವುದು ಎಂದರ್ಥ. ಆದರೆ, ಈ ವೇಳೆ ಅಗತ್ಯ ವಸ್ತುಗಳಾದ ಹಾಲು, ಔಷಧಿ, ವೈದ್ಯಕೀಯ ಸೇವೆ, ತರಕಾರಿ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸರ್ಕಾರ ತಿಳಿಸಿತ್ತು. ಆದರೆ, ನಗರದಲ್ಲಿ ಇಂದು ವೈದ್ಯಕೀಯ ಚಿಕಿತ್ಸೆಯಂಥ ಅಗತ್ಯ ಸೇವೆಯೂ ಸಿಗದೇ ಜನರು ಪರದಾಡಿದ ಘಟನೆ ನಡೆಯಿತು.
ಲಾಕ್ಡೌನ್ ನೆಪದಲ್ಲಿ ಚಿಕಿತ್ಸಾ ಸೇವೆಗಳೂ ಬಂದ್: ಪರದಾಡಿದ ಜನ
ಲಾಕ್ಡೌನ್ ಸಂದರ್ಭದಲ್ಲಿ ಹಾಲು, ಔಷಧಿ, ವೈದ್ಯಕೀಯ ಸೇವೆ, ತರಕಾರಿ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯ ಸಿಗಲಿವೆ ಎಂದು ಸರ್ಕಾರ ತಿಳಿಸಿತ್ತು. ಆದರೆ ನಗರದಲ್ಲಿ ಆಸ್ಪತ್ರೆ ಸೇವೆಗಳೂ ಸಿಗದೆ ಜನರು ಪರದಾಡಿದ ಘಟನೆ ನಡೆದಿದೆ.
ನಗರದ ಬಹುತೇಕ ಖಾಸಗಿ ಕ್ಲಿನಿಕ್ಗಳ ವೈದ್ಯರು ಭಾನುವಾರ ರೋಗಿಗಳ ಕೈಗೆಟುಕದಷ್ಟು ದುಬಾರಿಯಾಗಿರುತ್ತಾರೆ. ಅಂದರೆ, ಕೇಂದ್ರ ಸ್ಥಳದಲ್ಲಿದ್ದರೂ ರೋಗಿಗಳ ಸೇವೆಗೆ ಹಾಜರಾಗದೇ ರಜೆ ಹಾಕಿ ಮನೆಯಲ್ಲಿರುತ್ತಾರೆ. ಇದಕ್ಕೆ ಸರ್ಕಾರಿ ಉಪವಿಭಾಗ ಆಸ್ಪತ್ರೆಯೂ ಹೊರತಾಗಿರಲಿಲ್ಲ. ಭಾನುವಾರ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದ ಹಿನ್ನೆಲೆ ಜನ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದರೂ ಅಲ್ಲಿಯೂ ಬಹುತೇಕ ವೈದ್ಯರು ರಜೆಯಲ್ಲಿದ್ದರು ಎನ್ನಲಾಗಿದೆ.
ಅಷ್ಟೆ ಅಲ್ಲದೇ, ಹೊರಗಿನಿಂದ ಬರುವ ರೋಗಿಗಳನ್ನು ಪ್ರವೇಶ ದ್ವಾರದಲ್ಲಿಯೇ ನಿರ್ಬಂಧಿಸಲಾಗಿತ್ತು. ಹೀಗಾಗಿ ಜನ ಅಗತ್ಯ ವೈದ್ಯಕೀಯ ಸೇವೆ ಸಿಗದೆ ಪರದಾಡಿದರು.