ಕರ್ನಾಟಕ

karnataka

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೊಪ್ಪಳದ ಶಿಲ್ಪಿ

By ETV Bharat Karnataka Team

Published : Jan 3, 2024, 10:31 AM IST

Updated : Jan 3, 2024, 2:11 PM IST

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕೊಪ್ಪಳದ ಶಿಲ್ಪಿ ನಾಗಮೂರ್ತಿ ಸ್ವಾಮಿ ಬಗ್ಗೆ ಅವರ ಮನೆಯವರು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

Koppal Sculptor participating in construction of Ayodhya Ram Mandir
ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೊಪ್ಪಳದ ಶಿಲ್ಪಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೊಪ್ಪಳದ ಶಿಲ್ಪಿ!

ಕೊಪ್ಪಳ: ಅಯೋಧ್ಯೆಯಲ್ಲಿ ರಾಮನ ಭವ್ಯವಾದ ಮಂದಿರ ಇದೇ ಜನವರಿ 22 ರಂದು ಲೋಕಾರ್ಪಣೆಗೊಳ್ಳಲು ಸಿದ್ಧಗೊಂಡಿದೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ದೇಶದ ನಾನಾ ಭಾಗದ ನೂರಾರು ಶಿಲ್ಪಿಗಳು ಪಾಲ್ಗೊಂಡಿದ್ದಾರೆ. ಹಾಗೆಯೇ ಕೊಪ್ಪಳ ಜಿಲ್ಲೆಯಿಂದಲೂ ಒಬ್ಬರು ಶಿಲ್ಪಿ ಮಂದಿರ ನಿರ್ಮಾಣದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲೆಯ ಯುವಶಿಲ್ಪಿ ಕಳೆದ ಒಂದು ತಿಂಗಳಿನಿಂದ ಅಯೋಧ್ಯೆಯಲ್ಲಿ ಕೆಲಸದಲ್ಲಿ ತೊಡಗಿದ್ದು, ಕುಟುಂಬದವರ ಜೊತೆಗೆ ಜಿಲ್ಲೆಯ ಜನರು ಹೆಮ್ಮೆಪಡುವಂತಾಗಿದೆ.

ಕೊಪ್ಪಳ ಜಿಲ್ಲೆಯ ಕಾತರಕಿ-ಗುಡ್ಲಾನೂರು ಗ್ರಾಮದ ಯುವಶಿಲ್ಪಿ ನಾಗಮೂರ್ತಿ ಸ್ವಾಮಿ ಎಂಬುವವರು ಕಳೆದ ಒಂದು ತಿಂಗಳ ಹಿಂದೆ ಅಯೋಧ್ಯೆಗೆ ತೆರಳಿ ರಾಮ ಮಂದಿರ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ನಾಗಮೂರ್ತಿ ಸ್ವಾಮಿ ಪಾಲ್ಗೊಂಡಿರುವುದಕ್ಕೆ ಕುಟುಂಬಸ್ಥರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ರಾಮಮಂದಿರ ಕಾಯಕ ಪುಣ್ಯದ ಕಾರ್ಯ:ಅಯೋಧ್ಯೆಗೆ ತೆರಳಿರುವ ಸಹೋದರನ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ವಿರೂಪಾಕ್ಷಸ್ವಾಮಿ, "ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪದಾಧಿಕಾರಿಗಳು ತಿಂಗಳ ಹಿಂದೆ ನನ್ನ ತಮ್ಮನಿಗೆ ಕರೆ ಮಾಡಿ, ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲ್ಪ ಕಲೆಗಾರರ ಅವಶ್ಯಕತೆ ಇದೆ ಬನ್ನಿ ಎಂದು ಕರೆದರು. ನನ್ನ ತಮ್ಮ ಈ ಕೆಲಸಕ್ಕೆ ಯಾವುದೇ ಫಲಾಪೇಕ್ಷೆ ವ್ಯಕ್ತಪಡಿಸದೆ ತೆರಳಿದ್ದಾನೆ. ರಾಮ ಜಮ್ಮಭೂಮಿಯಲ್ಲಿ ಶ್ರೀರಾಮನ ಹೆಸರಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದೇ ನಮ್ಮ ಪುಣ್ಯ" ಎಂದರು.

"ದೇಶದ ವಿವಿಧ ಭಾಗಗಳಿಂದ ಪ್ರಖ್ಯಾತ ಶಿಲ್ಪಿಗಳೆಲ್ಲ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಮಹತ್ತರ ಕಾರ್ಯಕ್ಕೆ ನಮ್ಮ ಮನೆಯಿಂದ ಒಬ್ಬರು ತೆರಳಿರುವುದು. ನಮಗಷ್ಟೇ ಅಲ್ಲ, ನಮ್ಮ ಗ್ರಾಮ, ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಅವಕಾಶ ಸಿಕ್ಕರೆ ನಮ್ಮ ಕುಟುಂಬದವರೆಲ್ಲ ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆಯಲಿದ್ದೇವೆ" ಎಂದು ನಾಗಮೂರ್ತಿ ಸ್ವಾಮಿ ಸಹೋದರ ವಿರೂಪಾಕ್ಷ ಸಂತಸ ಹಂಚಿಕೊಂಡರು.

ನಾಗಮೂರ್ತಿ ಸ್ವಾಮಿ ಅವರ ಅತ್ತಿಗೆ ರಂಜಿತ ಅವರು ಮಾತನಾಡಿ, "ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ನನ್ನ ಮೈದುನ ಕೂಡ ಪಾಲ್ಗೊಂಡಿರುವುದು ತುಂಬಾ ಖುಷಿಯಾಗುತ್ತಿದೆ. ನಮ್ಮ ಊರಿನವರು, ಜಿಲ್ಲೆಯವರು ಗುರುತಿಸುತ್ತಿರುವುದು ತುಂಬಾ ಹೆಮ್ಮೆಯಾಗುತ್ತದೆ. ಅಲ್ಲಿ ಕೆಲಸದ ಸಮಯದಲ್ಲಿ ಮೊಬೈಲ್​ ಬಳಕೆ ಇಲ್ಲ. ಬಿಡುವಾದಾಗಷ್ಟೇ ಫೋನ್​ ಮಾಡಿ ಮಾತನಾಡುತ್ತಾರೆ. ಅಲ್ಲಿನ ಕೆಲಸಗಳ ಬಗ್ಗೆ ಹೇಳುತ್ತಾರೆ. ಶ್ರೀ ರಾಮ ಜನ್ಮಭೂಮಿಯಲ್ಲಿ ಕೆಲಸ ಮಾಡಲು ನಾನು ಪುಣ್ಯ ಮಾಡಿದ್ದೇನೆ. ಹಿರಿಯರ ಆಶೀರ್ವಾದದಿಂದ ಈ ಅವಕಾಶ ನನಗೆ ಸಿಕ್ಕಿದೆ ಎಂದು ಯಾವಾಗಲೂ ಮೈದುನ ಹೇಳುತ್ತಿರುತ್ತಾರೆ" ಎಂದು ಹೇಳಿದರು.

ಇದನ್ನೂ ಓದಿ:ಅಯೋಧ್ಯೆ ರಾಮಮಂದಿರದಲ್ಲಿ ಶಿಲೆಯಾಗಿ ನಿಲ್ಲಲಿವೆ ಮೈಸೂರಿನ ಐದು ಕಲ್ಲುಗಳು

Last Updated : Jan 3, 2024, 2:11 PM IST

ABOUT THE AUTHOR

...view details