ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಅವಧಿಯಲ್ಲಿ ಕೈಹಿಡಿದ ಉಪಕಸುಬು: ಈ ರೈತನ ಜೀವನ ಸಿಹಿಯಾಗಿಸಿತು ಜೇನು ಸಾಕಾಣಿಕೆ - ಏಳುಕೋಟೇಶ್ ಕೋಮಲಾಪುರ ಜೇನು ಸಾಕಾಣಿಕೆ

ಕೊರೊನಾ ಪ್ರೇರಿತ ಲಾಕ್​ಡೌನ್​​ನಿಂದಾಗಿ ಎಲ್ಲಾ ಕಾರ್ಯಗಳೂ ಸ್ಥಗಿತಗೊಂಡಿದ್ದು, ಕೃಷಿಕರ ಬದುಕು ಸಹ ಕಂಗೆಟ್ಟಿತ್ತು. ಕೊಪ್ಪಳದ ರೈತನೋರ್ವ ಕೃಷಿಯೊಂದಿಗೆ ಜೇನು ಸಾಕಾಣಿಕೆಯನ್ನು ಉಪಕಸುಬಾಗಿಸಿಕೊಂಡಿದ್ದು, ಲಾಕ್​ಡೌನ್​​ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಉಪಕಸುಬು ಇವರ ಕೈಹಿಡಿದಿದೆ.

Honey Farming
ಜೇನು ಸಾಕಾಣಿಕೆಯಲ್ಲಿ ತೊಡಗಿರುವ ರೈತ

By

Published : Aug 4, 2020, 5:41 PM IST

ಕೊಪ್ಪಳ:ಲಾಕ್​ಡೌನ್​ ಅವಧಿಯಲ್ಲಿ ಕೆಲಸವಿಲ್ಲದೆ ಜೀವನ ನಡೆಸುವುದು ದುಸ್ಥರ ಎಂದು ಕೈಕಟ್ಟಿ ಕೂರುವವರ ಮಧ್ಯೆ ಇಲ್ಲೋರ್ವ ರೈತ ತನ್ನ ಉಪಕಸುಬಿನಿಂದಲೇ ಜೀವನ ನಡೆಸುತ್ತಿದ್ದಾರೆ.

ಕೊರೊನಾ ಭೀತಿಯಿಂದಾದ ಲಾಕ್​​ಡೌನ್ ನಿಂದ ತೊಂದರೆಗೆ ಸಿಲುಕಿದ್ದ ಸಾಮಾನ್ಯ ಜನರ ಬದುಕು ಇನ್ನೂ ಸುಧಾರಣೆ ಕಂಡಿಲ್ಲ. ಇಂತಹ ಸಂದರ್ಭದಲ್ಲಿಯೂ ಬದುಕಿಗೆ ಕೆಲವೊಂದು ಸಣ್ಣಪುಟ್ಟ ಕೆಲಸಗಳು ಕೈಹಿಡಿಯುತ್ತವೆ ಅನ್ನೋದು ಅಷ್ಟೇ ಸತ್ಯ. ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ರೈತ ಏಳುಕೋಟೇಶ್ ಕೋಮಲಾಪುರ ಎಂಬುವರು ಕೈಗೊಂಡ ಉಪ ಕಸುಬು ಇದೀಗ ಅವರ ಬದುಕಿಗೆ ದಾರಿ ದೀಪವಾಗಿದೆ.

ಜೇನು ಸಾಕಾಣಿಕೆಯಲ್ಲಿ ತೊಡಗಿರುವ ರೈತ ಏಳುಕೋಟೇಶ್

ಕಳೆದ ಹಲವಾರು ವರ್ಷಗಳಿಂದ ಏಳುಕೋಟೇಶ ಕೋಮಲಾಪುರ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಲಾಕ್​ಡೌನ್​​ನಿಂದಾಗಿ ಕೃಷಿ ಕಾರ್ಯ ನಿಂತು ಹೋಗಿದ್ದರೂ ಸಹ ಅವರ ಉಪಕಸುಬಾದ ಜೇನು ಸಾಕಾಣಿಕೆ ನಿಂತಿರಲಿಲ್ಲ. ಮನೆಯಲ್ಲಿರುವ ಅಲ್ಪ ಖಾಲಿ ಜಾಗವನ್ನೇ ಅವರು ಆದಾಯದ ಆಧಾರವಾಗಿ ಮಾಡಿಕೊಂಡಿರುವುದು ವಿಶೇಷ.

ಮನೆಯ ಮುಂದೆ ಇರುವ ಜಾಗದಲ್ಲಿಯೇ ಜೇನು ಸಾಕಾಣಿಕೆ ಮಾಡಿ ತಿಂಗಳಿಗೆ ಕನಿಷ್ಠ 3 ಸಾವಿರ ರೂಪಾಯಿಯಷ್ಟು ಆದಾಯ ಗಳಿಸುತ್ತಿರುವ ಏಳುಕೋಟೇಶ, ಮನೆಯ ಮುಂದೆ ಐದು ಜೇನುಪೆಟ್ಟಿಗೆ ಹಾಗೂ ಹೊಲದಲ್ಲಿ ಐದು ಪೆಟ್ಟಿಗೆ ಮೂಲಕ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ.

ಈ ಉಪಕಸುಬಿನಿಂದಾಗಿ ಕೊರೊನಾ ಸಂದರ್ಭದಲ್ಲಿಯೂ ಏಳುಕೋಟೇಶ ಅವರು ಜೇನು ಸಾಕಾಣಿಕೆಯಿಂದ ಬದುಕಿಗೆ ಅನುಕೂಲವಾಗುವಷ್ಟು ಆದಾಯ ಗಳಿಸಿದ್ದಾರೆ. ಹೀಗಾಗಿ ಅವರಿಗೆ ಲಾಕ್​​ಡೌನ್ ಸಂಕಷ್ಟದಲ್ಲಿಯೂ ಈ ಕಸುಬು ಕೈ ಹಿಡಿದಿದೆ.

ರೈತರು ತಾವು ಮಾಡುವ ಕೃಷಿ ಅಥವಾ ಬೇರೆ ಕೆಲಸದ ಜೊತೆಗೆ ಉಪ ಕಸುಬುಗಳನ್ನು ಮಾಡಿಕೊಂಡರೆ ಅದರಿಂದ ಅನುಕೂಲವಾಗುತ್ತವೆ. 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಏಳುಕೋಟೇಶ್​ ಅವರು, ಜೇನು ಸಾಕಾಣಿಕೆ ಉಕಸುಬು ಅನಿರೀಕ್ಷಿತವಾಗಿ ಎದುರಾಗುವ ಸಂಕಷ್ಟಗಳಿಗೆ ಕೊಂಚ ನೆರವಾಗುತ್ತದೆ ಎಂದು ತಿಳಿಸಿದರು.

ABOUT THE AUTHOR

...view details