ಕೊಪ್ಪಳ:ನಗರದ ಪ್ರಸಿದ್ಧ ಶ್ರೀ ಗವಿಮಠ ವೃಕ್ಷ ದಾಸೋಹ ಆರಂಭಿಸಿದೆ. ಅಂದರೆ ಶ್ರೀ ಮಠಕ್ಕೆ ಬರುವ ಭಕ್ತರಿಗೆ ಉಚಿತವಾಗಿ ವಿವಿಧ ಬಗೆಯ ಸಸಿಗಳನ್ನು ಉಚಿತವಾಗಿ ನೀಡುವ ಮೂಲಕ ವೃಕ್ಷ ದಾಸೋಹದ ಹೆಸರಿನಲ್ಲಿ ಹಸಿರು ಸೇವೆ ಸಲ್ಲಿಸುತ್ತಿದೆ.
ಗವಿಮಠದಲ್ಲಿ 'ವೃಕ್ಷ ದಾಸೋಹ'ದ ಹೆಸರಿನಲ್ಲಿ ಹಸಿರು ಸೇವೆ - Vriksha Dasoha
ಕೊಪ್ಪಳದ ಗವಿಮಠವು ಮಠಕ್ಕೆ ಬರುವ ಭಕ್ತರಿಗೆ ಉಚಿತವಾಗಿ ವಿವಿಧ ಬಗೆಯ ಸಸಿಗಳನ್ನು ಉಚಿತವಾಗಿ ನೀಡುವ ಮೂಲಕ ವೃಕ್ಷ ದಾಸೋಹದ ಹೆಸರಿನಲ್ಲಿ ಹಸಿರು ಸೇವೆ ಮಾಡುತ್ತಿದೆ.
![ಗವಿಮಠದಲ್ಲಿ 'ವೃಕ್ಷ ದಾಸೋಹ'ದ ಹೆಸರಿನಲ್ಲಿ ಹಸಿರು ಸೇವೆ Green service in the name of 'Vriksha Dasoha' in Sri Gavimath](https://etvbharatimages.akamaized.net/etvbharat/prod-images/768-512-7790268-940-7790268-1593238856334.jpg)
ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ಸಾಮಾಜಿಕ ಹೊಣೆಗಾರಿಕೆ ಹೊತ್ತು ಕಾರ್ಯಕ್ರಮಗಳನ್ನು ಆಯೋಜಿಸಿ ಅನುಷ್ಠಾನಗೊಳಿಸುವ ಶ್ರೀ ಗವಿಮಠವು ಈ ವರ್ಷ ಲಕ್ಷ ವೃಕ್ಷೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಅದಕ್ಕಾಗಿ ಶ್ರೀಮಠದ ಹಿಂಭಾಗದಲ್ಲಿ ಸುಮಾರು ಒಂದು ಲಕ್ಷದಷ್ಟು ವಿವಿಧ ಬಗೆಯ ಸಸಿಗಳನ್ನು ತಂದಿಡಲಾಗಿತ್ತು. ಈ ಸಸಿಗಳನ್ನು ಪರಿಸರ ದಿನದಂದು ಹಲವೆಡೆ ನೆಡುವ ಚಿಂತನೆಯಿತ್ತು. ಆದರೆ, ಕೊರೊನಾ ಭೀತಿ ಹಿನ್ನೆಲೆ ತಂದಿಟ್ಟ ಸ್ಥಳದಲ್ಲಿ ಹಾಗೇ ಉಳಿದಿವೆ. ಹೀಗಾಗಿ, ಈ ಸಸಿಗಳನ್ನು ಈಗ ಮಠಕ್ಕೆ ಬರುವ ಭಕ್ತರಿಗೆ ಉಚಿತವಾಗಿ ನೀಡಲು ಶ್ರೀ ಗವಿಮಠ ಮುಂದಾಗಿದೆ.
ಶ್ರೀಮಠದ ಆವರಣದಲ್ಲಿ ವೃಕ್ಷ ದಾಸೋಹ ನಡೆಸಿದ್ದು, ಮನೆಯ ಮುಂದೆ, ತಮ್ಮ ಹೊಲದಲ್ಲಿ ಸಸಿ ನೆಡ ಬಯಸುವ ಭಕ್ತರು ಶ್ರೀಮಠದ ಆವರಣದಲ್ಲಿ ಇಟ್ಟಿರುವ ಸಸಿಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ. ಈಗಾಗಲೇ ಭಕ್ತರು ಮಠಕ್ಕೆ ಬಂದು ಸಸಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಒಬ್ಬರು ಗರಿಷ್ಠ 8 ರಿಂದ 10 ಸಸಿಗಳನ್ನು ವೃಕ್ಷ ದಾಸೋಹದ ಮೂಲಕ ಶ್ರೀಮಠದಿಂದ ತೆಗೆದುಕೊಂಡು ಹೋಗಿ ನೆಡಬಹುದು ಎಂದು ಶ್ರೀಮಠ ತಿಳಿಸಿದೆ. ಲಕ್ಷ ವೃಕ್ಷೋತ್ಸವಕ್ಕಾಗಿ ಬೆಳೆಸಿದ್ದ ಸಸಿಗಳು ಬೇರೂರಲು ಕಾಯುತ್ತಿವೆ ಎಂದು ಈಟಿವಿ ಭಾರತ ಇತ್ತೀಚಿಗೆ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.