ಕರ್ನಾಟಕ

karnataka

ETV Bharat / state

ಕೊಪ್ಪಳ: ಕೇಂದ್ರ ತಂಡದಿಂದ ಬರ ಪರಿಸ್ಥಿತಿ ಪರಿಶೀಲನೆ - ತಂಡವು ಯರಗೇರಾ ಹನುಮನಾಳ ಹೋಬಳಿ

ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಯಲಬುರ್ಗಾ, ಕುಷ್ಟಗಿ ತಾಲೂಕಿನ ವಿವಿಧ ಹೋಬಳಿಯ ರೈತರ ಜಮೀನಿನಲ್ಲಿ ತೀವ್ರ ಬರ ಪರಿಸ್ಥಿತಿಯ ಅಧ್ಯಯನ ಕೈಗೊಂಡರು.

Drought status check in Koppal district
ಕೊಪ್ಪಳ ಜಿಲ್ಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡವೂ ಬರಸ್ಥಿತಿಯನ್ನು ಪರಿಶೀಲನೆ ನಡೆಸಿತು.

By ETV Bharat Karnataka Team

Published : Oct 6, 2023, 10:41 PM IST

ಕೊಪ್ಪಳ:ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಇಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಬರದ ಪರಿಸ್ಥಿತಿಯ ಜೊತೆಗೆ ಹಸಿರು ಬರದ ದುಸ್ಥಿತಿ ದಾಖಲಿಸಿದರು. ಅಧ್ಯಯನ ತಂಡದಲ್ಲಿ ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ್, ಪಶುಸಂಗೋಪನೆ ಇಲಾಖೆಯ ನಿರ್ದೇಶಕ ಆರ್.ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಇದ್ದರು. ಅಧಿಕಾರಿಗಳ ತಂಡವು ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ವಿವಿಧ ಹೋಬಳಿಯ ರೈತರ ಜಮೀನಿನಲ್ಲಿನ ಬರ ಅಧ್ಯಯನ ಕೈಗೊಂಡಿತು.

ಯಲಬುರ್ಗಾ ಹೋಬಳಿಯ ಬಂಡಿ ಗ್ರಾಮದ ರೈತ ಮಹಿಳೆಯ ಹೊಲಕ್ಕೆ ತಂಡ ಭೇಟಿ ನೀಡಿದ ವೇಳೆ "ಮೂರು ತಿಂಗಳಾಯ್ತು ಬಿತ್ತಿ. ಮಳೆ ಇಲ್ಲದೆ ಬೆಳೆ ಹಾಳಾಯ್ತು" ಎಂದು ಶರಣಮ್ಮ ರೊಟ್ಟಿ ಗೋಳಿಟ್ಟರು. ಕಳೆದ ವರ್ಷ ಇದೇ ಸಜ್ಚಿ ಬೆಳೆ ಸರಿಯಾಗಿ ಬಂದಿತ್ತು ಎಂದು ಹಿಂದಿನ ವರ್ಷದ ಸಜ್ಜೆ ತೆನೆಗಳನ್ನು ರೈತ ಮಹಿಳೆ ಅಧಿಕಾರಿಗಳಿಗೆ ತೋರಿಸಿದರು. ಬೆಳೆ ಹಾಳಾಗಿದ್ದರಿಂದ ಜೀವನ ಹೇಗೆ ನಡೆಸ್ತೀರಿ? ನಿಮಗೆ ಎಷ್ಟು ಜನ ಮಕ್ಕಳು? ಬೆಳೆ ವಿಮೆ ಮಾಡಿಸಿದ್ದೀರಾ? ಎಂದು ತಂಡದ ಅಧಿಕಾರಿಗಳು ಶರಣಮ್ಮ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದರು.

ಅಧಿಕಾರಿಗಳು ಬಂಡಿ ಗ್ರಾಮದಲ್ಲಿನ ಮತ್ತೊಬ್ಬ ರೈತ ಚಂದ್ರಶೇಖರ ಬಡಿಗೇರ ಅವರ ಎರಡೂವರೆ ಎಕರೆ ಹೊಲದಲ್ಲಿ ಬೆಳೆದ ಸಜ್ಜೆ ಬೆಳೆಯ ವೀಕ್ಷಣೆ ನಡೆಸಿ ಮಾಹಿತಿ ಪಡೆದರು. ಅಲ್ಲಿಂದ ಬೆನಕನಾಳ ಗ್ರಾಮಕ್ಕೆ ತೆರಳಿ ರೈತ ಹನುಮಪ್ಪ ಸೆಡ್ಡಿಬಟ್ಟಲದ ಅವರ ಹೊಲಕ್ಕೆ ಭೇಟಿ ನೀಡಿ ಮೆಕ್ಕೆಜೋಳ ಬೆಳೆ ವೀಕ್ಷಣೆ ನಡೆಸಿದರು.

"ನಮ್ಮ ಎರಡು ಎಕರೆ ಹೊಲದಲ್ಲಿನ ಮೆಕ್ಕೆಜೋಳ ಬೆಳೆಯು ಮಳೆ ಇಲ್ಲದೇ ಹಾಳಾಗಿದೆ. ಪರಿಹಾರ ಸಿಗದೇ ಇದ್ದರೆ ಸಾವೇ ಗತಿ" ಎಂದು ಬೆನಕನಾಳ ಗ್ರಾಮದ ರೈತ ಮಲ್ಲಪ್ಪ ಬಿಂಗಿಕೊಪ್ಪದ ಅಳಲು ತೋಡಿಕೊಂಡರು. ಬಳಿಕ ತಂಡವು ಯರಗೇರಾ ಹನುಮನಾಳ ಹೋಬಳಿಯ ಬಾದಿಮನಾಳ, ಚಳಗೇರಾ ಗ್ರಾಮಕ್ಕೆ ತೆರಳಿ ಗ್ರಾಮದ ರೈತ ಶರಣಪ್ಪ ಬಾರಕೇರ ಅವರ ತೋಟಗಾರಿಕಾ ಬೆಳೆ ಹಾನಿಯಾಗಿದ್ದನ್ನು ಪರಿಶೀಲಿಸಿದರು.

ಸಂಸದರಿಂದ ಮನವರಿಕೆ: ಸಂಸದ ಕರಡಿ ಸಂಗಣ್ಣ ಬರ ಅಧ್ಯಯನ ತಂಡದ ಅಧಿಕಾರಿಗಳೊಂದಿಗೆ ಖುದ್ದು ಹಾಜರಿದ್ದು ಯಲಬುರ್ಗಾ, ಕುಷ್ಟಗಿ ತಾಲೂಕಿನ ವಿವಿಧೆಡೆ ಸಂಚರಿಸಿ, ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ಖುದ್ದು ತಾವೇ ಮನವರಿಕೆ ಮಾಡಿದರು.

ಜಿಲ್ಲಾಧಿಕಾರಿಗಳಿಂದ ಮಾಹಿತಿ: ಕೊಪ್ಪಳ ಜಿಲ್ಲೆಯಿಂದ ಕೇಂದ್ರ ಸರ್ಕಾರಕ್ಕೆ ತೀವ್ರ ಬರದ ವರದಿ ಜತೆಗೆ ಗ್ರೀನ್ ಡ್ರಾಟ್ (ಹಸಿರು ಬರ) ವರದಿಯನ್ನೂ ಸಹ ಕಳುಹಿಸಲಾಗಿದೆ. ಕೆಲವು ಕಡೆಗಳಲ್ಲಿ ಬೆಳೆ ಹಸಿರಾಗಿ ಕಾಣಿಸಿದಾಗ ರೈತರಿಗೆ ಕಡಿಮೆ ಇಳುವರಿ ಬಂದು ನಷ್ಟ ಅನುಭವಿಸಿದ್ದಾರೆ ಎಂದು ಇದೇ ವೇಳೆ ಜಿಲ್ಲಾಧಿಕಾರಿಗಳು, ತಂಡದವರಿಗೆ ಹಸಿರು ಬೆಳೆ ತೋರಿಸಿ, ಆ ಹಸಿರು ಬೆಳೆಯಿಂದ ಇಳುವರಿ ಪ್ರಮಾಣದಲ್ಲಿ ಕುಸಿತ ಉಂಟಾಗಿ ರೈತರು ನಷ್ಟ ಅನುಭವಿಸಿದ್ದಾರೆ ಎಂದು ಅಧಿಕಾರಿಗಳಿಗೆ ಡಿಸಿ ನಳಿನ್ ಅತುಲ್ ಮನವರಿಕೆ ಮಾಡಿದರು.

ಬರ ಇದ್ದಾಗಲೂ ಬೆಳೆಗಳು ಹಸಿರಾಗಿರುತ್ತವೆ. ಬೆಳೆಗಳು ಹಸಿರಾಗಿದ್ದರೂ, ಇಳುವರಿನಲ್ಲಿ ಕುಂಠಿತವಾಗುತ್ತದೆ ಎಂಬುದನ್ನು ಗಮನಿಸಬೇಕು. ಕೊಳವೆ ಬಾವಿಯ ನೀರಾವರಿ ಪ್ರದೇಶ, ಹಸಿರು ಬೆಳೆ ಪ್ರದೇಶ ಇದ್ದಾಗ್ಯೂ ಮಳೆಯಾಗದೇ ಕುಷ್ಟಗಿ ತಾಲೂಕಿನ ಬಹುತೇಕ ಪ್ರದೇಶದಲ್ಲಿನ ಹಸಿರು ಬೆಳೆಯಿಂದ ಕಡಿಮೆ ಇಳುವರಿ ಬಂದು ರೈತರಿಗೆ ಸಾಕಷ್ಟು ಹಾನಿಯಾಗಿದೆ ಎಂಬುದರ ಬಗ್ಗೆ ಮನವರಿಕೆ ಮಾಡಲು, ಅತಿ ಕಡಿಮೆ ಮಳೆ ಬಿದ್ದ ಯಲಬುರ್ಗಾ, ಕುಷ್ಟಗಿ ತಾಲೂಕುಗಳಿಗೆ ಸಹ ಬರ ಅಧ್ಯಯನ ತಂಡವನ್ನು ಕರೆಯಿಸಿ, ತಂಡದಲ್ಲಿನ ಅಧಿಕಾರಿಗಳಿಗೆ ಇಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂಓದಿ:ನಾಳೆ ಧಾರವಾಡಕ್ಕೆ ಬರ ಅಧ್ಯಯನ ತಂಡ ಆಗಮನ: ಹಿಂಗಾರು ಬಿತ್ತನೆ ಆರಂಭ ಮಾಡಿದ ರೈತರ ಅಸಮಾಧಾನ

ABOUT THE AUTHOR

...view details