ಕರ್ನಾಟಕ

karnataka

By

Published : May 5, 2020, 10:55 PM IST

ETV Bharat / state

ಕುಷ್ಟಗಿಯಲ್ಲಿ ಹೆಸರು ಕಾಳು ಬಿತ್ತನೆ ಬೀಜ ವಿತರಣೆಗೆ ರೈತ ಕೇಂದ್ರದಿಂದ ಸಕಲ ಸಿದ್ಧತೆ

ಜಿಲ್ಲೆಯಲ್ಲಿ ಹದವಾಗಿ ಮಳೆಯಾಗುತ್ತಿರುವ ಹಿನ್ನೆಲೆ ರೈತರು ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ. ಈ ಹಿನ್ನೆಲೆ ಮೊದಲ ಬೆಳೆಯಾಗಿ ಹೆಸರು ಬೆಳೆ ಬೀಜ ಮಾರಾಟಕ್ಕಾಗಿ ರೈತ ಸಂಪರ್ಕ ಕೇಂದ್ರ ಸಕಲ ಸಿದ್ಧತೆ ನಡೆಸಿದೆ.

District farmers' preparation for agricultural activities
ತಾಲೂಕಿನಲ್ಲಿ ಹೆಸರು ಬೇಳೆ ಬೀಜ ವಿತರಣೆಗೆ ರೈತ ಕೇಂದ್ರದಿಂದ ಸಕಲ ಸಿದ್ಧತೆ

ಕುಷ್ಟಗಿ (ಕೊಪ್ಪಳ): ಮುಂಗಾರು ಹಂಗಾಮಿಗೆ ತಾಲೂಕಿನಲ್ಲಿ ಅಲ್ಲಲ್ಲಿ ಮಳೆಯಾಗಿದ್ದು, ಹೆಸರು ಕಾಳು ಬಿತ್ತನೆಗೆ ಸಕಾಲವಾಗಿದೆ. ಈ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿಗೆ 2.4 ಟನ್ ಬಿಜಿಎಸ್-ಆರ್ ತಳಿಯ ಹೆಸರು ಬಿತ್ತನೆ ಬೀಜ ಪೂರೈಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರತಿ 5 ಕೆಜಿ ಪಾಕೇಟ್​​ಗೆ 487.50 ರೂ. ಪೂರ್ಣ ದರವಿದ್ದು, ಸಬ್ಸಿಡಿ ದರದಲ್ಲಿ ಸಾಮಾನ್ಯ ರೈತರಿಗೆ 362.50 ರೂ., ಎಸ್​​​ಸಿ-ಎಸ್​​​​​ಟಿ ವರ್ಗದ ರೈತರಿಗೆ 300 ರೂ. ದರದಂತೆ ತಾಲೂಕಿನ ಕುಷ್ಟಗಿ, ಹನುಮಸಾಗರ, ತಾವರಗೇರಾ, ಹನುಮನಾಳ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬಿಜಿಎಸ್-ಆರ್ ತಳಿಯ ಬಿತ್ತನೆಯ ಬೀಜಗಳನ್ನು ಭಾರತೀಯ ಬೀಜ ನಿಗಮ, ಕೆಓಎಫ್, ಮೂಲಕ ಮೊದಲ ಆದ್ಯತೆಯಾಗಿ ವಿತರಿಸಲಾಗುತ್ತಿದೆ. ಹೆಸರು ಬೇಳೆ 75 ದಿನದ ಬೆಳೆಯಾಗಿದ್ದು, ಈ ಮಳೆಗೆ ಬಿತ್ತನೆ ಕೈಗೊಂಡರೆ ಹಳದಿ ರೋಗ ಮುಕ್ತವಾಗಲಿದ್ದು, ಇಳುವರಿ ಉತ್ತಮವಾಗಲಿದೆ. ತಾಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಮಳೆಯಾಗಿಲ್ಲ, ಅಲ್ಲಲ್ಲಿ ಮಳೆಯಾಗಿದೆ. ರೈತರು ಭೂಮಿಯನ್ನು ಹದ ಮಾಡಿಟ್ಟುಕೊಳ್ಳಲು ಅನುಕೂಲವಾಗಲಿದೆ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಾಲಪ್ಪ ಜಲಗೇರಿ ಮಾಹಿತಿ ನೀಡಿದರು.

ABOUT THE AUTHOR

...view details