ಕರ್ನಾಟಕ

karnataka

ETV Bharat / state

ಕೊಪ್ಪಳ: ಈರುಳ್ಳಿ ಬೆಲೆ ಹೆಚ್ಚಾದರೂ ಬೆಳೆಗಾರರಲ್ಲಿ ಕಾಣದ ಸಂತಸ

ಬರದಿಂದಾಗಿ ಮಾರುಕಟ್ಟೆಗೆ ಈರುಳ್ಳಿ ಆವಕ ಕಡಿಮೆಯಾಗಿದ್ದು, ಬೆಲೆ ಹೆಚ್ಚಾಗುತ್ತಿದೆ.

By ETV Bharat Karnataka Team

Published : Nov 2, 2023, 12:28 PM IST

ಈರುಳ್ಳಿ ಬೆಲೆ
ಈರುಳ್ಳಿ ಬೆಲೆ

ಕೊಪ್ಪಳ: ರಾಜ್ಯದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದ್ದರೂ ರೈತರಲ್ಲಿ ಸಂತಸ ಕಾಣುತ್ತಿಲ್ಲ. ಮಳೆ ಕೊರತೆಯಿಂದಾಗಿ ಗಡ್ಡೆಯಾಗುವ ಮೊದಲೇ ಈರುಳ್ಳಿ ಒಣಗಿ ನಿಂತಿದ್ದು, ರೈತರ ಕಣ್ಣಲ್ಲಿ ನೀರು ತರಿಸಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ನೂರಾರು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದರು. ಆದರೆ ಉತ್ತಮ ಬೆಳೆ ಬರುತ್ತದೆ ಎಂದು ಕನಸು ಕಂಡಿದ್ದ ರೈತರಿಗೆ ಇದೀಗ ಸಿಡಿಲು ಬಡಿದಂತಾಗಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನದಿನಕ್ಕೆ ಏರುತ್ತಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಹಿಂಗಾರು ಕೂಡಾ ಸಮಯಕ್ಕೆ ಸರಿಯಾಗಿ ಬರದೇ ಈರುಳ್ಳಿ ಗಡ್ಡೆಯಾಗುವ ಸಮಯದಲ್ಲಿಯೇ, ನೀರಿನ ಕೊರತೆಯಿಂದ ಹಾಳಾಗುತ್ತಿದೆ. ಮಳೆಯಾಗಿದ್ದರೆ ಗಡ್ಡೆಗಳು ಉತ್ತವಾಗಿ ಆಗುತ್ತಿದ್ದವು. ಗಡ್ಡೆಯಾಗದ ಈರುಳ್ಳಿ ಬಳಕೆಗೆ ಬಾರದೇ ರೈತರು ಜಮೀನಿನಲ್ಲಿ ಹಾಗೆಯೇ ಬಿಟ್ಟಿದ್ದಾರೆ. ಇದೇ ಕಾರಣದಿಂದ ಮಾರುಕಟ್ಟೆಗೆ ಈರುಳ್ಳಿ ಆವಕ ಕಡಿಮೆಯಾಗಿದ್ದು ಬೆಲೆ ಹೆಚ್ಚಾಗುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಈರುಳ್ಳಿ ಬೆಲೆ 7 ಸಾವಿರ ರೂಪಾಯಿಗೂ ಹೆಚ್ಚಿದೆ. ಉತ್ತಮ ಫಸಲು ಬಂದಾಗ ಈ ಬೆಲೆ ಸಿಕ್ಕಿದ್ದರೆ ರೈತರಿಗೆ ಲಾಭವಾಗುತ್ತಿತ್ತು. ಆದರೆ ಬೆಲೆ ಹೆಚ್ಚಾಗಿದ್ದರೂ ಕೂಡಾ ರೈತರ ಬಳಿ ಈರುಳ್ಳಿ ಇಲ್ಲದೇ ಇರುವುದರಿಂದ ಲಾಭ ಸಿಗದಂತಾಗಿದೆ.

ಕಳೆದ ವರ್ಷ ಅಧಿಕ ಮಳೆಯಿಂದಾಗಿ ಬೆಳೆದ ಈರುಳ್ಳಿಯೆಲ್ಲಾ ಕೊಳೆತು ಹೋಗಿತ್ತು. ಈ ಬಾರಿ, ಮಳೆ ಕೊರತೆಯಿಂದ ಈರುಳ್ಳಿ ಬೆಳೆದಿದ್ದರೂ ಸರಿಯಾದ ಆಕಾರದಲ್ಲಿ ಗಡ್ಡೆಯಾಗದೇ ಹಾಳಾಗಿದೆ. ಒಂದು ಎಕರೆ ಈರುಳ್ಳಿ ಬೆಳೆಯಲು 25 ಸಾವಿರ ರೂ. ಖರ್ಚು ಮಾಡಿದ್ದೇವೆ. ಇದೀಗ ಬೆಲೆ ಇದ್ದರೂ ಲಾಭ ಇಲ್ಲ. ನಾವು ಮಾಡಿದ ಖರ್ಚು ಕೂಡಾ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಒಂದೆಡೆ ಬೆಳೆದ ಬೆಳೆ ಕೈ ಸೇರದಂತಾಗಿದೆ. ಇನ್ನೊಂದೆಡೆ ಸರಕಾರದ ಬರ ಪರಿಹಾರ ಕೂಡ ಬಂದಿಲ್ಲ. ಇಂತಹ ಸಂದರ್ಭದಲ್ಲಿ ವರ್ಷವಿಡೀ ಜೀವನ ನಡೆಸುವುದು ಹೇಗೆ?, ಈಗಾಗಲೇ ಆನೇಕ ಬಾರಿ ಈರುಳ್ಳಿ ಬೆಳೆ ಮಧ್ಯೆ ಬೆಳೆದ ಕಳೆ ಕೀಳಿಸಿದ್ದೇವೆ. ಅವರಿಗೂ ಇನ್ನೂ ಕೂಲಿ ಕೊಟ್ಟಿಲ್ಲ. ಸರ್ಕಾರದ ಪರಿಹಾರ ಇಂದು ಬಂದೀತು, ನಾಳೆ ಬಂದೀತು ಎಂದು ಕಾಯ್ದು ಕುಳಿತುಕೊಳ್ಳುವ ಸ್ಥಿತಿ ಇದೆ ಎಂದು ರೈತ ಮಹಿಳೆ ನೀಲವ್ವ ಹೇಳಿದರು.

ಇದನ್ನೂ ಓದಿ:ಕೊಪ್ಪಳ: ಮಳೆ ಇಲ್ಲದೆ ಒಣಗುತ್ತಿರುವ ಬೆಳೆ, ಬಿಂದಿಗೆ ಹಿಡಿದು ನೀರುಣಿಸುತ್ತಿರುವ ರೈತ; ಬರ ಪರಿಹಾರಕ್ಕೆ ಒತ್ತಾಯ

ABOUT THE AUTHOR

...view details