ಕುಷ್ಟಗಿ:ತಾಲೂಕಿನ ಹನುಮಸಾಗರ ಹಾಗೂ ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆ ಕಾರಣ ಹೆಸರು ಬೆಳೆ ಕಮರುತ್ತಿರುವ ಹಿನ್ನೆಲೆ ಇಂದು ಸಂಸದ ಕರಡಿ ಸಂಗಣ್ಣ ಭೇಟಿ ನೀಡಿ ಪರಿಶೀಲಿಸಿದರು.
ಜಾಗೀರಗುಡದೂರು ಗ್ರಾಮದ ರೈತ ಮುತ್ತಣ್ಣ ಹನುಮಸಾಗರ ಎಂಬುವರ 8 ಎಕರೆ ಪ್ರದೇಶದಲ್ಲಿ ಒಣಗಿದ ಸ್ಥಿತಿಯಲ್ಲಿದ್ದ ಹೆಸರು ಬೆಳೆಯನ್ನು ಪರಿಶೀಲಿಸಿದರು. ಬಳಿಕ ಮಳೆ ಕೊರತೆಯಿಂದ ಆಗುತ್ತಿರುವ ವ್ಯಾಪಕ ಬೆಳೆ ಹಾನಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ದೊರಕಿಸಲು ಪ್ರಯತ್ನಿಸುವ ಭರವಸೆ ನೀಡಿದರು. ಮಳೆ ಕೊರತೆಯಿಂದ ತಾಲೂಕಿನ ಹೆಸರು ಬೆಳೆ ಸ್ಥಿತಿ ಬಗ್ಗೆ ವರದಿ ನೀಡಲು ಕೃಷಿ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.