ಕೊಪ್ಪಳ:ಹೊಸವರ್ಷವನ್ನು ಕೇಕ್ ಕತ್ತರಿಸಿ ಸ್ವಾಗತಿಸುವುದು ವಾಡಿಕೆ. ಹೀಗಾಗಿ ಪ್ರತಿ ವರ್ಷವೂ ಕೇಕ್ ತಯಾರಿಕೆ ಹಾಗೂ ವ್ಯಾಪಾರ ಜೋರಾಗಿರುತ್ತಿತ್ತು. ಆದರೆ, ಒಮಿಕ್ರಾನ್ ಹಾಗೂ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದರ ಪರಿಣಾಮವಾಗಿ ಈ ಬಾರಿ ಕೇಕ್ ವ್ಯಾಪಾರ ಕುಸಿದಿರುವುದು ಕೇಕ್ ತಯಾರಕರಲ್ಲಿ ಹೊಸ ವರ್ಷದ ಸಂಭ್ರಮ ಮಂಕಾಗಿದೆ.
ಕೊರೊನಾ ಹರಡುವಿಕೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ 10 ದಿನಗಳ ನೈಟ್ ಕರ್ಫ್ಯೂ ಹಾಗೂ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮಗಳ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರಿಂದಾಗಿ ಈ ವರ್ಷ ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡುವಂತಿಲ್ಲ. ಇದು ಕೇಕ್ ತಯಾರಕರ ಮೇಲೂ ಪರಿಣಾಮ ಬಿದ್ದಿದೆ.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಬಗೆ ಬಗೆಯ ಕೇಕ್ಗಳು ಸಿದ್ಧವಾಗುತ್ತಿದ್ದವು. ಹೊಸವರ್ಷದ ಸಂದೇಶ, ಪ್ರಮುಖ ಘಟನೆಗಳ ಕುರಿತು ಕೇಕ್ಗಳನ್ನು ತಯಾರಿಸುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆ ಕಳೆಗಟ್ಟುತ್ತಿತ್ತು. 10 ಕೆಜಿ ತೂಕದ ದೊಡ್ಡದೊಡ್ಡ ಕೇಕ್ಗಳನ್ನು ತಯಾರಿಸುತ್ತಿದ್ದರು.