ಕರ್ನಾಟಕ

karnataka

ETV Bharat / state

ಗಂಗಾವತಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಿಎಂ ಚೆನ್ನಾಗಿ ಸ್ಪಂದಿಸಿದ್ದಾರೆ: ಜಿ ಜನಾರ್ದನರೆಡ್ಡಿ

ರಾಜ್ಯದಲ್ಲಿ ಹದಿನಾಲ್ಕು ಬಾರಿ ದಾಖಲೆಯ ಬಜೆಟ್​ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಯಾವ ಯೋಜನೆಗೆ ಎಲ್ಲಿಂದ, ಹೇಗೆ? ಹಣ ಹೊಂದಿಸಬೇಕು ಎಂಬ ಬಗ್ಗೆ ಮಾಹಿತಿ ಇದೆ ಎಂದು ಶಾಸಕ ಜಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

By

Published : Aug 2, 2023, 7:20 PM IST

ಶಾಸಕ ಜಿ ಜನಾರ್ಧನ ರೆಡ್ಡಿ
ಶಾಸಕ ಜಿ ಜನಾರ್ಧನ ರೆಡ್ಡಿ

ಶಾಸಕ ಜಿ ಜನಾರ್ದನ ರೆಡ್ಡಿ

ಗಂಗಾವತಿ(ಕೊಪ್ಪಳ):ಗಂಗಾವತಿ ಕ್ಷೇತ್ರದ ಅಭಿವೃದ್ಧಿಯ ಪರವಾಗಿ ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತನಾಡಿದಾಗ, ಅವರು ಚೆನ್ನಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಜಿ ಜನಾರ್ದನರೆಡ್ಡಿ ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯ ವಿಚಾರದ ಬಗ್ಗೆ ಯಾವುದೇ ತೊಂದರೆ ಇಲ್ಲ. ಏಕೆಂದರೆ ಐದು ಯೋಜನೆಗಳ ಜಾರಿ ಬಗ್ಗೆ ಏನು ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದು ತಮ್ಮ ಮುಂದೆಯೇ ಇದೆ. ಅಂದರೆ ಎಲ್ಲಿಲ್ಲಿ ಹಣವನ್ನು ಹಂಚಿಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಯೋಜನೆಗಳನ್ನು ಮಾಡಿಕೊಂಡಿದ್ದಾರೆ ಎಂದರು.

ಸರ್ಕಾರದ ಉಚಿತ ಯೋಜನೆಗಳಿಂದ ಕೇವಲ ಆರು ತಿಂಗಳಲ್ಲಿ ರಾಜ್ಯದ ಮೇಲೆ ದೊಡ್ಡ ಆರ್ಥಿಕ ಹೊರೆ ಬೀಳಲಿದ್ದು, ಇದರಿಂದ ಸಮಸ್ಯೆ ಆರಂಭವಾಗಲಿದೆ ಎಂಬ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಸುಮ್ಮನೆ ಮಾತನಾಡಬಾರದು, ಹಲವು ಬಾರಿ ಹಣಕಾಸು ಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯ ಸಮರ್ಥವಾಗಿ ಹಣಕಾಸು ಇಲಾಖೆಯನ್ನು ನಿಭಾಯಿಸಿದ್ದಾರೆ ಎಂದರು.

ಅಲ್ಲದೇ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಹದಿನಾಲ್ಕು ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಯಾವ ಯೋಜನೆಗೆ ಎಲ್ಲಿಂದ ಮತ್ತು ಹೇಗೆ ಹಣ ಹೊಂದಿಸಬೇಕು ಎಂಬ ಎಲ್ಲಾ ಮಾಹಿತಿ ಇದೆ. ನಾನು ಗಂಗಾವತಿ ವಿಧಾನಸಭಾದ ಅಭಿವೃದ್ದಿಯ ಬಗ್ಗೆ ಅವರನ್ನು ಭೇಟಿಯಾಗಿ ಮಾತನಾಡಿದಾಗ, ಉತ್ತಮವಾಗಿ ಸ್ಪಂದಿಸಿದ್ದಾರೆ. ನನಗೆ ಅವರ ಮೇಲೆ ನಂಬಿಕೆ ಇದೆ ಎಂದರು.

ತಿರುಪತಿಗೆ ನಂದಿನಿ ತುಪ್ಪ: ವಿಶ್ವದ ಏಕೈಕ ಅತಿದೊಡ್ಡ ಹಿಂದುಗಳ ಆರಾಧ್ಯ ತಾಣವಾಗಿರುವ ತಿರುಪತಿ ದೇವಸ್ಥಾನಕ್ಕೆ ರಾಜ್ಯದಿಂದ ನಂದಿನಿ ತುಪ್ಪ ಕಳಿಸುವುದೇ ದೊಡ್ಡ ಗೌರವ. ಇಂತಹ ಕೆಲಸದಿಂದ ಹಿಂದಕ್ಕೆ ಸರಿದಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ರೆಡ್ಡಿ ಪ್ರತಿಕ್ರಿಯಿಸಿದರು.

ಪುಣ್ಯ ಕ್ಷೇತ್ರ ತಿರುಪತಿಯ ವಿಚಾರದಲ್ಲಿ ಸರ್ಕಾರ ಯಾಕೆ ಇಂತಹ ನಿರ್ಧಾರ ಕೈಗೊಂಡಿದೆಯೋ ಗೊತ್ತಿಲ್ಲ. ಆದರೆ, ಇದು ತಪ್ಪು. ಭಗವಂತನ ಸೇವೆಗೆ ಕರ್ನಾಟಕ ರಾಜ್ಯದಿಂದ ತುಪ್ಪ ನೀಡುವ ಮೂಲಕ ಹೆಸರು ಬಂದಿದೆ. ನಂದಿನಿ ತುಪ್ಪವನ್ನು ಮತ್ತೆ ತಿರುಪತಿಗೆ ನೀಡುವ ವಿಚಾರದಲ್ಲಿ ಸ್ವತಃ ಸಿದ್ದರಾಮಯ್ಯ ಆಸಕ್ತಿ ವಹಿಸಿ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗುವ ಪ್ರಾಮಾಣಿಕ ಯತ್ನದ ಕೆಲಸ ಮಾಡಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ಒತ್ತಾಯಿಸಿದರು.

ಲೋಕಸಭೆಯ ಅಖಾಡಕ್ಕೆ: ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯಬೇಕು ಎಂಬ ಯೋಜನೆ ಈಗಾಗಲೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೊಂದಿದ್ದು, ಈ ಸಂಬಂಧ ಸೆಪ್ಟಂಬರ್ ಬಳಿಕ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಶಾಸಕ ಜಿ ಜನಾರ್ದರೆಡ್ಡಿ ಹೇಳಿದರು.

ಒಟ್ಟು ಹತ್ತರಿಂದ ಹನ್ನೆರಡು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬ ಉದ್ದೇಶವಿದೆ. ಹೀಗಾಗಿ ಯಾವ ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿಗಳನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಮುಂದಿನ ಸೆಪ್ಟಂಬರ್​ ಬಳಿಕ ಯೋಜನೆ ರೂಪಿಸಲಾಗುವುದು ಎಂದರು.

ಈಗಾಗಲೇ ಲೋಕಸಭಾ ಚುನಾವಣೆಯ ತಯಾರಿ ಮಾಡಿಕೊಳ್ಳುತ್ತಿರುವ ಬಿಜೆಪಿ ನೇತೃತ್ವದಲ್ಲಿನ ಎನ್​ಡಿಎ ಅಥವಾ ಕಾಂಗ್ರೆಸ್ ನೇತೃತ್ವದಲ್ಲಿನ ಇಂಡಿಯಾ ಒಕ್ಕೂಟದಿಂದ ನಿಮಗೆ ಆಹ್ವಾನ ಬಂದಿಲ್ವಾ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಆಹ್ವಾನ ಮಾಡಿದ್ರೂ ನಾನು ಹೋಗೋದಿಲ್ಲ. ನನ್ನ ನಿಲುವು ಯಾವತ್ತಿದ್ದರೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರವಾಗಿ ಇರಲಿದೆ. ಸ್ವತಂತ್ರವಾಗಿದ್ದು, ಜನರ ಪರವಾಗಿ ನಾನು ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:Anjanadri: ₹5 ಸಾವಿರ ಕೋಟಿ ಅನುದಾನದಲ್ಲಿ ಅಂಜನಾದ್ರಿ ಅಭಿವೃದ್ಧಿ- ಶಾಸಕ ಜನಾರ್ದನ ರೆಡ್ಡಿ

ABOUT THE AUTHOR

...view details