ಗಂಗಾವತಿ: ದುಬೈಗೆ ರಫ್ತಾಗಬೇಕಿದ್ದ ನೂರಾರು ಕ್ವಿಂಟಾಲ್ ಆಸ್ಟ್ರೇಲಿಯನ್ ಗ್ರೀನ್ ಬೆರ್ರಿ ಎಂಬ ತಳಿಯ ಪಪ್ಪಾಯ ಹಣ್ಣು ಲಾಕ್ಡೌನ್ ಪರಿಣಾಮದಿಂದ ಸಕಾಲಕ್ಕೆ ರಫ್ತಾಗದೆ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ದುಬೈಗೆ ರಫ್ತಾಗಬೇಕಿದ್ದ ಪಪ್ಪಾಯ ಲಾಕ್ಡೌನ್ ಪರಿಣಾಮ ಬಡವರಿಗೆ ಹಂಚಿಕೆ ತಾಲೂಕಿನ ವೆಂಕಟಗಿರಿ ಕಂದಾಯ ಹೋಬಳಿಯಲ್ಲಿ ರೈತರು ಬೆಳೆದ ಬೆಳೆಯನ್ನು ರಫ್ತು ಮಾಡಲಾಗದೇ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಇದೀಗ ತೋಟದಲ್ಲಿಯೇ ಹಣ್ಣು ಹಾಳಾಗಬಾರದು ಎಂಬ ಉದ್ದೇಶದಿಂದ ರೈತ ವಿಷ್ಣುತೀರ್ಥ ಆದಾಪುರ ಹಣ್ಣನ್ನು ಕಟಾವು ಮಾಡಿಸಿ ಬಡವರಿಗೆ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಉಚಿತವಾಗಿ ಹಂಚುತ್ತಿದ್ದಾರೆ. ಅಲ್ಲದೇ ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ರೋಗಿಗಳಿಗೆ ವಿತರಿಸುತ್ತಿದ್ದಾರೆ.
ಕೊರೊನಾ ವ್ಯಾಧಿ ಎಲ್ಲೆಡೆ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಪಪ್ಪಾಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಪಡೆದುಕೊಳ್ಳಲು ಸಹಾಯಕಾರಿಯಾಗಿದೆ. ಅಲ್ಲದೇ ದೇಹದೊಳಗಿನ ಇತರೆ ಯಾವುದೇ ವೈರಸ್ ಹಾಗೂ ಕೀಟಾಣುಗಳ ವಿರುದ್ಧ ಹೋರಾಡುವ ಗುಣ ಪಪ್ಪಾಯ ಹೊಂದಿದೆ. ಈ ಹಿನ್ನೆಲೆ ಹಣ್ಣನ್ನು ರೋಗಿಗಳು ಹಾಗೂ ಕುಟುಂಬದವರು ಸೇವಿಸಬೇಕು ಎಂದು ಮನವಿ ಮಾಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳು, ನಗರಸಭೆ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಕೊರೊನಾ ವಾರಿಯರ್ಸ್ಗೆ ನೀಡುವ ಉದ್ದೇಶ ಹೊಂದಿದ್ದಾರೆ. 25 ರಿಂದ 30 ಬಾಕ್ಸ್ ಹಣ್ಣನ್ನು ನಿತ್ಯ ಉಚಿತವಾಗಿ ನೀಡಲಾಗುತ್ತಿದೆ. ಆಸಕ್ತರು (ಮೊ: 9844127576) ಸಂಪರ್ಕಿಸಿದರೆ ಅಗತ್ಯವಿದ್ದವರಿಗೆ ಉಚಿತವಾಗಿ ಹಣ್ಣು ನೀಡಲಾಗುವುದು ಎಂದು ವಿಷ್ಣುತೀರ್ಥ ಹೇಳಿದ್ದಾರೆ.