ಗಂಗಾವತಿ: ಚೀನಾದ ಹ್ಯಾಂಗ್ಝೌನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್ ಮಹಿಳೆಯರ ಹೆಪ್ಟಾಥ್ಲಾನ್ 800 ಮೀಟರ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ನಂದಿನಿ ಅಗಸರ ಅವರನ್ನು ಕಾರಟಗಿ ಮತ್ತು ಸಿದ್ದಾಪುರದಲ್ಲಿ ಸನ್ಮಾನಿಸಲಾಗಿದೆ. ಬಳ್ಳಾರಿ ಜಿಲ್ಲೆಯವರಾದ ನಂದಿನಿ ಅವರು ಕಾರಟಗಿಗೆ ಭೇಟಿ ನೀಡಿದ ವೇಳೆ ಗ್ರೀನ್ಸ್ಪೋಟ್ಸರ್ಸ್ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗೌರವಿಸಲಾಯಿತು. ನಂದಿನಿ ಅವರ ತಾಯಿ ಅಯ್ಯಮ್ಮಳರ ತವರು ಮನೆ ಕಾರಟಗಿ. ಹೀಗಾಗಿ ತಂದೆ-ತಾಯಿಯೊಂದಿಗೆ ಕಾರಟಗಿಯ ತಾತನ ಮನೆ ಹುಲುಗಪ್ಪ ಅಗಸರ ಅವರ ಮನೆಗೆ ಬಂದಿದ್ದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ನಂದಿನಿ, ನನ್ನನ್ನು ಕಾರಟಗಿ ಮೊಮ್ಮಗಳು ಎಂದು ತಾವೆಲ್ಲ ಗುರುತಿಸಿ ಸನ್ಮಾನಿಸಿರುವುದು ಖುಷಿಯಾಗಿದೆ. ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಆದರೆ ಅವರ ಸಾಧನೆಗೆ ಬಡತನ ಅಡ್ಡಿಯಾಗುತ್ತಿದೆ. ಸಕಾಲಕ್ಕೆ ಸೂಕ್ತ ಪ್ರೋತ್ಸಾಹ ಸಿಗದೇ ಪ್ರತಿಭೆಗಳು ಕಣ್ಮರೆಯಾಗುತ್ತಿವೆ. ಬಡ ಪ್ರತಿಭೆಗಳನ್ನು ಸ್ಥಳೀಯರು ಗುರುತಿಸಬೇಕು. ಸರ್ಕಾರ, ಗ್ರಾಮದ ಜನರು ಪ್ರೋತ್ಸಾಹಿಸುವ ಕೆಲಸ ಮಾಡಿದರೆ ಮಾತ್ರ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತಿದೆ. ಆದರೆ ನಮ್ಮಲ್ಲಿ ಆ ಕೆಲಸವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲೋ ಒಂದಿಷ್ಟು ಮಾಧ್ಯಮಗಳಲ್ಲಿ ಪ್ರತಿಭೆಗಳನ್ನು ಗುರುತಿಸುವಂತ ಕೆಲಸ ಆಗುತ್ತದೆ. ಮಾಧ್ಯಮಗಳಲ್ಲಿ ಗುರುತಿಸಿದ ಪ್ರತಿಭೆಗಳಿಗೂ ತಕ್ಷಣಕ್ಕೆ ಜನ ಸ್ಪಂದಿಸಿ ಅವರಿಗೆ ಸಹಾಯ ಒದಗಿಸುತ್ತಾರೆ. ಆದರೆ ಅದು ತಾತ್ಕಾಲಿಕವಷ್ಟೇ, ಸರ್ಕಾರ ಸಕಾಲಕ್ಕೆ ಬಡ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಮತ್ತು ಶಾಶ್ವತ ನೆರವು ನೀಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.