ಕರ್ನಾಟಕ

karnataka

By

Published : Mar 9, 2022, 10:35 AM IST

ETV Bharat / state

ಗಂಡನ ವೇತನ ಬೇಕು, ಆರೈಕೆ ಬೇಡ: ಆಸ್ಪತ್ರೆ ಹೊರ ಅವರಣದಲ್ಲಿ ನರಕಯಾತನೆ ಅನುಭವಿಸುತ್ತಿರುವ ಸರ್ಕಾರಿ ನೌಕರ

ಕುಷ್ಟಗಿ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ನೌಕರನ ಕಾಲು ಗ್ಯಾಂಗ್ರೀನ್​ನಿಂದ ಕೊಳೆಯುತ್ತಿದ್ದು, ಆಸ್ಪತ್ರೆಯ ಹೊರ ಆವರಣದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇವರಿಗೆ ಹೆಂಡತಿ ಹಾಗೂ ಮಕ್ಕಳಿದ್ದು, ಗಂಡನ ವೇತನ ಬೇಕು, ಆದರೆ ಆರೈಕೆ ಬೇಡವಾಗಿದೆ.

ಆಸ್ಪತ್ರೆ ಹೊರ ಅವರಣದಲ್ಲಿ ನರಕಯಾತನೆ ಅನುಭವಿಸುತ್ತಿರುವ ಸರ್ಕಾರಿ ನೌಕರ
ಆಸ್ಪತ್ರೆ ಹೊರ ಅವರಣದಲ್ಲಿ ನರಕಯಾತನೆ ಅನುಭವಿಸುತ್ತಿರುವ ಸರ್ಕಾರಿ ನೌಕರ

ಕುಷ್ಟಗಿ: ಕುಷ್ಟಗಿ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ನೌಕರರೊಬ್ಬರ ಕಾಲು ಗ್ಯಾಂಗ್ರೀನ್ ಆಗಿ ಕೊಳೆಯುತ್ತಿದ್ದು, ಆಸ್ಪತ್ರೆಯ ಹೊರ ಅವರಣದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಸರ್ಕಾರಿ‌ ನೌಕರನಾಗಿದ್ದರೂ ಸಹ ವ್ಯಕ್ತಿಯ ಆರೈಕೆಗೆ ಕುಟುಂಬದವರು ಇತ್ತ ಸುಳಿದಿಲ್ಲ.

ಗಂಡ-ಹೆಂಡತಿ ಜಗಳ‌ ಉಂಡು‌ ಮಲಗುವ ತನಕ ಎನ್ನುವ ಗಾದೆ ಮಾತಿದೆ. ಆದರೆ, ಕೊಪ್ಪಳ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಎಸ್ ಡಿ ಸಿ ನೌಕರ ಬಸವರಾಜ್ ಮುಂಡಾಸದ ಬದುಕು ಅಧೋಗತಿಗೆ ಬಂದು ಬಿಟ್ಟಿದೆ. ಹೆಂಡತಿ ಮಕ್ಕಳಿದ್ದರೂ ಸಹ ಅನಾಥ‌ನಾಗಿ ಜೀವನ ಕಳೆಯುತ್ತಿದ್ದಾರೆ.

ಆಸ್ಪತ್ರೆ ಹೊರ ಆವರಣದಲ್ಲಿ ನರಕಯಾತನೆ ಅನುಭವಿಸುತ್ತಿರುವ ಸರ್ಕಾರಿ ನೌಕರ

ಗದಗ ಜಿಲ್ಲೆಯ ಪೇಟಾಲೂರು ಬಸವರಾಜ್ ಅವರ ಸ್ವಗ್ರಾಮ. ಪತ್ನಿ‌ ಅದೇ ಊರಲ್ಲಿ ಇದ್ದು, ಇಬ್ಬರು ಹೆಣ್ಣು ಮಕ್ಕಳು ಗದಗದಲ್ಲಿ ಗಂಡನ ಮನೆಯಲ್ಲಿದ್ದಾರೆ. ನೌಕರ ಬಸವರಾಜ್ ಕುಡಿತದ ಚಟಕ್ಕೆ ಒಳಗಾಗಿ ಕುಟುಂಬದಿಂದ ಸಂಬಂಧ ಕಡಿದುಕೊಂಡು ಅದೆಷ್ಟೋ ದಿನಗಳಾಗಿವೆ. ಪ್ರತಿ ತಿಂಗಳ‌ 40 ಸಾವಿರ ರೂ. ವೇತನ ಪತ್ನಿಯ ಕೈ ಸೇರುತ್ತಿದ್ದು, ಇವರ ಸಿಡುಕಿನ ವರ್ತನೆಗೆ ಬೇಸತ್ತು ಹೆಂಡತಿ ಇವರ ಕಡೆ ತಿರುಗಿಯೂ ನೋಡಿಲ್ಲ.

ಶುಗರ್ ಕಾಯಿಲೆಯಿಂದ ಬಳಲುತ್ತಿದ್ದ ಬಸವರಾಜ್ ಮುಂಡಾಸದ ಕುಡಿದು ಎಲ್ಲೋ ಬಿದ್ದಿದ್ದರಿಂದ ಕಾಲಿಗೆ ಗಾಯವಾಗಿದೆ. ‌ಸರಿಯಾದ ಆರೈಕೆ ಇಲ್ಲದೇ ಕಾಲಿನ ಗಾಯ ಗ್ಯಾಂಗ್ರೀನ್ ಆಗಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕಾಲು ಕತ್ತರಿಸದೇ ಬೇರೆ ವಿಧಿ ಇಲ್ಲ ವೈದ್ಯರು ತಿಳಿಸಿದ್ದರಿಂದ‌ ಚಿಕಿತ್ಸೆಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ. ನಂತರ ಹುಬ್ಬಳ್ಳಿ ಆಸ್ಪತ್ರೆಯಲ್ಲೂ ಅದೇ ಸಲಹೆ ನೀಡಿದ ಹಿನ್ನೆಲೆಯಲ್ಲಿ ಅಲ್ಲಿಂದ ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಲಿನ ಗಾಯಕ್ಕೆ ಹುಳು, ನೊಣಗಳು ಮುತ್ತಿಕೊಂಡಿದ್ದು, ದುರ್ನಾತದೊಂದಿಗೆ ಜೀವಂತ‌ ಶವವಾಗಿ ಬಿದ್ದಿದ್ದಾರೆ.

ಇದೇ ಮೇ 31ಕ್ಕೆ ನಿವೃತ್ತಿಯಾಗಲಿರುವ ಮುಂಡಾಸದ ಅವರಿಗೆ ಇಲ್ಲಿನ ಕ್ರೈಂ ವಿಭಾಗದ ಪಿಎಸ್​ಐ ಮಾನಪ್ಪ ವಾಲ್ಮೀಕಿ ಅವರು ಮಾನವೀಯತೆ ಹಿನ್ನೆಲೆಯಲ್ಲಿ ಬಸವರಾಜ್ ಮಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಆದರೆ, ಅವರು ಕುಷ್ಟಗಿಗೆ ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಬಸವರಾಜ್ ಕೂಡಲೇ ಚಿಕಿತ್ಸೆ ಪಡೆಯಬೇಕು, ಇಲ್ಲವಾದರೆ ಅವರ ಜೀವಕ್ಕೆ ಮುಳುವಾಗಲಿದೆ. ಕಾಲಿನ ಗ್ಯಾಂಗ್ರೀನ್​ಗೆ ಚಿಕಿತ್ಸೆ ನೀಡಿದರೆ ಆತ ಆರೋಗ್ಯವಾಗುತ್ತಾನೆ. ಆತನ ಆರೈಕೆಗೆ ಪತ್ನಿ, ಮಕ್ಕಳು ಯಾರು ಮುಂದೆ ಬಂದಿಲ್ಲ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ:ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ ಪತಿ: ರಾಬರ್ಟ್ ವಾದ್ರಾ ಸ್ಪರ್ಧಿಸುವ ಕ್ಷೇತ್ರ ಯಾವುದು?

ABOUT THE AUTHOR

...view details