ಕರ್ನಾಟಕ

karnataka

By

Published : Apr 19, 2023, 6:12 PM IST

Updated : Apr 19, 2023, 6:20 PM IST

ETV Bharat / state

ಕನಕಗಿರಿ, ಗಂಗಾವತಿಯಲ್ಲಿ ಒಂದೇ ದಿನ 14 ನಾಮಪತ್ರ ಸಲ್ಲಿಕೆ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಗಂಗಾವತಿ ಮತ್ತು ಕನಕಗಿರಿಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

14-candidates-submitted-nomination-in-gangavathi-and-kanakagiri
ಕನಕಗಿರಿ, ಗಂಗಾವತಿಯಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ : ಒಂದೇ ದಿನ 14 ನಾಮಪತ್ರ ಸಲ್ಲಿಕೆ

ರೆಡ್ಡಿ ವಿರುದ್ಧ ಅನ್ಸಾರಿ ವಾಗ್ದಾಳಿ

ಗಂಗಾವತಿ (ಕೊಪ್ಪಳ): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಮುಂದುವರೆದಿದೆ. ನಾಮಪತ್ರ ಸಲ್ಲಿಕೆಗೆ ನಾಳೆ ಅಂತಿಮ ದಿನವಾಗಿದ್ದರೂ ಇಂದು ವಿವಿಧ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಕನಕಗಿರಿ ಮತ್ತು ಗಂಗಾವತಿಯಲ್ಲಿ ಒಂದೇ ದಿನ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಗುರುವಾರ ಅಮಾವಾಸ್ಯೆ ಇರುವ ಕಾರಣ ಅಮಂಗಳ ಎಂದು ಬುಧವಾರವೇ ಹೆಚ್ಚಿನ ಪ್ರಮಾಣದಲ್ಲಿ ನಾಮಪತ್ರ ಸಲ್ಲಿಕೆ ಆಗಿದೆ.

ಕನಕಗಿರಿಯಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ: ಮೀಸಲು ವಿಧಾನಸಭಾ ಕ್ಷೇತ್ರವಾದ ಕನಕಗಿರಿದಿಂದ ಬಿಜೆಪಿ ಅಭ್ಯರ್ಥಿ ಬಸವರಾಜ ದಢೇಸುಗೂರು ನಾಮಪತ್ರ ಸಲ್ಲಿಕೆ ಮಾಡಿದರು. ಇಂದು ಬೆಳಿಗ್ಗೆ ತಾಲ್ಲೂಕು ಕಚೇರಿಗೆ ಪತ್ನಿ ಹಾಗೂ ಪಕ್ಷದ ಮುಖಂಡರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಕನಕಗಿರಿಯ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಸಂಸದ ಕರಡಿ ಸಂಗಣ್ಣ ಇವರಿಗೆ ಸಾಥ್ ನೀಡಿದರು. ಇದರ ಜೊತೆಗೆ ಕೆಆರ್​​ಪಿಪಿ ಪಕ್ಷದಿಂದ ಡಾ. ಚಾರುಲ್ ವೆಂಕಟರಮಣ ರೆಡ್ಡಿ ನಾಮಪತ್ರ ಸಲ್ಲಿಕೆ ಮಾಡಿದರು.

ಗಂಗಾವತಿಯಲ್ಲಿ ನಾಮಪತ್ರ ಸಲ್ಲಿಕೆ: ಗಂಗಾವತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಸೋಮವಾರವೇ ಸಾಂಕೇತಿಕ ನಾಮಪತ್ರ ಸಲ್ಲಿಸಿದ್ದ ಪರಣ್ಣ, ಇಂದು ಬೃಹತ್​ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮುನವಳ್ಳಿಗೆ ಕುಟುಂಬ ಸದಸ್ಯರು, ಪಕ್ಷದ ನಾಯಕರು, ಇತರ ಸಮುದಾಯದ ಮುಖಂಡರು ಸಾಥ್ ನೀಡಿದರು.

ಗಂಗಾವತಿಯಿಂದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಕೊಪ್ಪಳ ರಸ್ತೆಯಲ್ಲಿರುವ ತಮ್ಮ ನಿವಾಸದಿಂದ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಅನ್ಸಾರಿ, ಗಾಂಧಿ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು.

ಗಂಗಾವತಿಯಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಬಿಎನ್ಎಸ್ ಪ್ರಸಾದ್, ಮೊಹಮ್ಮದ್ ಸಾಧಿಕ್ ಆಲಂ, ಸಂಗಮೇಶ ಸುಗ್ರೀವಾ, ಚಕ್ರವರ್ತಿ ನಾಯಕ್ ನಾಮಪತ್ರ ಸಲ್ಲಿಕೆ ಮಾಡಿದರು. ಆಮ್ ಆದ್ಮಿ ಪಕ್ಷದಿಂದ ಶರಣಪ್ಪ ಸಜ್ಜಿಹೊಲ, ಬಿಎಸ್ಪಿಯಿಂದ ಶಂಕರ್ ಸಿದ್ದಾಪುರ ನಾಮಪತ್ರ ಸಲ್ಲಿಕೆ ಮಾಡಿದರು. ಕನಕಗಿರಿಯಿಂದ ಸಿಪಿಐಎಂನಿಂದ ಕೆಂಚಪ್ಪ, ಪಕ್ಷೇತರ ಅಭ್ಯರ್ಥಿಯಾಗಿ ಬಸವರಾಜ ಮ್ಯಾಗಳಮನಿ ನಾಮಪತ್ರ ಸಲ್ಲಿಸಿದರು. ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ರೆಡ್ಡಿ ವಿರುದ್ಧ ಅನ್ಸಾರಿ ವಾಗ್ದಾಳಿ: ಕಳ್ಳರ ಸಾಲಿನಲ್ಲಿರುವ ಮತ್ತು ಜೈಲಿಗೆ ಹೋಗಿ ಬಂದಿರುವ ವ್ಯಕ್ತಿಗಳಿಂದ ಗಂಗಾವತಿ ಜನರು ಪಾಠ ಕಲಿಯುವ ಅಗತ್ಯವಿಲ್ಲ. ಹೊರಗಿನಿಂದ ಬಂದವರನ್ನು ಗಂಗಾವತಿಯ ಜನ ನಂಬಿದರೆ ಅಲ್ಲಿ ಲೂಟಿ ಮಾಡಿದಂತೆ ಇಲ್ಲಿಯೂ ಲೂಟಿ ಮಾಡುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ರೆಡ್ಡಿಯ ವಿರುದ್ಧ ವಾಗ್ದಾಳಿ ನಡೆಸಿದರು.

ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಮೆರವಣಿಗೆಯ ಸಂದರ್ಭ ಗಾಂಧಿವೃತ್ತದಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ರೆಡ್ಡಿ ಮತ್ತು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದರು. ಬಳ್ಳಾರಿಯಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಅಲ್ಲಿಂದ ಗಡಿ ಪಾರಾಗಿದ್ದಾರೆ ಎಂಬ ಕಾರಣಕ್ಕೆ ಇಲ್ಲಿಗೆ ಬಂದು ಜನರನ್ನು ಮರಳು ಮಾಡಲು ಯತ್ನಿಸುತ್ತಿದ್ದಾರೆ. ಜನರು ಯಾವ ಕಾರಣಕ್ಕೆ ವಂಚಕರ ಮಾತಿಗೆ ಬೆಲೆ ಕೊಡಬೇಡಿ ಎಂದು ಹೇಳಿದರು.

ಬಳ್ಳಾರಿಯಲ್ಲಿ ಸರ್ಕಾರಿ ಆಸ್ತಿ ಲೂಟಿ ಮಾಡಿ ಇದೀಗ ಗಂಗಾವತಿಗೆ ಬಂದಿದ್ದಾರೆ. ಅವರಿಂದ ಇಲ್ಲಿ ಮಾಡುವ ಕೆಲಸ ಏನೂ ಇಲ್ಲ. ಬರೀ ಹಣ ಕೊಟ್ಟು ವ್ಯವ್ಯಸ್ಥೆಯನ್ನು ಹಾಳು ಮಾಡುವುದು ಬಿಟ್ಟರೆ ಬೇರೆ ಯಾವ ಕೆಲಸ ಆಗದು ಎಂದು ಜನಾರ್ದನರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಜನಾರ್ದನ ರೆಡ್ಡಿ ಜಾಮೀನು ಷರತ್ತುಗಳನ್ನು ಸಡಿಲಿಸಲು ನಿರಾಕರಿಸಿದ ಸುಪ್ರೀಂಕೋರ್ಟ್..ಬಳ್ಳಾರಿಗೆ ಹೋಗುವ ಆಸೆಗೆ ತಣ್ಣೀರು!

Last Updated : Apr 19, 2023, 6:20 PM IST

ABOUT THE AUTHOR

...view details