ಕರ್ನಾಟಕ

karnataka

By

Published : Dec 12, 2020, 7:24 PM IST

ETV Bharat / state

ದೇಶದ ಮೊದಲ ಐಫೋನ್​ ಕಂಪನಿ ಧ್ವಂಸ: ಕಾರ್ಮಿಕರ ರೋಷಾಗ್ನಿಗೆ ಕಾರಣವೇನು?

ವೇತನ ನೀಡದ ಹಿನ್ನೆಲೆಯಲ್ಲಿ ಕೋಪಗೊಂಡ ಕಾರ್ಮಿಕರು ವಿಸ್ಟ್ರನ್​​ ಕಂಪನಿ‌ ಮೇಲೆ ಕಲ್ಲು ತೂರಾಟ ನಡೆಸಿ ಕಾರುಗಳಿಗೆ ಬೆಂಕಿ ಇಟ್ಟ ಘಟನೆ ನಡೆದಿದೆ. ತೈವಾನ್‌ ಮೂಲದ ವಿಸ್ಟ್ರನ್​​ ಕಂಪನಿಯಲ್ಲಿ ಐಫೋನ್‌ಗಳನ್ನು ತಯಾರಿಸಲಾಗುತ್ತಿದೆ.

the-countrys-first-iphone-company-wreck
ಬೆಂಕಿಗೆ ಆಹುತಿಯಾಗಿರುವ ಕಾರು

ಕೋಲಾರ:ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಿದ ದೇಶದ ಮೊದಲ ಐಫೋನ್​ ಕಂಪನಿಯಾದ ವಿಸ್ಟ್ರಾನ್ ತನ್ನ ಕಾರ್ಮಿಕರಿಂದಲೇ ಧ್ವಂಸಕ್ಕೆ ಒಳಗಾಗಿದೆ. ಮೂರು ಅಂತಸ್ತುಗಳಲ್ಲಿ ಇರುವ ಕಚೇರಿಗಳು, ಗಾಜುಗಳು, ಕಂಪನಿಗೆ ಸೇರಿದ ಕಾರುಗಳು ಸಂಪೂರ್ಣ ಹಾನಿಯಾಗಿವೆ.

ವೇತನ ತಾರತಮ್ಯ ಹಾಗೂ ವಿಳಂಬ ಧೋರಣೆ ಮತ್ತು ವಿಪರೀತ ಕೆಲಸವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ವಿಸ್ಟ್ರಾನ್ ಕಾರ್ಖಾನೆಯಲ್ಲಿ ಐಫೋನ್​​ನಂತಹ ಪ್ರತಿಷ್ಠಿತ ಮೊಬೈಲ್ ಬಿಡಿ ಭಾಗಗಳನ್ನು ಉತ್ಪಾದಿಸಲಾಗುತ್ತದೆ. ಇಲ್ಲಿ ಎರಡು ಪಾಳಿಗಳಿಂದ 15 ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಾರೆ.

ಕಾರ್ಮಿಕರು ಮನಬಂದಂತೆ ಕಲ್ಲು ತೂರಿದ್ದಾರೆ. ಮುಂಜಾನೆ 4 ಗಂಟೆಯಿಂದಲೇ ಎರಡೂ ಪಾಳಿಗಳ ಕಾರ್ಮಿಕರು ಒಟ್ಟಾಗಿ ಈ ಘಟನೆಯಲ್ಲಿ ಪಾಲ್ಗೊಂಡಿದ್ದರು. ಆವರಣದಲ್ಲಿ ಓಡಾಡಲು ಬಳಸುವ ಎರಡು ವ್ಯಾಗನ್ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಕೈಗೆ ಸಿಕ್ಕಿದ್ದೆಲ್ಲವನ್ನೂ ಪುಡಿಪುಡಿ ಮಾಡಿದ್ದಾರೆ. ಬೆರಳೆಣಿಕೆಯಷ್ಟಿದ್ದ ಸೆಕ್ಯೂರಿಟಿ ಸಿಬ್ಬಂದಿ ಏನೂ ಮಾಡಲು ಸಾಧ್ಯವಾಗದೆ ಮೂಕ‌ ಪ್ರೇಕ್ಷಕರಾಗಿದ್ದರು.

ಇದನ್ನೂ ಓದಿ...ವಿಸ್ಟ್ರನ್‌ ಕಂಪನಿಯಲ್ಲಿ ಕಾರ್ಮಿಕರು ಕೆಂಡಾಮಂಡಲ; ಕಾರುಗಳು, ಪೀಠೋಪಕರಣ ಧ್ವಂಸ

ಕಾರ್ಮಿಕರ ರೋಷಾಗ್ನಿ ಕಾರಣವೇನು?: ಕಾರ್ಖಾನೆಯಲ್ಲಿ ಕಾರ್ಮಿಕರು ಹಗಲು-ರಾತ್ರಿ ಎನ್ನದೆ 12 ಗಂಟೆಗಳ ಕಾಲ ಕೆಲಸ ‌ಮಾಡಬೇಕಿತ್ತು. ಮತ್ತು ಸಮರ್ಪಕ ವೇತನ ನೀಡುತ್ತಿರಲಿಲ್ಲ. ಅಲ್ಲದೆ ವೇತನ ವಿಳಂಬ ಮಾಡಲಾಗುತ್ತಿತ್ತು. ಹೀಗಾಗಿ ಕುಟುಂಬ ಪೋಷಣೆಗೆ ಸಾಕಷ್ಟು ಕಷ್ಟವಾಗುತ್ತಿತ್ತು. ಹೀಗೆ ಹಲವು ಸಮಸ್ಯೆಗಳು ಕಾರ್ಮಿಕರ ರೋಷಾಗ್ನಿಗೆ ಕಾರಣವಾಗಿದೆ. ಅಲ್ಲದೆ ಆಡಳಿತ ಮಂಡಳಿಗೆ ಹಿಂದಿನಿಂದಲೂ ಸಮಸ್ಯೆಗಳನ್ನು ಹೇಳಿಕೊಂಡರೂ ಪ್ರಯೋಜನವಾಗದ ಹಿನ್ನೆಲೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಕಂಪನಿ ಧ್ವಂಸದ ಕುರಿತು ಸಂಸದರ ಅಭಿಪ್ರಾಯ

ಈ ದಾಂಧಲೆಯಲ್ಲಿ ಬೃಹತ್‌ ಕಟ್ಟಡದ ಗಾಜುಗಳು, ಐಫೋನ್, ಲ್ಯಾಪ್​ಟಾಪ್​​ ಸೇರಿದಂತೆ ಕಂಪನಿಯ ಉಪಕರಣಗಳನ್ನು ಒಡೆದು ಹಾಕಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕಾರ್ಮಿಕರ‌ನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿ ಗುಂಪುನ್ನು ಚದುರಿಸಿದ್ದಾರೆ. ಪೊಲೀಸರು ಬರುವಷ್ಟರೊಳಗೆ ಅನಾಹುತ ನಡೆದುಹೋಗಿತ್ತು. ಕಂಪನಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದ್ದು, ಕೃತ್ಯ ಎಸಗಿದವರ ಬಂಧನಕ್ಕೆ ಹತ್ತು ತಂಡಗಳನ್ನು ರಚಿಸಲಾಗಿದೆ. ಎರಡೂ ಪಾಳಿಗಳ ಕಾರ್ಮಿಕರನ್ನು ಕರೆತಂದು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.

ABOUT THE AUTHOR

...view details