ಕೋಲಾರ: ಬರದ ನಾಡೆಂಬ ಹಣೆಪಟ್ಟಿ ಹೊತ್ತಿರುವ ಕೋಲಾರ ಮೀಸಲು ಕ್ಷೇತ್ರದಲ್ಲಿ ಸತತ 7ನೇ ಬಾರಿ ಜಯಭೇರಿ ಬಾರಿಸಿ ದಾಖಲೆಯತ್ತ ಹೆಜ್ಜೆ ಹಾಕುತ್ತಿದ್ದ ಕಾಂಗ್ರೆಸ್ನ ಕೆ.ಹೆಚ್ ಮುನಿಯಪ್ಪಗೆ ಹಿನ್ನೆಡೆಯಾಗಿದೆ. ಈ ಬಾರಿ ಹೊಸ ವ್ಯಕ್ತಿಗೆ ಮಣೆಹಾಕಿದ ಕ್ಷೇತ್ರದ ಮತದಾರರು, ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಅವರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕೈ ಕೋಟೆಯಲ್ಲಿ ಈ ಬಾರಿಯಾದ್ರೂ ಕಮಲ ಅರಳಿಸಿ, ಖಾತೆ ತೆರೆಯಲೇಬೇಕೆಂದು ಪಣತೊಟ್ಟಿದ್ದ ಬಿಎಸ್ವೈ ಅಂಡ್ ಟೀಂ ಸಕ್ಸಸ್ ಆಗಿದೆ.
ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿಗೆ ಜಯ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಅಚ್ಚರಿಯ ಫಲಿತಾಂಶ ದೊರೆತಿದೆ. ಬೆಂಗಳೂರಿ ಬಿಬಿಎಂಪಿ ಕಾರ್ಪೇರೇಟರ್ ಆಗಿದ್ದ ಮುನಿಸ್ವಾಮಿ ಏಳು ಬಾರಿ ಸಂಸದರಾಗಿದ್ದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪರನ್ನು ಮಣಿಸಿ ಕೈ ಪಕ್ಷಕ್ಕೆ ಆಘಾತ ಮೂಡಿಸಿದ್ದಾರೆ. ಸುಮಾರು 1ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದ ಮುನಿಸ್ವಾಮಿ ಗೆಲುವು ದಾಖಲಿಸಿದ್ದಾರೆ.
8ನೇ ಸಲ ಗೆಲುವು ಕಾಣುತ್ತಿದ್ದ ಕೆಎಚ್ ಮುನಿಯಪ್ಪರಿಗೆ ಆಘಾತ
ಹಾಗೆ ನೋಡುವುದಾದರೆ, ಕ್ಷೇತ್ರಕ್ಕೆ ಎಸ್. ಮುನಿಸ್ವಾಮಿ ಹೊಸಬರು. ಈ ಬಾರಿಯೂ ಬಿಜೆಪಿಯಿಂದ ಡಿ. ಎಸ್. ವೀರಯ್ಯನವರೇ ಸ್ಪರ್ಧೆ ನಡೆಸುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದ್ರೆ, ಸಾಕಷ್ಟು ಲೆಕ್ಕಾಚಾರಗಳೊಂದಿಗೆ ಅಂತಿಮವಾಗಿ ಬೆಂಗಳೂರಿನ ಕಾಡುಗೋಡಿ ಕಾರ್ಪೋರೇಟರ್ ಎಸ್.ಮುನಿಸ್ವಾಮಿ ಅವರನ್ನು ಕರೆತಂದು ನಿಲ್ಲಿಸಲಾಗಿತ್ತು. ಈ ಪ್ಲಾನ್ ವರ್ಕ್ಔಟ್ ಆಗೋಕೆ ಕಾರಣಗಳಿವೆ. ಕ್ಷೇತ್ರದಲ್ಲಿ ಮುನಿಯಪ್ಪನವರ ಕಳಪೆ ಸಾಧನೆ ಬಿಜೆಪಿಗೆ ವರದಾನವಾಗಿದೆ. ಮೂರೂವರೆ ದಶಕಗಳಿಂದ ಜಿಲ್ಲೆಯಲ್ಲಿ ಸಂಸದರಾಗಿದ್ದ ಮುನಿಯಪ್ಪ, ಹೇಳಿಕೊಳ್ಳುವಂಥ ಕೆಲಸ ಮಾಡಿಲ್ಲ ಎಂಬ ಆರೋಪಗಳಿವೆ. ಜೊತೆಗೆ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿಲ್ಲ ಅನ್ನೋ ಕೂಗೂ ಜೋರಾಗಿದೆ. ಇನ್ನು, ಬಿಜೆಪಿಯಿಂದ ಕಣಕ್ಕಿಳಿದ ಮುನಿಸ್ವಾಮಿ ಎಡಗೈ ಸಮುದಾಯಕ್ಕೆ ಸೇರಿದವರು. ಇಲ್ಲಿ ಸುಮಾರು 4 ಲಕ್ಷ ಎಡಗೈ ಸಮುದಾಯದವರಿದ್ದು, ಇವರಲ್ಲಿ ಬಹುತೇಕರು ಬಿಜೆಪಿ ಬೆಂಬಲಿಸಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ ಆಡಳಿತದ ವೈಖರಿಯೂ ಕ್ಷೇತ್ರದ ಮತದಾರರಲ್ಲಿ ಮೇಲೆ ಧನಾತ್ಮಕ ಭಾವನೆ ಮೂಡಿಸಿದೆ ಎಂದೇ ಹೇಳಲಾಗುತ್ತಿದೆ. ಅದೇನೇ ಇರಲಿ, ಹೊಸ ಸಂಸದರು ಹುಮ್ಮಸ್ಸಿನಿಂದ ನಮ್ಮ ಕ್ಷೇತ್ರಕ್ಕೆ ಒಳಿತು ಮಾಡಲಿ ಅನ್ನೋದು ಇಲ್ಲಿನ ಜನಸಾಮಾನ್ಯರ ಒತ್ತಾಯ.