ಕೋಲಾರ: ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವುದು ಸಾಮಾನ್ಯ. ಆದರೆ, ಇಲ್ಲಿ ಜಿಲ್ಲಾಡಳಿತವೇ ಬಡ ವಿಕಲಚೇತನನ ಮೇಲೆ ದರ್ಪ ತೋರಿದ ಆರೋಪ ಕೇಳಿ ಬಂದಿದೆ.
ವಿಕಲ ಚೇತನನ ಜಮೀನಿಗೆ ನುಗ್ಗಿ ದರ್ಪ: ಕೋಲಾರ ಕಂದಾಯ ಅಧಿಕಾರಿಗಳ ವಿರುದ್ಧ ಆರೋಪ - ವಿಕಲ ಚೇತನನ ಜಮೀನಿಗೆ ನುಗ್ಗಿ ದರ್ಪ
ಮೂಲ ದಾಖಲೆಗಳು ಇದ್ದರೂ ಸರ್ಕಾರಿ ಜಮೀನೆಂದು ಹೇಳಿ, ಬಡ ವಿಕಲಚೇತನನ ಜಮೀನಿಗೆ ನುಗ್ಗಿ ದರ್ಪ ತೋರಿದ ಆರೋಪ ಕೋಲಾರ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕೇಳಿ ಬಂದಿದೆ.
ಈ ಘಟನೆ ನಡೆದಿರುವುದು ಕೋಲಾರದಲ್ಲಿ. ಹೌದು, ಕಳೆದ ಎರಡು ವರ್ಷಗಳ ಹಿಂದೆ ಕೋಲಾರ ಜಿಲ್ಲಾಡಳಿತ ಭವನವನ್ನು ಕೋಲಾರ ತಾಲೂಕು ಕುಂಬಾರಹಳ್ಳಿ ಬಳಿ ನಿರ್ಮಾಣ ಮಾಡಲಾಯಿತು. ಕುಂಬಾರಹಳ್ಳಿಯ ಜಿಲ್ಲಾಡಳಿತ ಭವನದ ಪಕ್ಕದ ಸರ್ವೆ.ನಂ-46 ರಲ್ಲಿ ಶ್ರೀನಿವಾಸ್ ಎಂಬವರ 1.33 ಎಕರೆ ಜಮೀನು ಇತ್ತು. ಜಿಲ್ಲಾಡಳಿತ ಭವನದ ನಿರ್ಮಾಣದ ವೇಳೆ ಈ ಜಮೀನನ್ನು ಸರ್ಕಾರ ವಶಕ್ಕೆ ಪಡೆದಿತ್ತು. ಇದರ ವಿರುದ್ಧ ಶ್ರೀನಿವಾಸ್ ಅವರು, ಕೋರ್ಟ್ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ಸುಮ್ಮನಾಗಿದ್ದ ಕಂದಾಯ ಇಲಾಖೆ ಅಧಿಕಾರಿಗಳು, ಈಗ ಏಕಾಏಕಿ ಶ್ರೀನಿವಾಸ್ ಅವರ ಜಮೀನಿಗೆ ನುಗ್ಗಿ, ಇದು ಸರ್ಕಾರಿ ಭೂಮಿ ಎಂದು ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶಮಾಡಿದ್ದಾರೆ. ಅಲ್ಲದೆ, ಜಮೀನನ್ನು ಜಿಲ್ಲಾಡಳಿತದ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಭೂಮಿಯನ್ನು ಕಳೆದುಕೊಂಡ ಶ್ರೀನಿವಾಸ್ ಅವರ ಕುಟುಂಬ ದಿಕ್ಕು ತೋಚದಂತಾಗಿದೆ.
ಕುಂಬಾರಹಳ್ಳಿ ಸರ್ವೆ ನಂ-46 ರ 1.33 ಎಕರೆ ಭೂಮಿ ಶ್ರೀನಿವಾಸ್ ಅವರ ತಾತ ಮುನಿಸ್ವಾಮಿ ಎಂಬವರಿಗೆ 1962 ರಲ್ಲಿ ಮಂಜೂರಾಗಿತ್ತು. ನಂತರ ಅದು ಅವರ ದೊಡ್ಡಮ್ಮ ನಾರೆಮ್ಮ ಎಂಬವರ ಹೆಸರಿಗೆ ವರ್ಗಾವಣೆಯಾಗಿ, ನಂತರ ನಾರೆಮ್ಮರಿಂದ ಶ್ರೀನಿವಾಸ್ರ ತಂದೆ ವೆಂಕರಮಣಪ್ಪರಿಗೆ ದಾನವಾಗಿ ಬಂದಿದೆ. ನಂತರ ಸುಮಾರು 40 ವರ್ಷಗಳಿಂದ ಶ್ರೀನಿವಾಸ್ ತಂದೆ, ಅವರ ನಂತರ ಅವರ ಮಕ್ಕಳು ಅನುಭೋಗದಲ್ಲಿದ್ದಾರೆ. ಹೀಗಿರುವಾಗ ಅಧಿಕಾರಿಗಳು ಇದು ಸರ್ವೆ ನಂ-47 ರಲ್ಲಿರುವ ಭೂಮಿ ಎಂದು ಶ್ರೀನಿವಾಸ್ ರವರ ದೂರನ್ನು ಆಲಿಸದೆ ಏಕಾಏಕಿ ವಶಕ್ಕೆ ಪಡೆದಿದ್ದಾರೆ. ಇದು ಇವರಿಗೆ ಸೇರಿದ್ದು ಇವರೇ ಅನುಭೋಗದಲ್ಲಿದ್ದರು ಅನ್ನೋದಕ್ಕೆ, ಶ್ರೀನಿವಾಸ್ರ ತಂದೆ, ತಾಯಿ, ತಾತ ಮುತ್ತಾತರ ಸಮಾಧಿಗಳು ಇದೇ ಭೂಮಿಯಲ್ಲಿ ಇರುವುದು ಸಾಕ್ಷಿಯಾಗಿದೆ. ಜೊತೆಗೆ ಎಲ್ಲಾ ಮೂಲ ದಾಖಲೆಗಳು ಶ್ರೀನಿವಾಸ್ ಅವರ ಬಳಿಯಿವೆ. ಆದರೆ, ಇದ್ಯಾವುದನ್ನೂ ನೋಡದ ಅಧಿಕಾರಿಗಳು, ಈ ಭೂಮಿ ಸರ್ವೆ ನಂ-47 ರಲ್ಲಿ ಬರುತ್ತದ ಎಂದು ಬಡ ವಿಶೇಷ ಚೇತನ ಶ್ರಿನಿವಾಸ್ ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಅವರು ದೂರು ಕೊಡಲಿ ಪರಿಶೀಲನೆ ನಡೆಸುತ್ತೇವೆ ಎನ್ನುತ್ತಿದ್ದಾರೆ.