ಕರ್ನಾಟಕ

karnataka

ETV Bharat / state

ಕೋಲಾರದಲ್ಲಿ 3,097 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಬಾಕಿ; ಪ್ರಭಾವಿಗಳು, ರಾಜಕೀಯ ಮುಖಂಡರ ಪಾಲೇ ಹೆಚ್ಚು!

ಕೋಲಾರ ಜಿಲ್ಲೆಯಲ್ಲಿ ಸುಮಾರು ಮೂರು ಸಾವಿರ ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ತೆರವು ಬಾಕಿ ಉಳಿದಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ತಿಳಿಸಿದ್ದಾರೆ.

By

Published : Jul 19, 2023, 9:08 AM IST

forest land
ಅರಣ್ಯ ಭೂಮಿ ಒತ್ತುವರಿ

ಅರಣ್ಯ ಭೂಮಿ ಒತ್ತುವರಿ ಕುರಿತು ಮಾಹಿತಿ ನೀಡಿದ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ

ಕೋಲಾರ ​: ಇದು ಕಳೆದ ಇಪ್ಪತ್ತು ವರ್ಷಗಳಿಂದ ನಡೆಯುತ್ತಿರುವ ಜಮೀನು ವಿವಾದ. ಈಗಾಗಲೇ ಅರಣ್ಯ ಇಲಾಖೆ ಹಾಗೂ ಪ್ರಭಾವಿ ವ್ಯಕ್ತಿಗಳ ನಡುವೆ ಹಲವು ಹಂತಗಳ ವಿಚಾರಣೆ ಕೂಡ ನಡೆದಿದೆ. ಆದರೆ, ಅರಣ್ಯ ಇಲಾಖೆಗೆ ಸಂಬಂಧಿಸಿದ ಜಮೀನು ಒತ್ತುವರಿ ಮಾತ್ರ ಇನ್ನೂ ತೆರವಾಗಿಲ್ಲ. ಹಾಗಾದ್ರೆ, ಎಷ್ಟು ಎಕರೆ ಅರಣ್ಯ ಭೂಮಿ, ಎಲ್ಲಿ ಒತ್ತುವರಿಯಾಗಿದೆ? ಎಂಬುದರ ವಿವರ ಇಲ್ಲಿದೆ.

ಒತ್ತುವರಿ ಎಲ್ಲೆಲ್ಲಿ?: ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಗಡಿ ಹಂಚಿಕೊಂಡಿರುವ ಕೋಲಾರ ಭಾಗದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಾವಿರಾರು ಎಕರೆ ಭೂಮಿ ಇದೆ. ಜಿಲ್ಲೆಯ 6 ತಾಲೂಕುಗಳ ಪೈಕಿ ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು, ಮಾಲೂರು ತಾಲೂಕಿನ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲಿ ಅತಿ ಹೆಚ್ಚು ಅರಣ್ಯ ಭೂಮಿಯಿದೆ. ಬಂಗಾರಪೇಟೆ, ಮಾಲೂರು ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಅಲ್ಲಿ ಆನೆ, ಜಿಂಕೆ, ಕರಡಿ, ನವಿಲು ಸೇರಿದಂತೆ ಹಲವು ಪ್ರಾಣಿಗಳು ವಾಸವಾಗಿವೆ. ಹೀಗಿರುವಾಗ ಜಿಲ್ಲೆಯಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಪೈಕಿ ಶ್ರೀನಿವಾಸಪುರದಲ್ಲಿ ಅತಿ ಹೆಚ್ಚು ಅಂದರೆ 3,875 ಎರಕೆ ಅರಣ್ಯ ಭೂಮಿ ಒತ್ತುವರಿಯಾಗಿತ್ತು. 2002 ಮತ್ತು 2003ರಲ್ಲಿ ಅರಣ್ಯ ಇಲಾಖೆಯು ಒತ್ತುವರಿದಾರರ ಮೇಲೆ ಪ್ರಕರಣಗಳನ್ನು ದಾಖಲು ಮಾಡಿ ಹಂತಹಂತವಾಗಿ ಜಾಗ ತೆರವು ಮಾಡಿಕೊಂಡು ಬರುತ್ತಿದೆ. ಇದೀಗ 831 ಎಕರೆ ಭೂಮಿ ಒತ್ತುವರಿ ತೆರವು ಮಾಡಲಾಗಿದ್ದು ಇನ್ನೂ ಸರಾಸರಿ 3,044 ಎಕರೆ ಭೂಮಿ ಒತ್ತುವರಿ ತೆರವು ಮಾಡಬೇಕಿದೆ.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹೇಳುವುದೇನು? : ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ, "ಕೋಲಾರ ಜಿಲ್ಲೆಯಾದ್ಯಂತ ಸುಮಾರು 3,097 ಎಕರೆ ಭೂಮಿ ಒತ್ತುವರಿ ತೆರವು ಬಾಕಿ ಇದೆ ಎನ್ನುವುದು ಅರಣ್ಯ ಇಲಾಖೆಯ ಲೆಕ್ಕಾಚಾರ. ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ಪೈಕಿ ಹೆಚ್ಚಿನವರು ಪ್ರಭಾವಿಗಳು, ಹಲವು ರಾಜಕೀಯ ಪಕ್ಷಗಳ ಮುಖಂಡರುಗಳು ಹಾಗೂ ಕೆಲವು ರೈತರಿದ್ದಾರೆ. ಇವರೆಲ್ಲರಿಗೂ ಅರಣ್ಯ ಇಲಾಖೆಯ ಅಧಿನಿಯಮ 64ರ ಅಡಿಯಲ್ಲಿ ನೋಟಿಸ್​ ನೀಡಿ ಪ್ರಕರಣ ದಾಖಲು ಮಾಡಲಾಗಿದೆ. ಸದ್ಯಕ್ಕೆ ಈವರೆಗೆ 450 ಜನ ಒತ್ತುವರಿದಾರರಿದ್ದು ಎಲ್ಲರ ವಿರುದ್ಧವೂ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅರಣ್ಯ ಇಲಾಖೆ ಹಾಗೂ ಅರಣ್ಯ ಭೂಮಿ ಒತ್ತುವರಿದಾರರ ನಡುವಿನ ವಿವಾದ ಸದ್ಯಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ" ಎಂದರು.

2006ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಒಂದು ಕಮಿಟಿ ರಚನೆ ಮಾಡಲಾಗಿತ್ತು. ಕಮಿಟಿ ನೀಡಿದ ವರದಿಯನ್ವಯ ಒತ್ತುವರಿಯಲ್ಲಿ ಭಾಗಿಯಾಗಿದ್ದ 450 ಜನ ಒತ್ತುವರಿದಾರರು ಹಾಗೂ 13 ಜನ ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು.

"2002 ಮತ್ತು 2003 ರಿಂದಲೂ ಒತ್ತುವರಿದಾರರ ವಿರುದ್ಧ ಪ್ರಕಣಗಳು ದಾಖಲಾಗುತ್ತಲೇ ಬಂದಿವೆ. ಅರಣ್ಯ ಇಲಾಖೆ ಬಳಿ ಇರುವ ದಾಖಲಾತಿಗಳ ಪ್ರಕಾರ, ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಸುಳ್ಳು ದಾಖಲಾತಿ ಸೃಷ್ಟಿ ಮಾಡಿ ಭೂಮಿ ಒತ್ತುವರಿ ಮಾಡಿರುವವರ ವಿರುದ್ಧವೂ ಈಗಾಗಲೇ ಕೋಲಾರ ಜಿಲ್ಲೆಯ ವಿವಿಧ ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಹತ್ತಾರು ಎಕರೆ ಭೂಮಿ ಒತ್ತುವರಿ ಮಾಡಿಕೊಂಡು ಸರ್ಕಾರದಿಂದ ಮಂಜೂರಾಗಿದೆ ಎಂದು ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿನಿಯಮ 64ರ ನೈಸರ್ಗಿಕ ನ್ಯಾಯದ ಅಡಿಯಲ್ಲಿ ಒತ್ತುವರಿದಾರರಿಗೆ ಜಾಗ ತೆರವು ಮಾಡಲು ಒಂದು ಅವಕಾಶ ನೀಡಲಾಗಿದೆ. ಅನೇಕರು ನ್ಯಾಯಾಲಯದ ಮೊರೆ ಹೋಗಿದ್ದು, ಅರಣ್ಯ ಇಲಾಖೆ ಒತ್ತುವರಿ ಪ್ರಕರಣಗಳು ತಾಲೂಕು, ಜಿಲ್ಲೆ, ಹಾಗೂ ಹೈಕೋರ್ಟ್​ ಮತ್ತು ಅರಣ್ಯ ಇಲಾಖೆಯ ಕೋರ್ಟ್​ಗಳಲ್ಲಿ ವಿಚಾರಣೆ ಹಂತದಲ್ಲಿವೆ. ಸದ್ಯದಲ್ಲೇ ಅರಣ್ಯ ಭೂಮಿ ಒತ್ತವರಿ ತೆರವು ಮಾಡಲಾಗುತ್ತದೆ" ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದರು.

ಇದನ್ನೂ ಓದಿ :ಗಂಗಾವತಿ ನಗರದ ಮುಖ್ಯರಸ್ತೆಗಳ ಜಾಗ ಒತ್ತುವರಿ : ಶಾಸಕ ಜಿ. ಜನಾರ್ದನ ರೆಡ್ಡಿ

ABOUT THE AUTHOR

...view details