ಬೆಂಗಳೂರು: ಸೂರ್ಯ ಗ್ರಹಣದ ಸಮಯ ಯಾವುದೇ ಶುಭ ಕಾರ್ಯ ಮಾಡಬಾರದು, ಊಟ ಮಾಡಬಾರದು ಅಷ್ಟೇ ಏಕೆ ಮನೆಯಿಂದ ಹೊರಗೆ ಕಾಲಿಡಬಾರದು ಎಂಬ ಮೂಡ ನಂಬಿಕೆ ಜನರಲ್ಲಿದೆ. ಇದನೆಲ್ಲ ತೊಡೆದು ಹಾಕಲು ಇಂದು ಸಂಭವಿಸಿದ ಕಂಕಣ ಸೂರ್ಯಗ್ರಹಣದ ವೇಳೆ ರಾಜ್ಯದ ವಿವಿದೆಡೆ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಅಡುಗೆ ಮಾಡಿ ಊಟ ಮಾಡುವ ಮೂಲಕ ಮೌಢ್ಯತೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.
ಸಂಘ, ಸಂಸ್ಥೆಗಳ ಕಾರ್ಯಕರ್ತರಿಂದ ಉಪಹಾರ ಸೇವಿಸಿ ಮೌಢ್ಯದ ವಿರುದ್ಧ ಜಾಗೃತಿ ಹುಬ್ಬಳ್ಳಿಯಲ್ಲಿ ಜಾಗೃತಿ:ಹುಬ್ಬಳ್ಳಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಗ್ರಹಣ ಹಿನ್ನೆಲೆ ಪಿತಾಂಬರಪ್ಪ ಬೆಳಾರ ನೇತೃತ್ವದಲ್ಲಿ ಅಡುಗೆ ಮಾಡಿ ಊಟ ಮಾಡಲಾಯಿತು. ಈ ಮೂಲಕ ಮೌಢ್ಯ ವಿರೋಧಿ ಜಾಗೃತಿ ಮೂಡಿಸಿದರು.
ಮಡಿಕೇರಿ, ಗೌರಿಬಿದನೂರು, ಬೆಳಗಾವಿಯಲ್ಲಿ ಉಪಹಾರ ಸೇವಿಸಿ ಜಾಗೃತಿ:
ಮಡಿಕೇರಿಯ ಎಫ್ಎಂಸಿ ಕಾಲೇಜು ಮೈದಾನದಲ್ಲಿ ಸಮಾಜಶಾಸ್ತ್ರ ವಿಭಾಗದಿಂದ ವೈಜ್ಞಾನಿಕ ಪ್ರಜ್ಞೆ ಮೂಡಿಸಲಾಯಿತು. ಗ್ರಹಣ ವೀಕ್ಷಿಸಲು ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಟೀ, ಕಾಫಿ, ಬಿಸ್ಕೆಟ್, ಪಲಾವ್, ಮೊಟ್ಟೆ ವಿತರಿಸಿ ಗ್ರಹಣದ ಬಗ್ಗೆ ಇರುವ ಗೊಂದಲಗಳ ಬಗ್ಗೆ ಮಾಹಿತಿ ನೀಡಲಾಯಿತು. ಗ್ರಹಣ ಸಮಯದಲ್ಲಿ ಆಹಾರ ಸೇವಿಸಿದ್ರೆ ತಪ್ಪಿಲ್ಲ, ಜ್ಯೋತಿಷ್ಯಗಳು ಹೇಳುವ ಮಾತಿಗೆ ಕಿವಿಗೊಡಬೇಡಿ ಎಂದು ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ರಂಗಪ್ಪ ಸಲಹೆ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಪಟ್ಟಣದ ಬಿಎಚ್ ರಸ್ತೆಯ ದುರ್ಗಾ ಗ್ರ್ಯಾಂಡ್ ಹೋಟೆಲ್ ಬಳಿ ಪ್ರಗತಿ ಪರ ಚಿಂತಕರು ಶಿಕ್ಷಕರು ಸೂರ್ಯ ಗ್ರಹಣದ ವೇಳೆ ಉಪಹಾರ ಸೇವನೆ ಮಾಡಿ ಜನರಲ್ಲಿ ಅರಿವು ಮೂಡಿಸಿದರು. ಇಡೀ ಪ್ರಪಂಚದ ಹಲವೆಡೆ ಗ್ರಹಣ ಗೋಚರವಾಗಿದ್ದು, ಇದು ಸೃಷ್ಟಿಯ ಒಂದು ಭಾಗ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಮೂಢನಂಬಿಕೆಗಳನ್ನು ಬಿತ್ತರಿಸುವುದು ಸರಿಯಲ್ಲ. ಎಲ್ಲರೂ ಪ್ರತಿನಿತ್ಯದಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ನೇತಾಜಿ ಬ್ರಿಗೇಡ್ ಸದಸ್ಯ ಅಶೋಕ್ ಹಾಗೂ ಶಿಕ್ಷಕರಾದ ಜನಾರ್ದನ್, ನಂಜುಂಡಪ್ಪ, ಗೌರೀಶ್ ಮತ್ತು ವಕೀಲ ಎಚ್ಎಲ್ ವಿ ವೆಂಕಟೇಶ್ ಇದ್ದರು.
ಬೆಳಗಾವಿಯ ನೆಹರು ನಗರದಲ್ಲಿರುವ ಕಚೇರಿಯಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಉಪಹಾರ ಸೇವಿಸಿ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಿದರು. ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.