ಮಡಿಕೇರಿ/ಕೊಡಗು:ಕಿಡಿಗೇಡಿಗಳ ಕೃತ್ಯಕ್ಕೆ ಅಪರೂಪದ ವನ್ಯ ಸಂಪತ್ತು ನಾಶವಾಗಿರುವ ಘಟನೆ ಮಡಿಕೇರಿ ತಾಲೂಕಿನ ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದೆ.
ಅಪರೂಪದ ಅರಣ್ಯ ಸಂಪತ್ತು ಬೆಂಕಿಗಾಹುತಿ: ಕಿಡಿಗೇಡಿಗಳ ಕೃತ್ಯ ಶಂಕೆ - ಕಿಡಿಗೇಡಿಗಳಿಂದ ಬೆಂಕಿ
ಕಿಡಿಗೇಡಿಗಳ ಕೃತ್ಯದಿಂದಾಗಿ ಇಲ್ಲಿನ ಕಾರೇಕೊಪ್ಪ ಗ್ರಾಮದಲ್ಲಿನ ಅರಣ್ಯ ಸಂಪತ್ತು ಸಂಪೂರ್ಣ ನಾಶವಾಗಿದೆ. ಅಧಿಕ ಮೌಲ್ಯದ ಮರಗಳು, ವಿಶೇಷ ವನ್ಯಜೀವಿ ಸಂಪ್ಪತ್ತು ಒಳಗೊಂಡಿದ್ದ ಅರಣ್ಯಕ್ಕೆ ಬೆಂಕಿ ಹೊತ್ತಿಕೊಂಡಿತ್ತು.
![ಅಪರೂಪದ ಅರಣ್ಯ ಸಂಪತ್ತು ಬೆಂಕಿಗಾಹುತಿ: ಕಿಡಿಗೇಡಿಗಳ ಕೃತ್ಯ ಶಂಕೆ Rare forest wealth get fired in kodagu](https://etvbharatimages.akamaized.net/etvbharat/prod-images/768-512-6755509-711-6755509-1586619332044.jpg)
ಬೆಂಕಿ ಬಿದ್ದ ಪರಿಣಾಮ ಕಾರೇಕೊಪ್ಪ ಗ್ರಾಮದ ಸಮೀಪ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿದ್ದ ಬೆಲೆ ಬಾಳುವ ಮರಗಳು, ವನ್ಯ ಜೀವಿಗಳು, ಪಕ್ಷಿಗಳು ಸುಟ್ಟು ಭಸ್ಮವಾಗಿವೆ. ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರಭಾಕರನ್, ಎಸಿಎಫ್ ನೆಹರು, ಆರ್ಎಫ್ಒ ಶಮಾ ಘಟನಾ ಸ್ಥಳದಲ್ಲಿದ್ದು, ಸೋಮವಾರಪೇಟೆ, ಕುಶಾಲನಗರ ಹಾಗೂ ಮಡಿಕೇರಿ ವಿಭಾಗದ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಕಾಳ್ಗಿಚ್ಚಿನಿಂದ ಅರಣ್ಯಕ್ಕೆ ಬೆಂಕಿ ಬೀಳದಂತೆ ಅರಣ್ಯ ಇಲಾಖೆಯಿಂದ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೀಗಿದ್ದರೂ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿರುವ ಅನುಮಾನ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.