ಮಡಿಕೇರಿ:ಕಾವೇರಿ ತವರು ಕೊಡಗಿನಲ್ಲಿ ಉತ್ತಮವಾಗಿ ಮಳೆಬಿದ್ರೆ ಮಾತ್ರ ಕಾವೇರಿ ಒಡಲು ಸುಭೀಕ್ಷವಾಗಿರುತ್ತೆ. ಆದರೆ, ಕಾವೇರಿ ಉಗಮಸ್ಥಾನ ಜಿಲ್ಲೆಯಲ್ಲಿ ಮಾತ್ರ ಮಳೆ ಅಂದ್ರೆ ಭಯಪಡುವ ಸ್ಥಿತಿಗೆ ತಲುಪಿದೆ. ಹೀಗಾಗಿ, ಮಳೆಯಿಂದ ಯಾವುದೇ ತೊಂದರೆಯಾಗದಂತೆ ವರುಣದೇವನಿಗೆ ಸ್ಥಳೀಯರು ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಪುಲಿಕಾನ ಉತ್ಸವ ಮೂಲಕ ಶಾಂತಿ ಪೂಜೆ ಮಾಡಿ, ದೇವರೇ ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸಿದ್ದಾರೆ.
ಕೊಡಗಿನಲ್ಲಿ ಪ್ರತಿವರ್ಷ ಮಳೆಯಿಂದ ಅನಾಹುತಗಳು ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಭಾಗಮಂಡಲದ ಭಗಂಢೇಶ್ವರನಿಗೆ ಉತ್ಸವದ ಶಾಂತಿ ಪೂಜೆ ಮಾಡಲಾಗಿದೆ. ಮಳೆಯಿಂದಾಗಿ ಅತಿವೃಷ್ಠಿ, ಅನಾವೃಷ್ಠಿ ಸಂಭವಿಸದಂತೆ ಇಲ್ಲಿನ ಜನರು ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ಈ ವರ್ಷವೂ ಸಾಂಪ್ರದಾಯಕ ವಿಧಿ - ವಿಧಾನಗಳೊಂದಿಗೆ ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಮಾವಾಸ್ಯೆಯಂದು ಪೊಲಿಂಕಾನ ಅರ್ಪಣೆ: ದೇವಾಲಯದ ಅರ್ಚಕರಾದ ರವಿ ಭಟ್ ಹಾಗೂ ಹರೀಶ್ ಭಟ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ -ವಿಧಾನಗಳು ನಡೆದವು. ಕಳೆದ ವರ್ಷದಂತೆ ಈ ವರ್ಷವೂ ಕೂಡ ಸರಳ ಹಾಗೂ ಸಂಪ್ರದಾಯದಂತೆ ಪೂಜೆ ನೆರವೇರಿತ್ತು. ಪ್ರತಿವರ್ಷ ಮಳೆ ಸುರಿದು ತ್ರಿವೇಣಿ ಸಂಗಮ ಭರ್ತಿಯಾದ ನಂತರದ ಅಮಾವಾಸ್ಯೆ ಎಂದು ಪೊಲಿಂಕಾನ ಅಥವಾ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯುತ್ತೆ.
ಪ್ರಕೃತಿ ವಿಕೋಪ ಸಂಭವಿಸದಂತೆ ಪ್ರಾರ್ಥನೆ: ವಾಡಿಕೆ ಮಳೆ ಬಂದು ಕಾವೇರಿ ಜಲಾನಯನ ಭಾಗದ ರೈತರ ಬದುಕು ಹಸನಾಗಬೇಕು. ಜೀವನಾಡಿ ಕಾವೇರಿ ಭರ್ತಿಯಾಗಬೇಕು ಅನ್ನೋ ಉದ್ದೇಶದಿಂದ ಈ ಒಂದು ಉತ್ಸವವನ್ನ ಆಚರಿಸಲಾಗುತ್ತದೆ. ಈ ಭಾರಿಯೂ ಕೊಡಗಿನ ಪ್ರಸಿದ್ಧ ಪುಣ್ಯಕ್ಷೇತ್ರ ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯಲ್ಲಿ ಯಶಸ್ವಿಯಾಗಿ ಪೊಲಿಂಕಾನ ಉತ್ಸವವನ್ನ ನಡೆಸಲಾಯಿತು. ಹೆಚ್ಚು ಮಳೆಯಾಗಿ ಕಳೆದ ಬಾರಿಯಂತೆ ಯಾವುದೇ ಪ್ರಕೃತಿ ವಿಕೋಪ ಸಂಭವಿಸದೇ ಇರಲಿ ಅಂತಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.