ಮಡಿಕೇರಿ: ಕೊಡಗುಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಮತ್ತೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ವರುಣನ ಆರ್ಭಟಕ್ಕೆ ಕೊಡಗಿನ ಮೂಲಕ ಹಾದು ಹೋಗುವ ಕರ್ನಾಟಕ-ಕೇರಳ ಅಂತಾರಾಜ್ಯ ಹೆದ್ದಾರಿಯಲ್ಲಿ ಮಾಕುಟ್ಟ ಬಳಿ ರಸ್ತೆ ಕುಸಿದಿದೆ. ಬಹುತೇಕ ರಾಜ್ಯ ಹೆದ್ದಾರಿ 91( ಕರ್ನಾಟಕ-ಕೇರಳ) ರಸ್ತೆ ಸಂಪರ್ಕ ಕಡಿತಗೊಂಡಿದೆ. ವರುಣನ ಅಬ್ಬರಕ್ಕೆ ವಿರಾಜಪೇಟೆ ತಾಲೂಕಿನ ಮಾಕುಟ್ಟ ಬಳಿ ರಸ್ತೆ ಕುಸಿತ ಕಂಡಿದೆ. ಕಳೆದ ವರ್ಷ ಸುರಿದಿದ್ದ ವರ್ಷಾಧಾರೆಗೆ ಕುಸಿದಿದ್ದ ಜಾಗದಲ್ಲಿ ಮತ್ತೆ ನಿರ್ಮಿಸಿದ್ದ ತಡೆಗೋಡೆ ಸಹಿತ ರಸ್ತೆ ಕುಸಿದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇದರಿಂದ ಕರ್ನಾಟಕ-ಕೇರಳ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿ ಬಂದ್ ಆಗಿದೆ.
ಕೊಡಗಿನಲ್ಲಿ ಕುಸಿದ ರಾಜ್ಯ ಹೆದ್ದಾರಿ ಇದು ಎರಡೂ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಎಂಬುದು ಒಂದೆಡೆಯಾದ್ರೆ, ಈ ರಸ್ತೆ ನೂತನವಾಗಿ ಕಾರ್ಯಾರಂಭ ಆಗಿರುವ ಮಟ್ಟನ್ನೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕದ ಕೊಂಡಿಯಾಗಿದೆ. ರಸ್ತೆಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಗೋಣಿಕೊಪ್ಪ- ಮಾಕುಟ್ಟ ಮೂಲಕ ಪರ್ಯಾಯ ಮಾರ್ಗವಾಗಿ ಕೇರಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಸೂಚಿಸಿದ್ದಾರೆ.
ಘಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ, ತಹಶಿಲ್ದಾರ್ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ತುರ್ತು ಕ್ರಮಗಳನ್ನು ಕೈಗೊಂಡಿದ್ದಾರೆ. ಪೆರಂಬಾಡಿ ಪೊಲೀಸ್ ಸಿಬ್ಬಂದಿ ಚೆಕ್ ಪೋಸ್ಟ್ ಬಂದ್ ಮಾಡಿದ್ದಾರೆ. ಅಲ್ಲದೆ, ಘಟನಾ ಸ್ಥಳಕ್ಕೆ ಖುದ್ದು ಆಗಮಿಸಿ ಪರಿಶೀಲನೆ ನಡೆಸಿರುವ ಜಿಲ್ಲಾಧಿಕಾರಿ ಪ್ರವಾಸಿಗರು ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮೂರು ದಿನಗಳ ಕಾಲ ಸಂಪೂರ್ಣ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸುವಂತೆ ಸುತ್ತೋಲೆ ಆದೇಶಿಸಿದ್ದಾರೆ. ಹಾಗೆಯೇ ಹಾನಿಗೆ ಒಳಗಾಗಿರುವ ರಸ್ತೆಯನ್ನು ಪ್ಲಾಸ್ಟಿಕ್ ಹೋದಿಕೆಯಲ್ಲಿ ಮುಚ್ಚಿ ಸಿಮೆಂಟ್ ಚೀಲಗಳನ್ನು ಸಂಗ್ರಹಿಸಲಾಗುತ್ತಿದೆ.