ಕರ್ನಾಟಕ

karnataka

By

Published : Aug 10, 2020, 5:10 PM IST

Updated : Aug 10, 2020, 6:19 PM IST

ETV Bharat / state

ಬ್ರಹ್ಮಗಿರಿ ಬೆಟ್ಟ ದುರಂತ: ಐದು ದಿನಗಳಾದರೂ ಇಲ್ಲ ಕಣ್ಮರೆಯಾದ ನಾಲ್ಕು ಜನರ ಸುಳಿವು

ಜಿಲ್ಲೆಯಲ್ಲಿ ಮಳೆ ತಣ್ಣಗಾಗಿದೆ. ಪರಿಣಾಮ, ನೀರಿನ ಪ್ರವಾಹವೂ ತಗ್ಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹೇಗಾದರೂ ಮಾಡಿ ಕಣ್ಮರೆಯಾದವರ ಪತ್ತೆಗೆ ತೀವ್ರ ಶೋಧ ನಡೆಸಿವೆ.

Brahmagiri hill collapse
ಬ್ರಹ್ಮಗಿರಿ ಬೆಟ್ಟ ಕುಸಿತ

ಕೊಡಗು (ತಲಕಾವೇರಿ): ಕಳೆದೊಂದು ವಾರದಿಂದ ಅಬ್ಬರಿಸಿದ ಬಿರುಗಾಳಿ ಸಹಿತ ಮಹಾಮಳೆ, ಕಳೆದ ಎರಡು ವರ್ಷಗಳ ಕರಾಳ ಇತಿಹಾಸವನ್ನು ನೆನಪಿಸುವಂತೆ ಮಾಡಿದೆ. ಆಗಸ್ಟ್ 5ರ ರಾತ್ರಿ ತಲಕಾವೇರಿಯ ಸನ್ನಿಧಿಯಲ್ಲಿ ಸಂಭವಿಸಿದ ಅದೊಂದು ದುರ್ಘಟನೆಗೆ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಕಣ್ಮರೆಯಾಗಿದ್ದ ಐವರ ಪೈಕಿ ‌ಒಂದು ಮೃತದೇಹ ಪತ್ತೆಯಾಗಿದೆ. ಆದರೆ ಇನ್ನುಳಿದ ನಾಲ್ವರಿಗೆ ರಕ್ಷಣಾ ಸಿಬ್ಬಂದಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ಬ್ರಹ್ಮಗಿರಿ ಬೆಟ್ಟ ಕುಸಿದು ಐದು ದಿನಗಳಾದರೂ ಪತ್ತೆಯಾಗಿಲ್ಲ ನಾಲ್ವರು: ಕಣ್ಮರೆಯಾದವರಿಗೆ ತೀವ್ರ ಶೋಧ..!

ಈ ಹಿಂದೆ ಕೊಡಗಿನಲ್ಲಿ ಸುರಿಯುತ್ತಿದ್ದ ಮಳೆಯನ್ನೇ ಎಂಜಾಯ್ ಮಾಡಲೆಂದು ಪ್ರವಾಸಿಗರು ಬರುತ್ತಿದ್ದರು.‌ ಇಲ್ಲಿನ ಪ್ರಾಕೃತಿಕ ಶ್ರೀಮಂತಿಕೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿತ್ತು. ಆದರೆ ಅದೇಕೋ ಕಳೆದ ಮೂರು ವರ್ಷಗಳಿಂದ ಇಲ್ಲಿ ಸುರಿಯುತ್ತಿರುವ ಮಳೆ ಪ್ರಾಣ ಹಾಗೂ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುತ್ತಿದೆ. ಜೀವನದಿ ಕಾವೇರಿ ಪ್ರವಾಹದಂತೆ ಉಕ್ಕಿ ಹರಿಯುತ್ತಿದ್ದು, ಎಲ್ಲೆಂದರಲ್ಲಿ ಬೆಟ್ಟ, ಗುಡ್ಡಗಳು ಕುಸಿಯುತ್ತಿರುವುರಿಂದ ಸಹಜವಾಗಿಯೇ ಜಿಲ್ಲೆ ಸುರಕ್ಷಿತವಲ್ಲ ಎನ್ನುವ ಭಾವನೆ ವ್ಯಕ್ತವಾಗುತ್ತಿದೆ. ಈ ವರ್ಷವೂ ತಲಕಾವೇರಿಯ ಅರ್ಚಕರ ಕುಟುಂಬದ ಮೇಲೆ ಬ್ರಹ್ಮಗಿರಿ ಬೆಟ್ಟ ಕುಸಿದಿರುವುದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಮಳೆ ತಾತ್ಕಾಲಿಕವಾಗಿ ತಣ್ಣಗಾಗಿದ್ದು, ನೀರಿನ ಪ್ರವಾಹವೂ ತಗ್ಗಿದೆ. ಇದೇ ಸಮಯದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಣ್ಮರೆಯಾದವರ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ. ಆದರೆ ತಲಕಾವೇರಿ ಎತ್ತರ ಪ್ರದೇಶವಾದ್ದರಿಂದ ಜಿನುಗು ಮಳೆ, ಕೆಸರಿನಿಂದ ಕೂಡಿರುವ ಮಣ್ಣು, ಮತ್ತೊಂದೆಡೆ ಮಂಜು ಮುಸುಕಿದ ಕಾರ್ಯಾಚರಣೆಗೆ ಸ್ವಲ್ಪ ಮಟ್ಟಿಗೆ ಅಡ್ಡಿ ಮಾಡಿದೆ. ತಲಕಾವೇರಿಗೆ ತೆರಳುವ ದಾರಿಯಲ್ಲಿ ಅಲ್ಲಲ್ಲಿ‌ ಬಿದ್ದಿದ್ದ ಬೃಹತ್ ಮರಗಳು ಹಾಗೂ ಮಣ್ಣಿನ ಗುಡ್ಡವನ್ನು ತೆರವು ಮಾಡಿಕೊಂಡು ಶೋಧಕ್ಕೆ ಅಗತ್ಯ ಯಂತ್ರೋಪಕರಣಗಳನ್ನು ದುರ್ಘಟನಾ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಬೋಪಯ್ಯ, ಅಪ್ಪಚ್ಚು ರಂಜನ್ ಸೇರಿದಂತೆ ಅಧಿಕಾರಿಗಳ ದಂಡು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಭಾಗಮಂಡಲ, ತಲಕಾವೇರಿಯಲ್ಲಿ ಸಾಮಾನ್ಯವಾಗಿ ಹೆಚ್ಚು ಮಳೆ ಆಗುತ್ತದೆ. ಅಲ್ಲದೆ ಹಿಂದೆಯೇ ಅರ್ಚಕರ ಮನೆ ಮೇಲ್ಭಾಗದಲ್ಲಿ ಬ್ರಹ್ಮಗಿರಿ ಬೆಟ್ಟದಲ್ಲಿ ಬೃಹತ್ ಬಿರುಕು ಕಾಣಿಸಿಕೊಂಡಿತ್ತು. ಭವಿಷ್ಯದಲ್ಲಿ ಇದೇ ರೀತಿಯ ಅನಾಹುತ ಸಂಭವಿಸಬಹುದು ಎಂಬುದನ್ನು ಅರಿತಿದ್ದ ಜಿಲ್ಲಾಡಳಿತ ನೀವು ಇಲ್ಲಿಂದ ಸುರಕ್ಷಿತವಾದ ಸ್ಥಳಕ್ಕೆ ತೆರಳುವಂತೆ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್​ಗೆ ಮನವಿ ಮಾಡಿತ್ತು. ಆದ್ರೆ‌ ಇನ್ನೆರಡು ದಿನ ಮಳೆಯ ಪ್ರಮಾಣವನ್ನು ನೋಡಿಕೊಂಡು ಮನೆಯಲ್ಲಿದ್ದ ಬೆಳೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಬಳಿಕ ಖಾಲಿ ಮಾಡುವಂತಹ ಆಲೋಚನೆಯಲ್ಲಿ ಇದ್ದರಂತೆ. ಆದರೆ ಅಷ್ಟರಲ್ಲಿ ಇಂಥದ್ದೊಂದು ದುರ್ಘಟನೆ ಸಂಭವಿಸಿದೆ.

ಒಟ್ಟಿನಲ್ಲಿ ಗುಡ್ಡ ಕುಸಿದು ನಾಲ್ಕು ದಿನಗಳು ಕಳೆದಿವೆ. ಮಳೆಯೂ ಬಿಡುವು ಕೊಟ್ಟಿದ್ದು ಜಿಲ್ಲಾಡಳಿತ ಕಣ್ಮರೆ ಆದವರ ಪತ್ತೆಗೆ ಸಾಕಷ್ಟು ಪ್ರಯತ್ನವನ್ನೂ ನಡೆಸುತ್ತಿದೆ. ಇನ್ನು ಸುದ್ದಿ ತಿಳಿದ ತಕ್ಷಣ ವಿದೇಶದಲ್ಲಿ ನಾರಾಯಣ ಆಚಾರ್ ಮಕ್ಕಳು ಬಂದು ತಲುಪಿಸಿದ್ದಾರೆ. ಬಗೆದಷ್ಟೂ ಬೃಹತ್ ಕಲ್ಲು, ಬಂಡೆಗಳ ಮಧ್ಯೆ ರಾಶಿ, ರಾಶಿ ಮಣ್ಣಿನಡಿ ಕಣ್ಮರೆಯಾಗಿರುವವರು ಯಾವಾಗ ಸಿಗುತ್ತಾರೆ? ಎನ್ನುವ ಆತಂಕ ಕುಟುಂಬಸ್ಥರರದ್ದು.

Last Updated : Aug 10, 2020, 6:19 PM IST

ABOUT THE AUTHOR

...view details