ಕರ್ನಾಟಕ

karnataka

By

Published : Aug 6, 2020, 8:15 PM IST

Updated : Aug 6, 2020, 8:21 PM IST

ETV Bharat / state

ತಲಕಾವೇರಿಯಲ್ಲಿ ಭೀಕರ ಭೂಕುಸಿತ: ಪ್ರಧಾನ ಅರ್ಚಕರ ಕುಟುಂಬದ ಐವರು ಕಣ್ಮರೆ

ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆ ಭಾರಿ ಅನಾಹುತವನ್ನೇ ಹೊತ್ತು ತಂದಿದೆ. ಭಾಗಮಂಡಲ, ತಲಕಾವೇರಿ ಸುತ್ತಮುತ್ತ 170 ಮಿ.ಮೀ ಮಳೆ ಸುರಿಯುತ್ತಿದ್ದಂತೆ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಆದ್ರೆ ಇಂದು ಮುಂಜಾನೆ ಬೆಟ್ಟ ಕುಸಿದು ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಮತ್ತು ಅವರ ಕುಟುಂಬದ ಐವರು ಕಣ್ಮರೆಯಾಗಿದ್ದಾರೆ.

bhagamandala-hill-collapse
ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ

ಭಾಗಮಂಡಲ (ಕೊಡಗು): ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ನಲುಗಿ ಹೋಗಿದ್ದ ಕೊಡಗಿಗೆ ಮೂರನೇ ವರ್ಷವೂ ಆಘಾತ ಎದುರಾಗಿದೆ. ಒಂದೆಡೆ ಜಿಲ್ಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದರೆ, ಮತ್ತೊಂದೆಡೆ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಭೀಕರ ಭೂಕುಸಿತವಾಗಿ ಐವರು ಕಣ್ಮರೆ ಆಗಿದ್ದಾರೆ.

ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಕಾವೇರಿ ಉಗಮಸ್ಥಾನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟವೇ ಸಂಪೂರ್ಣ ನಾಮಾವಶೇಷವಾಗುವಂತೆ ಮಾಡಿದೆ. ಭಾಗಮಂಡಲ ತಲಕಾವೇರಿ ಸುತ್ತಮುತ್ತ 170 ಮಿಲಿ ಮೀಟರ್ ಮಳೆ ಸುರಿಯುತ್ತಿದ್ದಂತೆ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಇಂದು ಮುಂಜಾನೆ ಬೆಟ್ಟ ಕುಸಿದು ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಮತ್ತು ಅವರ ಕುಟುಂಬದ ಐವರು ಕಣ್ಮರೆಯಾಗಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಎನ್​ಡಿಆರ್​ಎಫ್ ತಂಡ ಸ್ಥಳಕ್ಕೆ ದೌಡಾಯಿಸಲು ಪ್ರಯತ್ನಿಸಿತ್ತು. ಆದರೆ ಬಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆ ಆಗಿದ್ದರಿಂದ ಆ ಪ್ರದೇಶವನ್ನು ದಾಟಿ ಹೋಗಬೇಕಾಗಿತ್ತು. ಅಷ್ಟೇ ಅಲ್ಲ, ಪ್ರತೀ ಅರ್ಧ ಕಿಲೋ ಮೀಟರ್ ದೂರದಲ್ಲೂ ಭೂಕುಸಿತ ಆಗಿದ್ದರಿಂದ ಯಾವುದೇ ವಾಹನಗಳಿಲ್ಲದೆ ಎನ್​ಡಿಆರ್​ಎಫ್​​ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ನಡೆದೇ ಹೋಗಬೇಕಾಯಿತು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಎಸ್ಪಿ ಕ್ಷಮಾ ಮಿಶ್ರಾ ಕೂಡ ಬಾಗಮಂಡಲದಿಂದ ನಡೆದುಕೊಂಡೇ ಘಟನಾ ಸ್ಥಳ ತಲುಪಬೇಕಾಯಿತು. ವಿಪರ್ಯಾಸವೆಂದರೆ, ಮಳೆ ಆರ್ಭಟ ಮಾತ್ರ ಇನ್ನೂ ನಿಂತಿಲ್ಲ. ಜೊತೆಗೆ ಭಾರಿ ಪ್ರಮಾಣದಲ್ಲಿ ಮಂಜು ಸುತ್ತುವರೆದಿದ್ದು ರಕ್ಷಣಾ ಕಾರ್ಯಚರಣೆಗೆ ತೀವ್ರ ಅಡ್ಡಿ ಎದುರಾಗಿದೆ.

ಕೊಡಗಿನಲ್ಲಿ ಮತ್ತೆ ಪ್ರಾಕೃತಿಕ ವಿಕೋಪ

ಮತ್ತೊಂದೆಡೆ, ಉಕ್ಕಿ ಹರಿಯುತ್ತಿರುವ ಕಾವೇರಿ ಪ್ರವಾಹಕ್ಕೆ ಹತ್ತಾರು ಹಳ್ಳಿಗಳ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನಾಪೋಕ್ಲು ಸಮೀಪದ ಕೊಟ್ಟಮುಡಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಹತ್ತಾರು ಮನೆಗಳು ಮುಳುಗಡೆಯಾಗಿವೆ. ಚೆರಿಯಪರಂಬು ಪೈಸಾರಿಯ 70 ಕ್ಕೂ ಹೆಚ್ಚು ಮನೆಗಳು ಪ್ರವಾಹದಲ್ಲಿ ಮುಳುಗಡೆಯಾಗಿವೆ.

ವಿರಾಜಪೇಟೆ ತಾಲೂಕಿನ ಕರಡಿಗೋಡಿನಲ್ಲೂ ಪ್ರವಾಹದಿಂದಾಗಿ ಹಲವಾರು ಮನೆಗಳು ಮುಳುಗಡೆಯಾಗಿ 14 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಗಡಿಭಾಗ ಕುಶಾಲನಗರದಲ್ಲೂ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳ ಹಲವಾರು ಮನೆಗಳು ಪ್ರವಾಹದ ನೀರಿನಲ್ಲಿ ಮುಳುಗಿವೆ.

ಅಲ್ಲದೆ ಜಿಲ್ಲೆಯಲ್ಲಿ ತೀವ್ರ ಮಳೆಯಾಗುತ್ತಿರುವುದರಿಂದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಇದ್ದ ನಾರಾಯಣ ಆಚಾರ್ ಅವರ ಕುಟುಂಬಕ್ಕೆ ಅಲ್ಲಿಂದ ಸ್ಥಳಾಂತರ ಆಗುವಂತೆ ಹಲವರು ನಿನ್ನೆ ಸಂಜೆಯಷ್ಟೇ ಪರಿಪರಿಯಾಗಿ ಹೇಳಿದ್ದರಂತೆ. ಆದರೆ ತಾವು ಹುಟ್ಟಿ ಬೆಳೆದ ಊರು, ಬಿಟ್ಟು ಹೋಗುವುದು ಹೇಗೆ?, ಏನೂ ಆಗುವುದಿಲ್ಲ ಎಂದು ನಾರಾಯಣ ಆಚಾರ್ ಸುಮ್ಮನಾಗಿದ್ದರಂತೆ.

ಆದರೆ ಇಂದು ಬೆಳಗ್ಗೆ ತೋಟದ ರೈಟರ್ ಒಬ್ಬರು ಅಲ್ಲಿಗೆ ಹೋಗಿ ನೋಡಿದಾಗ ನಾರಾಯಣ ಆಚಾರ್ ಅವರ ಕುಟುಂಬದ ಎರಡು ಮನೆಗಳಷ್ಟೇ ಅಲ್ಲ, ಇಡೀ ಬೆಟ್ಟವೇ ಅಲ್ಲಿಂದ ಕಣ್ಮರೆಯಾಗಿದೆ. ಇದರೊಂದಿಗೆ ಕುಟುಂಬದ ಐವರು ಸೇರಿ 30ಕ್ಕೂ ಹೆಚ್ಚು ಜಾನುವಾರುಗಳು ಮತ್ತು ಎರಡು ಕಾರುಗಳು ನಾಪತ್ತೆಯಾಗಿವೆ.

Last Updated : Aug 6, 2020, 8:21 PM IST

ABOUT THE AUTHOR

...view details