ಕರ್ನಾಟಕ

karnataka

ಕೊಡಗು: ರಾಜಾಸೀಟ್​ ಉದ್ಯಾನದ ಸೆಕ್ಯೂರಿಟಿ ಗಾರ್ಡ್​ ಮೇಲೆ ವ್ಯಾಪಾರಸ್ಥನಿಂದ ಹಲ್ಲೆ

By

Published : Jun 6, 2023, 8:06 AM IST

ಮಡಿಕೇರಿಯ ಪ್ರಸಿದ್ದ ರಾಜಾಸೀಟ್​ ಉದ್ಯಾನದ ಸೆಕ್ಯೂರಿಟಿ ಗಾರ್ಡ್​ ಮೇಲೆ ಅಲ್ಲಿಯ ವ್ಯಾಪಾರಸ್ಥ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಗಾಯಾಳು ಜಯಣ್ಣ
ಗಾಯಾಳು ಜಯಣ್ಣ

ಕೊಡಗು: ಪ್ರವಾಸಿಗರ ಆಕರ್ಷಣೆಯತಾಣವೆಂದೆ ಪ್ರಸಿದ್ಧಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಇತ್ತೀಚೆನ ದಿನಗಳಲ್ಲಿ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲಿಯ ರಾಜಾಸೀಟ್​​ ಉದ್ಯಾನದ ಸೆಕ್ಯೂರಿಟಿ ಗಾರ್ಡ್ ಮೇಲೆ ಸ್ಥಳೀಯ ವ್ಯಾಪಾರಸ್ಥರು ಹಲ್ಲೆ ಮಾಡಿರುವ ಘಟನೆ ಸೋಮವಾರ ಉದ್ಯಾನದ ಮುಂಭಾಗದಲ್ಲಿ ನಡೆದಿದೆ. ರಾಜಾಸೀಟ್​​ ಉದ್ಯಾನದ ಸೆಕ್ಯೂರಿಟಿ ಗಾರ್ಡ್ ಜಯಣ್ಣ ಎಂಬುವವರು ಮೇಲೆ ಕೋಲಿನಿಂದ ಹೊಡೆದು ಹಲ್ಲೆ ನಡೆಸಲಾಗಿದ್ದು, ಗಾಯಾಳು ಜಯಣ್ಣ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಸಂಜೆ ಸುಮಾರಿಗೆ ಜಯಣ್ಣ ಮತ್ತು ಉದ್ಯಾನ ಮುಂಭಾಗದಲ್ಲಿನ ವ್ಯಾಪಾರಸ್ಥ ಜಮ್​ ಶೇದ್​ ನಡುವೆ ಸಣ್ಣ ವಿಚಾರವಾಗಿ ಗಲಾಟೆ ಆರಂಭವಾಗಿದೆ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಇದರಿಂದ ಕೋಪಗೊಂಡ ಜಮ್ ಶದ್ ಏಕಾಏಕಿ ಜಯಣ್ಣರ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ಜೊತೆಗೆ ಹಲ್ಲೆ ತಡೆಯಲು ಬಂದ ಜಯಣ್ಣ ಪತ್ನಿ ಸುಶೀಲಾ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ತೊಟಗಾರಿಕಾ ಅಧಿಕಾರಿಗಳು ಉದ್ಯಾನದ ಮಂಭಾಗದ ಗೇಟ್​ ಬಂದ್ ಮಾಡಿದ್ದಾರೆ. ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೋಲಿನಿಂದ ಹಲ್ಲೆ ಮಾಡುತ್ತಿರುವುದನ್ನು ಕಂಡ ಕೆಲ ಪ್ರವಾಸಿಗರು ಗಾಬರಿಗೊಂಡು ಅಲ್ಲಿಂದ ಹೊರಟು ಹೋಗಿದ್ದಾರೆ. ಈ ರೀತಿಯ ಘಟನೆಗಳು ಪ್ರವಾಸಿ ತಾಣಗಳಿಗೆ ಕಪ್ಪು ಚುಕ್ಕಿಯಾಗಲಿವೆ. ಅಲ್ಲದೇ ಇಂತಹ ಘಟನೆಗಳಿಗೆ ಮರುಕಳಿಸದಂತೆ ಕಡಿವಾಣ ಹಾಕಿ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಪ್ರವಾಸಿಗರು ಆಗ್ರಹಿಸಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಪ್ರವಾಸಿಗರ ಮೇಲೆ ಹಲ್ಲೆ:ಕೆಲ ದಿನಗಳ ಹಿಂದಷ್ಟೇಮಡಿಕೇರಿ ಸಮೀಪದ ಪ್ರವಾಸಿ ಸ್ಥಳ ಅಬ್ಬಿಫಾಲ್ಸ್‌ನಲ್ಲಿ ಸ್ಥಳೀಯರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಕೂಡ ಆಗಿತ್ತು. ಅಬ್ಬಿ ಫಾಲ್ಸ್ ನೋಡಲು ಹೊರ ಜಿಲ್ಲೆಯಿಂದ ಪ್ರವಾಸಿಗರು ಬಂದಿದ್ದರು. ಕಾಫಿ ತೋಟದಲ್ಲಿ ಫೋಟೋ ತೆಗೆಸಿಕೊಳ್ಳಲು ಹೋದ ವೇಳೆ ಸ್ಥಳೀಯರು ದಾರಿಯಲ್ಲಿ ವಾಹನ ನಿಲ್ಲಿಸಿದ ವಿಷಯಕ್ಕೆ ಗಲಾಟೆ ಆರಂಭವಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಕಾರಿನಲ್ಲಿದ್ದ ದೊಣ್ಣೆ ತೆಗೆದು ಪ್ರವಾಸಿಗರ ಹಲ್ಲೆ ಮಾಡಿದ್ದರು.

ಜೊತೆಯಲ್ಲಿ ಮಹಿಳೆಯರಿದ್ದರೂ ಕೂಡ ಲೆಕ್ಕಿಸದೇ ಸ್ಥಳೀಯರು ಹಲ್ಲೆ ಮಾಡಿದ್ದರು ಎಂದು ಪ್ರವಾಸಿಗರು ಆರೋಪಿಸಿದ್ದರು. ಜತೆಗೆ ಸುಂಟಿಕೊಪ್ಪ ಪೊಲೀಸ್​​ ಠಾಣೆಯಲ್ಲಿ ದೂರನ್ನು ನೀಡಿದ್ದರು. ಪ್ರವಾಸಿ ಸ್ಥಳದಲ್ಲಿ ಪ್ರವಾಸಿಗರಿಗೆ ರಕ್ಷಣೆ ಇಲ್ಲದಂತಾಗಿದೆ. ಮಕ್ಕಳ ಮತ್ತು ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಪ್ರವಾಸಿಗರೊಬ್ಬರು ಆರೋಪಿಸಿದ್ದರು.

ಈ ಹಿಂದೆಯೂ ಅಬ್ಬಿ ಫಾಲ್ಸ್​ನಲ್ಲಿ ಗಲಾಟೆ ನಡೆದಿದ್ದವು. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ಪ್ರವಾಸಿಗರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ರಕ್ಷಣೆ ಕೊಡಬೇಕು ಎಂದು ಪ್ರವಾಸಿಗರು ಹೇಳಿದ್ದು ಇದೆ. ಪೊಲೀಸರನ್ನು ನಿಯೋಜಿಸದಿರುವುದೇ ಇದಕ್ಕೆಲ್ಲ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.

ಇದನ್ನೂ ಓದಿ:ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಮೇಲೆ ಹಲ್ಲೆ, ದೂರು ದಾಖಲು

ABOUT THE AUTHOR

...view details