ಕಲಬುರಗಿ : ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆ ಸೇರಿದಂತೆ ಜೇವರ್ಗಿ ತಾಲೂಕಿನ ಹಲವೆಡೆ ಸಾಕಷ್ಟು ಅವಾಂತರ ಸೃಷ್ಟಿಯಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜೇವರ್ಗಿ ತಾಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಮನೆ ಮಾಳಿಗೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿರಾಳ ಬಿ ಗ್ರಾಮದಲ್ಲಿ ನಡೆದಿದೆ.
ಬಸಮ್ಮ ಗಂಡ ಬಸವರಾಜ ಬಳಗಾರ (35) ಮೃತಪಟ್ಟ ಮಹಿಳೆ. ನಿರಂತರವಾಗಿ ಮಳೆ ಸುರಿದ ಪರಿಣಾಮ ಮನೆಯ ಛಾವಣಿ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ. ಮನೆ ಕುಸಿದು ಮೃತಪಟ್ಟ ಬಸಮ್ಮ ಬಳಗಾರ ಅವರು ಕಡು ಬಡವರಾಗಿದ್ದು, ಮೂರು ಜನ ಚಿಕ್ಕ ಮಕ್ಕಳಿದ್ದು, ಕುಟುಂಬಕ್ಕೆ ಸರ್ಕಾರ ಕೂಡಲೇ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಗ್ರಾಮದ ಮುಖಂಡ ಪರಮೇಶ್ವರ ಬಿರಾಳ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕುರನಳ್ಳಿ ಶಾಲೆಯ ಗೋಡೆ ಶಿಥಿಲ-ಆತಂಕದಲ್ಲಿ ಬೋಧನೆ : ಜೇವರ್ಗಿ ತಾಲೂಕಿನ ಕುರನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಆಗಲೋ, ಈಗಲೋ ಎನ್ನುವಂತಾಗಿದೆ. ಶಾಲೆಯ ಕಟ್ಟಡ ಹಳೆಯದಾಗಿದ್ದು, ನಿರಂತರ ಮಳೆಯಿಂದ ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿದೆ. ಮಕ್ಕಳು ಜೀವ ಭಯದಲ್ಲೇ ಅಭ್ಯಾಸ ಮಾಡುವ ಪರಿಸ್ಥಿತಿ ಉಂಟಾಗಿದೆ.
ಪ್ರತಿದಿನ ಶಾಲೆಯ ಛಾವಣಿ ಹಂತ ಹಂತವಾಗಿ ಉದುರಿ ಬೀಳುತ್ತಿದೆ. ಈಗಾಗಲೇ ಮಾಳಿಗೆಯಲ್ಲಿನ ಸಿಮೆಂಟ್ ಪದರದ ಭಾಗ ಮಕ್ಕಳ ತಲೆಯ ಮೇಲೆ ಬಿದ್ದು, ತಲೆಯ ತೂತು ಬಿದ್ದಿವೆ. ಮಳೆ ಬಂದರೆ ಸಾಕು ಶಾಲೆಯ ಆವರಣದಲ್ಲಿ ನೀರು ತುಂಬಿಕೊಳ್ಳುತ್ತದೆ. ಅಲ್ಲದೇ, ತರಗತಿ ಕೋಣೆಗಳಲ್ಲಿ ಪಾದ ಮುಗುಳುವಷ್ಟು ನೀರು ನಿಲ್ಲುತ್ತದೆ. ಶಾಲೆಯ ಸುತ್ತಮುತ್ತ ಸ್ವಚ್ಛತೆ ಇಲ್ಲದೇ ತುಂಬಾ ಗಲೀಜು ವಾತಾವರಣ ಸೃಷ್ಟಿಯಾಗಿದೆ. ಹುಳ ಹುಪ್ಪಟೆಯ ಭಯದಲ್ಲೇ ನಿತ್ಯವೂ ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.