ಕಲಬುರಗಿ: ಇದು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಜನ್ಮತಾಳಿದ ಮಂಡಳಿ. ಆದರೀಗ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಮಂಡಳಿಗೆ ಸಾರಥಿಯೇ ಇಲ್ಲದಂತಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ನೇಮಕವಾಗದ ಕಾರಣ ಕಳೆದೊಂದು ವರ್ಷದಿಂದ ಅಭಿವೃದ್ದಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಳ್ಳುತ್ತಿವೆ. ಬಂದಿರುವ ಅನುದಾನ ಕೂಡ ವಾಪಸ್ ಹೋಗುವ ಆತಂಕ ಎದುರಾಗಿದೆ.
ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆಯುತ್ತಿದ್ದರೂ, ಇದುವರೆಗೆ ಕೆಕೆಆರ್ಡಿಬಿಗೆ ಅಧ್ಯಕ್ಷರನ್ನ ನೇಮಕ ಮಾಡಿಲ್ಲ. ಇದರಿಂದ ಆರು ಜಿಲ್ಲೆಗಳಲ್ಲಿ ಮಂಡಳಿ ಅಡಿ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕಾಮಗಾರಿಗಳ ರೂಪುರೇಷೆಗಳನ್ನು ತಯಾರು ಮಾಡಲು, ಅವುಗಳನ್ನು ಅನುಷ್ಠಾನಕ್ಕೆ ತರಲು ಸಾರಥಿ ಇಲ್ಲದೇ ನನೆಗುದಿಗೆ ಬಿದ್ದಿವೆ. ವರ್ಷಕ್ಕೆ ಕನಿಷ್ಠ ಮೂರ್ನಾಲ್ಕು ಬಾರಿಯಾದರೂ ಮಂಡಳಿಯ ಸಭೆ ಕರೆಯಬೇಕಿ ಎಂಬ ನಿಯಮ ಇದೆ. ಆದರೂ ಸದ್ಯ ಒಂದು ಸಭೆ ನಡೆಸಿಲ್ಲದಿರುವುದು ಈ ಭಾಗದ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.