ಕಲಬುರಗಿ: ಕೊಳವೆ ಬಾವಿಗಳ ಮೂಲಕ ಭೂಮಿಯಿಂದ ನೀರು ಹೊರತೆಗೆದ ರೀತಿಯಲ್ಲಿಯೇ ಭೂಮಿಗೆ ನೀರನ್ನು ರೀಫಿಲ್ ಮಾಡುವ ಅವಶ್ಯಕತೆ ಇದೆ ಎಂದು ತೆಲಂಗಾಣ ರಾಜ್ಯ ನೀರಾವರಿ ಹಾಗೂ ಅಂತರ್ಜಲ ಮಂಡಳಿ ಅಧ್ಯಕ್ಷ ಪ್ರಕಾಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಕಲಬುರಗಿಗೆ ಆಗಮಿಸಿದ ಸಂದರ್ಭ ಮಾತನಾಡಿದ ಪ್ರಕಾಶ್ ರಾವ್, ತೀವ್ರ ಬರದಿಂದಾಗಿ ಎಲ್ಲೆಡೆ ನೀರಿನ ತತ್ವಾರ ಉಂಟಾಗಿದೆ. ನಾವು ಕೊಳವೆ ಬಾವಿ ಹಾಕಿ ನೀರು ಹೊರ ತೆಗೆಯುವುದರ ಕಡೆಗಷ್ಟೇ ಗಮನ ಹರಿಸುತ್ತಿದ್ದೇವೆ. ಆದರೆ ತೆಗೆದ ಮಾದರಿಯಲ್ಲಿ ಭೂಮಿಗೆ ನೀರುಣಿಸುವ ಕೆಲಸ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ತೆಲಂಗಾಣ ರಾಜ್ಯದಲ್ಲಿ ಕೊಳವೆ ಬಾವಿ ಕೊರೆದು ರೀಫಿಲ್ಲಿಂಗ್ ಶಾಪ್ಗಳನ್ನು ಮಾಡುತ್ತಿದ್ದೇವೆ. ರೀಫಿಲ್ಲಿಂಗ್ ಶಾಪ್ಗಳು ಅತ್ಯಂತ ಯಶಸ್ವಿಯಾಗಿವೆ. ಅಂತರ್ಜಲಮಟ್ಟ ಹೆಚ್ಚಳಕ್ಕೂ ನಾಂದಿ ಹಾಡಿವೆ. ಕರ್ನಾಟಕದಲ್ಲಿಯೂ ಈ ಪ್ರಯೋಗ ಮಾಡಿದ್ದಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗುವುದು ನಿಶ್ಚಿತ ಎಂದರು.