ಕರ್ನಾಟಕ

karnataka

ಉದಯನಿಧಿ ಸ್ಟಾಲಿನ್​ರನ್ನ ಮಂತ್ರಿಸ್ಥಾನದಿಂದ ವಜಾಗೊಳಿಸಬೇಕು: ಸಂಸದ ಉಮೇಶ್ ಜಾಧವ್

By ETV Bharat Karnataka Team

Published : Sep 7, 2023, 8:42 PM IST

ಉದಯನಿಧಿ ಸ್ಟಾಲಿನ್ ಅವರು ಸಂವಿಧಾನದ ವಿರುದ್ಧ ಮಾತನಾಡಿದ್ದಾರೆ. ಇದರಿಂದ ದೇಶದಲ್ಲಿ ಗೊಂದಲದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಕಲಬುರಗಿ ಸಂಸದ ಉಮೇಶ್​ ಜಾಧವ್ ತಿಳಿಸಿದ್ದಾರೆ.

ಸಂಸದ ಉಮೇಶ್​ ಜಾಧವ್
ಸಂಸದ ಉಮೇಶ್​ ಜಾಧವ್

ಸಂಸದ ಉಮೇಶ್​ ಜಾಧವ್ ಅವರು ಪ್ರತಿಕ್ರಿಯಿಸಿದ್ದಾರೆ

ಕಲಬುರಗಿ :ಸನಾತನ ಧರ್ಮದ ಬಗ್ಗೆ ತುಚ್ಚವಾಗಿ ಮಾತಾಡಿರೋ ಉದಯನಿಧಿ ಸ್ಟಾಲಿನ್ ಮತ್ತು ರಾಜ್ಯ ಸಚಿವ ಪ್ರಿಯಾಂಕ್​ ಖರ್ಗೆ‌ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕೆಂದು ಕಲಬುರಗಿ ಸಂಸದ ಉಮೇಶ್ ಜಾಧವ್ ಆಗ್ರಹಿಸಿದ್ದಾರೆ.

ಈ‌ ಕುರಿತು ಕಲಬುರಗಿಯಲ್ಲಿ ‌ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಉದಯನಿಧಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಕೆಂಡಾಮಂಡಲರಾದರು. ಸನಾತನ ಧರ್ಮ, ಡೆಂಘಿ, ಮಲೇರಿಯಾ ಇದ್ದಹಾಗೆ, ಇದನ್ನ ಬೇರು ಸಮೇತ ಕಿತ್ತೊಗೆಯಬೇಕು ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಒಬ್ಬ ಸಿಎಂ ಮಗನಾಗಿರುವ ಉದಯನಿಧಿ ಈ ರೀತಿ ಆಘಾತಕಾರಿ ಹೇಳಿಕೆ ಕೊಟ್ಟಿದ್ದಾರೆ. ಸಂವಿಧಾನದ ವಿರುದ್ದ ಮಾತಾಡಿದ್ದಾರೆ. ಇದರಿಂದ ದೇಶದಲ್ಲಿ ಗೊಂದಲದ ಸ್ಥಿತಿ ನಿರ್ಮಾಣಗೊಂಡಿದೆ. ಅವರ ಹೇಳಿಕೆ ನಮಗೆಲ್ಲ ತುಂಬಾ ನೋವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ : ಇದೇ ವೇಳೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆ ಅವರು ಉದಯನಿಧಿ ಅವರ ಹೇಳಿಕೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಬೇರೆ ಬೇರೆ ಪಕ್ಷದವರು ಇಂಡಿಯಾ ಘಟಬಂಧನದವರು ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇಡೀ ಜಗತ್ತಿಗೆ ವೇದ ಕೊಟ್ಟಿದ್ದು ಸನಾತನ ಧರ್ಮ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಧರ್ಮ ಸನಾತನ ಧರ್ಮವಾಗಿದೆ. ಹೀಗಾಗಿ ಸಚಿವ ಪ್ರಿಯಾಂಕ್​ ಖರ್ಗೆ ಅವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಜೊತೆಗೆ ಈ ಇಬ್ಬರು ಮಂತ್ರಿಗಳನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ದೊಡ್ಡ ಖರ್ಗೆ ಸ್ಪಷ್ಟನೆ ನೀಡಲಿ :ಎಐಸಿಸಿ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರು ಇದರ ಬಗ್ಗೆ ಮಾತಾಡಬೇಕು. ಅವರ ನಿಲುವು ಸ್ಪಷ್ಟಪಡಿಸಬೇಕು. ಇಡೀ ಭಾರತೀಯರಿಗೆ ಸನಾತನ ಧರ್ಮದ ಬಗ್ಗೆ ಮಾತಾಡಿರೋದು ನೋವಾಗಿದೆ. ಬೇರೆ ಧರ್ಮ ಬಗ್ಗೆ ಮಾತಾಡಿದ್ರೆ ಇವತ್ತು ಗಲಭೆಯೆ ಸೃಷ್ಟಿಯಾಗುತ್ತಿತ್ತು ಎಂದರು.

ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ರಾಜ್​ಕುಮಾರ್ ಪಾಟೀಲ್​, ಸನಾತನ ಧರ್ಮದ ನಿರ್ಮೂಲನೆ ಬಗ್ಗೆ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬುದೇ ನಮ್ಮ ಮೊದಲ ಬೇಡಿಕೆಯಾಗಿದೆ. ಅವರು ಸಂವಿಧಾನದ ವಿರುದ್ದ ಹೇಳಿಕೆ ನೀಡಿದ್ದಾರೆ. ಹೀಗಾಗಿ, ತಕ್ಷಣ ಸಚಿವ ಸ್ಥಾನದಿಂದ ಅವರನ್ನು ವಜಾ ಮಾಡಬೇಕು. ಅವರನ್ನು ಬೆಂಬಲಿಸಿ ಯಾರಾದರು ಮಾತನಾಡಿದರೆ ಅದು ಕೂಡಾ ಸಂವಿಧಾನದ ವಿರುದ್ಧ ಆಗುತ್ತೆ. ನಾವು ಅವರು ಇವರು ಅಂತಲ್ಲ ಸ್ಟಾಲಿನ್​ ಅನ್ನು ಬೆಂಬಲಿಸಿ ಯಾರೇ ಮಾತನಾಡಿದ್ರು ಕೂಡಾ ಸಂವಿಧಾನದ ವಿರುದ್ಧ ಆಗುತ್ತೆ. ಅಂತವರ ಮೇಲೂ ಕೂಡಾ ಕಾನೂನು ಕ್ರಮ ಜರುಗಿಸಬೇಕು. ಇದು ಭಾರತ ಯಾವತ್ತೂ ಒಂದಾಗಿರಬೇಕು, ಎಲ್ಲರನ್ನೂ ಗೌರವದಿಂದ ನೋಡುವಂತಿರಬೇಕು ಎಂಬುದು ನಮ್ಮ ಆಶಯ ಎಂದಿದ್ದಾರೆ.

ಇದನ್ನೂ ಓದಿ :ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಅತ್ಯಂತ ಪ್ರಚೋದನಕಾರಿಯಾದುದು: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details