ಕಲಬುರಗಿ:ಒಂದು ಕಾಲದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರಮ ಆಪ್ತರು ಎಂದು ಗುರುತಿಸಿಕೊಂಡಿದ್ದ ಮಾಜಿ ಶಾಸಕ ಉಮೇಶ್ ಜಾಧವ್ ವಿರುದ್ಧ ಸಿದ್ದರಾಮಯ್ಯ ತೊಡೆ ತಟ್ಟಲು ಚಿಂಚೋಳಿ ಕ್ಷೇತ್ರಕ್ಕೆ ಬರುತ್ತಿದ್ದು, ಶಿಷ್ಯನನ್ನು ಸೋಲಿಸಲು ಗುರು ಚಿಂಚೋಳಿ ಉಪ ಚುನಾವಣಾ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಎಂಟ್ರಿ ಕೊಡುತ್ತಿದ್ದಾರೆ.
ಚಿಂಚೋಳಿ ಕ್ಷೇತ್ರಕ್ಕೆ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಬರದ ಪ್ರಚಾರ ನಡೆಯುತ್ತಿದೆ. ಎರಡು ಪಕ್ಷದ ಘಟಾನುಘಟಿ ನಾಯಕರ ದಂಡೆ ಚಿಂಚೋಳಿಯತ್ತ ಮುಖ ಮಾಡಿದೆ. ಈಗಾಗಲೇ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಬಿಡಾರ ಹೂಡಿ ಕ್ಷೇತ್ರ ವ್ಯಾಪ್ತಿ ಪ್ರಚಾರ ನಡೆಸಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಆಗಮಿಸಿ ಶಿಷ್ಯನ ವಿರುದ್ಧ ರಾಜಕೀಯ ರಣತಂತ್ರ ರೂಪಿಸಲಿದ್ದಾರೆ.
ನಾಳೆ ಚಿಂಚೋಳಿ ತಾಲೂಕಿಗೆ ಆಗಮಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೊಂಚಾವರಂ, ಕಾಳಗಿ ಸೇರಿದಂತೆ ಇನ್ನೂ ಕೆಲವು ಹಳ್ಳಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಪರವಾಗಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ಒಂದು ದಿನ ಇಲ್ಲಿಯೇ ವಾಸ್ತವ್ಯ ಮಾಡಿ ರಾಜಕೀಯ ತಂತ್ರಗಳನ್ನು ರೂಪಿಸಲಿದ್ದಾರೆ.
ಶತಾಯಗತಾಯ ಮಾಡಿ ಉಮೇಶ್ ಜಾಧವ್ ಪುತ್ರ, ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಸೋಲಿಸಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದ್ದು, ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಲಿದ್ದಾರೆ. ತಮ್ಮ ಕ್ಯಾಬಿನೆಟ್ನಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆ ಕೊಟ್ಟರು ಜಾಧವ್ ತಮ್ಮ ಕೈ ಬಿಟ್ಟು ಬಿಜೆಪಿ ಸೇರಿರುವುದು ಸಿದ್ದರಾಮಯ್ಯ ಅವರಿಗೆ ಸಹಿಸದಂತಾಗಿದ್ದು, ಈ ಹಿನ್ನಲೆ ಈಗಾಗಲೇ ಲೋಕಸಭಾ ಚುನಾವಣೆ ವೇಳೆ ಜಾಧವ್ರನ್ನು ಸೋಲಿಸಲು ತಮ್ಮ ಸಮಾಜಕ್ಕೆ ಕರೆ ಕೊಟ್ಟಿದ್ದರು. ಈಗ ಚಿಂಚೋಳಿ ಉಪ ಚುನಾವಣೆಯಲ್ಲಿ ಜಾಧವ್ ಪುತ್ರ ಅವಿನಾಶ್ರನ್ನು ಸೋಲಿಸುವಂತೆ ಕರೆ ನೀಡಲು ಚಿಂಚೋಳಿ ಬರುತ್ತಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರ ತಂತ್ರಕ್ಕೆ ಬಿಜೆಪಿ ನಾಯಕರು ಪ್ರತಿತಂತ್ರ ರೂಪಿಸುತ್ತಿದ್ದಾರೆ. ವಿ ಸೋಮಣ್ಣ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಬೀಡು ಬಿಟ್ಟು ತಮ್ಮ ಅಭ್ಯರ್ಥಿ ಪರವಾಗಿ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿ ಹೋದ ಮಾಜಿ ಸಿಎಂ ಯಡಿಯೂರಪ್ಪ 12 ನೇ ತಾರೀಕಿನ ನಂತರ ಮತ್ತೊಮ್ಮೆ ಕ್ಷೇತ್ರಕ್ಕೆ ಬರಲಿದ್ದಾರೆ. ಅಲ್ಲದೆ ಶೋಭಾ ಕರಂದ್ಲಾಜೆ ಸೇರಿ ಹಲವರು ನಾಯಕರು ಚಿಂಚೋಳಿ ಕ್ಷೇತ್ರಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ.